ಶೋಭಾ ಅಕ್ಕಿ ಭಿಕ್ಷೆಗಾಗಿ ದಿನವೂ ತೆರಳಲಿ : ಸಚಿವ ಯು.ಟಿ ಖಾದರ್ ವ್ಯಂಗ್ಯ
ಮಂಗಳೂರು, ಆಗಸ್ಟ್ 18: "ಕಲ್ಲಡ್ಕದ ಶಾಲೆಯ ಮಕ್ಕಳಿಗಾಗಿ ಸಂಸದೆ ಶೋಭಾ ಕರಂದ್ಲಾಜೆ ಆರಂಭಿಸಿರುವ ಅಕ್ಕಿ ಭಿಕ್ಷೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿದಿನ ಜೋಳಿಗೆ ಹಾಕಿ ಅವರು ಬೆಳಗ್ಗೆದ್ದು ಹೋದರೂ ಸಂತೋಷ," ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ವ್ಯಂಗ್ಯವಾಡಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಎರಡು ಶಾಲೆಗಳಿಗೆ ಅನುದಾನ ಕಡಿತ ಮಾಡಿರುವುದು ಮುಜರಾಯಿ ಕಾನೂನಿನ ಪ್ರಕಾರವೇ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು .
"ಪ್ರತಿಯೊಂದಕ್ಕೂ ಮುಖ್ಯಮಂತ್ರಿಯವರೇ ಕಾರಣ ಎಂದು ಹೇಳುವುದು ಸರಿಯಲ್ಲ. ಮುಖ್ಯಮಂತ್ರಿಯವರ ಜನಪ್ರಿಯತೆಗೆ ಹೆದರಿ ಈ ರೀತಿಯ ಹೇಳಿಕೆಗಳು ಬರುತ್ತಿವೆ," ಎಂದು ಅವರು ತಿಳಿಸಿದರು.
ಕಲ್ಲಡ್ಕದ ಶಾಲಾ ಮಕ್ಕಳಿಗಾಗಿ ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದ ಅಕ್ಕಿ ಭಿಕ್ಷೆ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಖಾದರ್, "ಅಕ್ಕಿ ಭಿಕ್ಷೆಗೆ ಹೋಗುವುದು ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಜೋಳಿಗೆ ಹಾಕಿ ದಿನಾಲು ಬೆಳಗ್ಗೆದ್ದು ಹೋದರೆ ಸಂತೋಷ. ತನ್ನ ಮನೆಗೆ ಬಂದರೂ ಕೈಲಾದಷ್ಟು ಕೊಡುತ್ತೇನೆ," ಎಂದು ವ್ಯಂಗ್ಯವಾಡಿದರು .
ರಾಜ್ಯದಾದ್ಯಂತ ಇಂದು ಅನಧಿಕೃತ ತೂಕ ಯಂತ್ರದ ಬಳಕೆ ಮಾಡುವವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ ಅವರು, "ಈವರೆಗೆ 394 ಕಡೆ ಮಾಲ್, ಸೂಪರ್ ಮಾರ್ಕೆಟ್, ಸೇರಿದಂತೆ ಅಂಗಡಿಗಳ ಮೇಲೆ ತೂಕ ಮತ್ತು ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜ್ಯಾದ್ಯಂತ ಒಟ್ಟು ಎಪ್ಪತ್ತೊಂದು ಪ್ರಕರಣಗಳನ್ನು ದಾಖಲಿಸಲಾಗಿದೆ," ಎಂದು ಅವರು ಹೇಳಿದರು.
ಚೀನಾ ದೇಶದಲ್ಲಿ ತಯಾರಾಗಿರುವ ಅನಧಿಕೃತ ಹಾಗೂ ಇಲಾಖೆಯ ಮಾನ್ಯತೆ ಇಲ್ಲದ ತೂಕ ಯಂತ್ರಗಳಿಂದ ಮೋಸ ಹೋದ ಪ್ರಕರಣಗಳ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು .