ಅಭಿವೃದ್ಧಿ ಕಾಮಗಾರಿಗಾಗಿ ಜನವರಿ 15ರಿಂದ ಶಿರಾಡಿ ಘಾಟ್ ಬಂದ್
ಮಂಗಳೂರು, ಜನವರಿ 3: ಬಾಕಿ ಉಳಿದಿರುವ ಕಾಮಗಾರಿಗಾಗಿ ಇದೇ ಜನವರಿ 15ರಿಂದ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಬಂದ್ ಆಗಲಿದೆ.
ಮಂಗಳೂರು-ಬೆಂಗಳೂರು ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಜಿಲ್ಲೆಯ ಕೆಂಪುಹೊಳೆ ಗೆಸ್ಟ್ ಹೌಸ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಡಹೊಳೆವರೆಗಿನ 13 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೊಳಿಸಬೇಕಾಗಿದೆ.
ಜನವರಿ 2ನೇ ವಾರದಿಂದ 5 ತಿಂಗಳು ಶಿರಾಡಿ ಘಾಟ್ ರಸ್ತೆ ಬಂದ್
ಈ ಕಾರಣಕ್ಕಾಗಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿದೆ. ಕಾಮಗಾರಿ ವೇಳೆ ಸಣ್ಣ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿ ಬಂದಿತ್ತು. ಆದರೆ ಇದು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಸ್. ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಇದೇ ಜನವರಿ 6ರಂದು ಹಾಸನ ಮತ್ತು ದಕ್ಷಿಣ ಕನ್ನಡ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯನ್ನು ಪಿಡಬ್ಲ್ಯೂಡಿ ಹೆಚ್ಚುವರಿ ಮುಖ್ಯ ಕಾರ್ದರ್ಶಿಗಳು ಕರೆದಿದ್ದು ಈ ಸಭೆಯಲ್ಲಿ ಔಪಚಾರಿಕವಾಗಿ ಘಾಟಿ ರಸ್ತೆ ಮುಚ್ಚುವ ದಿನವನ್ನು ನಿಗದಿಪಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯಲಿರುವುದರಿಂದ ಕಾಂಕ್ರಿಟ್ ಮೆಷೀನ್ ಗಳಿಗೆ ಅಗಲವಾದ ಜಾಗ ಬೇಕಾಗುತ್ತದೆ. ಹೀಗಾಗಿ ಸಣ್ಣ ಪುಟ್ಟ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದಿಲ್ಲ. ಈ ರೀತಿ ಅನುವು ಮಾಡಿಕೊಟ್ಟರೆ ರಸ್ತೆಯ ಗುಣಮಟ್ಟಕ್ಕೆ ಸಮಸ್ಯೆಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕಾಮಗಾರಿ ಅರ್ಧ ಮುಗಿಯುತ್ತಿದ್ದಂತೆ ಗುಂಡ್ಯ ತಿರುವಿನಿಂದ ಕುಕ್ಕೆ ಸುಬ್ರಮಣ್ಯಕ್ಕೆ ತೆರಳುವ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಬೇಕು ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ರಸ್ತೆ ಕಾಮಗಾರಿ ಪ್ರಗತಿಯಾಗುತ್ತಿದ್ದಂತೆ ಸ್ಥಳೀಯ ಬೇಡಿಕೆಯನ್ನು ಮನ್ನಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಕರಾವಳಿಯನ್ನು ಘಟ್ಟದ ಜತೆ ಸಂಪರ್ಕಿಸಲು ಸಂಪಾಜೆ, ಚಾರ್ಮಾಡಿ, ಕುದುರೆಮುಖ, ಆಗುಂಬೆ, ಬಾಳೆಬರೆ (ಹುಲಿಕಲ್), ಕೊಲ್ಲೂರು (ಸಂಪೆಕಟ್ಟೆ), ಭಟ್ಕಳ (ಕೋಗಾರ್) ಮತ್ತು ಹೊನ್ನಾವರ (ಗೇರುಸೊಪ್ಪ) ಘಾಟಿ ರಸ್ತಗೆಳನ್ನು ಬಳಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಓಶಿಯನ್ ಕನ್ ಸ್ಟ್ರಕ್ಟರ್ಸ್ ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು ಮುಂಗಾರು ಆರಂಭವಾಗುವ ಮೊದಲು ಅಂದರೆ 5 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.