ಲಘು ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಮುಕ್ತ
ಮಂಗಳೂರು, ಸೆಪ್ಟೆಂಬರ್ 05 : ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಡೇಂಜರ್ ಝೋನ್ ಇರುವ 11 ಕಡೆ ಪೊಲೀಸ್ ಭದ್ರತೆಯೊಂದಿಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಸೆ.5ರಿಂದ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತ
ಸೆಪ್ಟೆಂಬರ್ 5ರ ಮಧ್ಯಾಹ್ನದಿಂದ ಶಿರಾಡಿ ಘಾಟ್ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಚಾರ್ಮಾಡಿ ಘಾಟ್ನಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಇದ್ದು ವಾಹನ ಸವಾರರಿಗೆ ಅನುಕೂಲವಾಗಲಿದೆ.
ಶಿರಾಡಿ ಘಾಟ್: ತಜ್ಞ ಇಂಜಿನಿಯರ್ಸ್ ಸಿಎಂಗೆ ನೀಡಿದ ವರದಿಯಲ್ಲೇನಿದೆ?
ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಉಪ ವಿಭಾಗಾಧಿಕಾರಿಗಳು ಹಾಗೂ ಹೆದ್ದಾರಿ ಇಲಾಖೆಯ ಹಿರಿಯ ಇಂಜಿನಿಯರ್ಗಳ ಜಂಟಿ ತಂಡ ಸ್ಥಳ ಪರಿಶೀಲಿಸಿತ್ತು. ನಂತರ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಆರಂಭಿಸಲು ಅನುಮತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
ಶಿರಾಡಿ ಘಾಟ್ನಲ್ಲಿ 10 ದಿನದೊಳಗೆ ಲಘು ವಾಹನ ಸಂಚಾರಕ್ಕೆ ಅವಕಾಶ: ರೇವಣ್ಣ
'ವಾಹನ ಸಂಚಾರದ ವೇಳೆ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳೇ ಹೊಣೆ' ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಎಚ್ಚರಿಸಿದ್ದಾರೆ.
ಸಂಪೂರ್ಣ ಸುರಕ್ಷಿತಲ್ಲ
ಶಿರಾಡಿ ಘಾಟ್ನಲ್ಲಿ ಲಘು ವಾಹನ ಸಂಚಾರ ಆರಂಭವಾಗಿದ್ದರೂ ಘಾಟ್ ರಸ್ತೆ ಸಂಪೂರ್ಣವಾಗಿ ಸುರಕ್ಷಿತವಾಗಿಲ್ಲ. ಇನ್ನೂ ಹಲವಾರು ಕಡೆ ತಡೆಗೋಡೆಗಳನ್ನು ನಿರ್ಮಾಣ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
11 ಪ್ರದೇಶಗಳನ್ನು ಡೇಂಜರ್ ಝೋನ್ ಎಂದು ಗುರುತಿಸಲಾಗಿದೆ. ಅಲ್ಲಿ ಪೊಲೀಸ್ ಭದ್ರತೆಯೊಂದಿಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹಾಸನ ಎಸಿ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಪುತ್ತೂರು ಎಸಿ ಕೃಷ್ಣಮೂರ್ತಿ ಸ್ಥಳಗಳನ್ನು ಪರಿಶೀಲಿಸಿ ಸರಕಾರಕ್ಕೆ ವರದಿ ನೀಡಿದ್ದಾರೆ.
ಜನರ ಬೇಡಿಕೆಯಂತೆ ಅವಕಾಶ
ಶಿರಾಡಿ ಘಾಟ್ ರಸ್ತೆಯ ಹಲವು ಕಡೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ, ಹಾಸನ ಮತ್ತು ದಕ್ಷಿಣ ಕನ್ನಡ ಭಾಗದ ಜನರ ಬೇಡಿಕೆಯಂತೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಹಾಸನ ಎಸಿ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದ್ದಾರೆ.
ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿ ಸಿಕ್ಕಿರುವುದರಿಂದ ಚಾರ್ಮಾಡಿ ಘಾಟ್ನಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ. ಶಿರಾಡಿ ಬಂದ್ ಆಗಿದ್ದರಿಂದ ಚಾರ್ಮಾಡಿ ಮೇಲೆ ಭಾರಿ ಒತ್ತಡ ಹೆಚ್ಚಾಗಿತ್ತು.
ಹಾಸನ ಜಿಲ್ಲಾಡಳಿತದಿಂದಲೂ ಒಪ್ಪಿಗೆ
ಸತತ ಮಳೆ ಮತ್ತು ಭೂ ಕುಸಿತದಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಬೆಂಗಳೂರು-ಮಂಗಳೂರು ನಡುವೆ ಪ್ರಯಾಣಿಸುವ ವಾಹನ ಸವಾರರಿಗೆ ತೊಂದರೆಯಾಗಿತ್ತು.
ಹಾಸನ ಜಿಲ್ಲಾಡಳಿತ ಸಹ ಶಿರಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರ ಆರಂಭಿಸಲು ಒಪ್ಪಿಗೆ ನೀಡಿತ್ತು. ದಕ್ಷಿಣ ಕನ್ನಡ ಜಿಲ್ಲಾಡಳಿತವೂ ಇಂದು ಬೆಳಗ್ಗೆ ಒಪ್ಪಿಗೆ ನೀಡಿದ್ದು, ವಾಹನ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದೆ.
ಅಧಿಕಾರಿಗಳ ಪತ್ರ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶಿರಾಡಿ ಘಾಟ್ನಲ್ಲಿ ಲಘು ವಾಹನ ಸಂಚಾರ ಆರಂಭಿಸಬಹುದು ಎಂದು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಪತ್ರವನ್ನು ಆಧರಿಸಿ ವಾಹನ ಸಂಚಾರ ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ವಾಹನ ಸಂಚಾರ ಅನುಮತಿ ನೀಡಲಾಗಿದೆ.