ಶಿರಾಡಿ ಘಾಟ್: ನವೆಂಬರ್ 12 ರಿಂದ ಘನ ವಾಹನ ಸಂಚಾರಕ್ಕೆ ಮುಕ್ತ
ಮಂಗಳೂರು, ನವೆಂಬರ್. 7: ಕಳೆದ ಎರಡು ತಿಂಗಳಿನಿಂದ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದ ಶಿರಾಡಿ ಘಾಟ್ ರಸ್ತೆ ಮತ್ತೆ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಮಂಗಳೂರು - ಬೆಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ ಇದೇ ಬರುವ ನವೆಂಬರ್ 12 ರಂದು ಘನ ವಾಹನಗಳ ಸಾಗಾಟಕ್ಕೆ ತೆರೆದುಕೊಳ್ಳಲಿದೆ.
ಈ ಕುರಿತು ಮಂಗಳೂರಿನಲ್ಲಿ ಸ್ಪಷ್ಟಪಡಿಸಿರುವ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥೀಲ್ ಶಿರಾಡಿ ಘಾಟ್ ದುರಸ್ತಿ ಕಾರ್ಯ ಬಹುತೇಕ ಮುಗಿದಿದ್ದು, ನವೆಂಬರ್ 12ರ ಬಳಿಕ ಘನ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ಶಿರಾಡಿ ಘಾಟ್: ತಜ್ಞ ಇಂಜಿನಿಯರ್ಸ್ ಸಿಎಂಗೆ ನೀಡಿದ ವರದಿಯಲ್ಲೇನಿದೆ?
ಶಿರಾಡಿ ಘಾಟ್ ನಲ್ಲಿ ಘನ ವಾಹನಗಳ ಸಂಚಾರಕ್ಕೆ ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಹಾಸನ ಜಿಲ್ಲೆಯಲ್ಲಿ ಸ್ವಲ್ಪ ಸಮಸ್ಯೆಯಿದೆ. ದೀಪಾವಳಿಯ ಸಂದರ್ಭ ವಾಹನಗಳ ಸಂಚಾರ ಅಧಿಕವಿರುವುದರಿಂದ ಸದ್ಯ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗುಂಡ್ಯ-ಬಿ.ಸಿ.ರೋಡ್ ರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳ್ಳಲು ಎಲ್ ಆಂಡ್ ಟಿ ಕಂಪೆನಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಡುವಿನ ಸಂವಹನದ ಕೊರತೆಯೇ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಈ ಬಗ್ಗೆ ಎನ್ಎಚ್ಎಐ ಅಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದೆ. ವಾರದೊಳಗೆ ಕಾಮಗಾರಿಯನ್ನು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದ ಶಿರಾಡಿ ಘಾಟ್ ರಸ್ತೆ ಅಕ್ಟೋಬರ್ 03 ರಂದು ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ತೆರೆದುಕೊಂಡಿತ್ತು. ಅಕ್ಟೋಬರ್ 3 ರಂದು ಶಿರಾಡಿಘಾಟ್ ನಲ್ಲಿ ಬೆಂಗಳೂರು - ಮಂಗಳೂರು ಸೇರಿದಂತೆ ಇತರ ನಗರಗಳನ್ನು ಸಂಪರ್ಕಿಸುವ ಬಸ್ ಗಳ ಸಂಚಾರ ಆರಂಭವಾಗಿತ್ತು.
ಶಿರಾಡಿ ಘಾಟ್ ನಲ್ಲಿ ಕಾಸಿದ್ದವನೇ ಬಾಸ್, ಡಿಸಿ ಅಲ್ಲ ಅವ್ನ ಅಪ್ಪನಿಗೆ ಹೇಳು
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶಿರಾಡಿಘಾಟ್ ರಸ್ತೆಯ 12 ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿತ್ತು. ಪರಿಣಾಮ ಎಲ್ಲಾ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ಇಲಾಖೆಯ ಇಂಜಿನಿಯರ್ ಗಳು ಹಾಗೂ ಅಧಿಕಾರಿಗಳ ತಂಡದ ಅವಿರತ ಪ್ರಯತ್ನದಿಂದ ರಸ್ತೆ ದುರಸ್ತಿ ಪೂರ್ಣಗೊಂಡಿದೆ. ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಶಿರಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನಗಳಿಗೆ ಅನುಮತಿ ನೀಡಲಾಗಿತ್ತು.
ಇದೀಗ ಎರಡುವರೆ ತಿಂಗಳ ಬಳಿಕ ಶಿರಾಡಿ ಘಾಟ್ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.