ಶರತ್ ಮಡಿವಾಳ ಹತ್ಯೆ, ಆರೋಪಿ ಖಲಂದರ್ ಮನೆಯಲ್ಲಿ ಶೋಧ
ಮಂಗಳೂರು, ಸೆಪ್ಟೆಂಬರ್ 04 : ಆರ್ಎಸ್ಎಸ್ ಕಾರ್ಯಕರ್ತ ಶರತ್ ಹತ್ಯೆ ಪ್ರಕರಣದ ಆರೋಪಿ ಖಲಂದರ್ ಮನೆಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಕುರಾನ್ಗೆ ಪೊಲೀಸರು ಅವಮಾನ ಮಾಡಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸಜಿಪ ಪನೊಲಿಬೈಲ್ ನಲ್ಲಿರುವ ಆರೋಪಿ ಖಲಂದರ್ ಮನೆಯಲ್ಲಿ ಪೊಲೀಸರು ಶೋಧ ಕಾರ್ಯಕ್ಕೆ ಅನುಮತಿ ಪಡೆದು, ಮನೆಯನ್ನು ಶೋಧಿಸಿದ್ದಾರೆ. 'ಮನೆಯ ತಪಾಸಣೆ ವೇಳೆ, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ' ಎಂಬುದು ಕುಟುಂಬದವರ ಆರೋಪ.
ಶರತ್ ಮಡಿವಾಳ ಹತ್ಯೆ ಪ್ರಕರಣ, ಮತ್ತಿಬ್ಬರು ಆರೋಪಿಗಳ ಬಂಧನ
ಖಲಂದರ್ ಮಾಡಿದ ತಪ್ಪಿಗೆ ನಮಗೇಕೆ ತೊಂದರೆ ಕೊಡುತ್ತಿದ್ದೀರಿ? ಎಂದು ಕುಟುಂಬದವರು ಪ್ರಶ್ನಿಸಿದ್ದು, ನಮ್ಮನ್ನು ಹಿಂಸಿಸಿದರೆ ಮನೆಯಲ್ಲಿರುವ ಐವರು ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ ಎಂದು ಬೆದರಿಕೆ ಹಾಕಿದ್ದಾರೆ.
ಎಸ್ಪಿ ಸ್ಪಷ್ಟನೆ : ಈ ಘಟನೆ ಬಗ್ಗೆ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದು, 'ಆರೋಪಿ ಖಲಂಧರ್ ಶಾಫಿ ಮನೆಯಲ್ಲಿ ಸರ್ಚ್ ವಾರೆಂಟ್ ಆಧಾರದಲ್ಲಿಯೇ ಕಾರ್ಯಾಚರಣೆ ನಡೆಸಲಾಗಿದೆ. ಕುರಾನ್ ಪಾವಿತ್ರತೆಯ ಬಗ್ಗೆ ನಮಗೂ ಗೊತ್ತಿದೆ. ಪೊಲೀಸರು ಅದನ್ನು ಮುಟ್ಟಲು ಹೋಗಿಲ್ಲ' ಎಂದು ಹೇಳಿದ್ದಾರೆ.
ಶರತ್ ಕೊಲೆ ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ
'ಕುರಾನ್ ಹಾಗೂ ಯಾವುದೇ ಧಾರ್ಮಿಕ ಗ್ರಂಥಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಅವುಗಳನ್ನು ಅಶುದ್ಧ ಹಾಗೂ ಅಪವಿತ್ರವಾಗದಂತೆ ಕಾಪಾಡುತ್ತೇವೆ. ಮಕ್ಕಳ ಕೈಗೆ ಸಿಗಬಾರದೆಂದು ಎತ್ತರದ ಸ್ಥಳದಲ್ಲಿಡಲಾಗುತ್ತದೆ. ಅದೇ ರೀತಿಯಲ್ಲಿ ಖಲಂದರ್ ಮನೆಯಲ್ಲೂ ಕುರಾನ್ ಇಡಲಾಗಿತ್ತು. ಅವುಗಳನ್ನು ಗಮನಿಸಿದ ಪೊಲೀಸ್ ಅಧಿಕಾರಿಗಳು ಗ್ರಂಥವನ್ನು ಮುಟ್ಟಬೇಡಿ. ಅದನ್ನು ಮುಟ್ಟುವ ಅಧಿಕಾರ ನಮಗಿಲ್ಲ' ಎಂದು ಹೇಳಿದರು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.
ಶರತ್ ಮಡಿವಾಳ್ ಹತ್ಯೆ ಪ್ರಕರಣದಲ್ಲಿ ಮತ್ತೆ ಮೂವರ ಬಂಧನ
'ಶರತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮನೆಯಲ್ಲಿ ಕೆಲವೊಂದು ದಾಖಲೆ ಪತ್ರ ದೊರೆತಿದ್ದು, ಅವುಗಳನ್ನು ಪರಿಶೀಲಿಸಲಾಗುವುದು. ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕಲು ಪ್ರಯತ್ನ ನಡೆಯುವ ಬಗ್ಗೆಯೂ ಮಾಹಿತಿ ಇದ್ದು, ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದ್ದಾರೆ.