ಮಾಧ್ಯಮದಲ್ಲಿ ಅನುಸರಣೆ ಹೆಚ್ಚಾಗುತ್ತಿದೆ : ರವಿ ಹೆಗಡೆ
ಪುತ್ತೂರು, ಜನವರಿ 11 : 'ಮಾಧ್ಯಮದಲ್ಲಿ ಅನುಸರಣೆ ಹೆಚ್ಚಾಗುತ್ತಿದೆ. ಟಿ.ವಿ ಪರದೆಯಲ್ಲಿ ಗುದ್ದಾಟ ನೋಡುವ ಮಂದಿ ಹೆಚ್ಚಾಗುತ್ತಿದ್ದಾರೆ. ಇದರ ಕೊನೆ ಸಮಾಜದಲ್ಲಿ ಇದೆ. ಇಂತಹ ಕಾರ್ಯಕ್ರಮ ತಡೆಯುವ ಕೆಲಸವಾಗಬೇಕಿದೆ' ಎಂದು ಕನ್ನಡಪ್ರಭ ದಿನಪತ್ರಿಕೆ ಸಂಪಾದಕ ರವಿ ಹೆಗಡೆ ಹೇಳಿದರು.
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಗುರುವಾರ ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನದ ಮಾಧ್ಯಮ ಮಂಥನ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿತ್ತು. ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ಮಾತನಾಡಿ, 'ಹಣಗಳಿಸಲು ಸುದ್ದಿಯ ಬೇರೆ ಬೇರೆ ಆಯಾಮ ತೋರಿಸಲು ಹೋಗಿ ಅದ್ವಾನವಾಗುತ್ತಿದೆ. ನಮ್ಮಲ್ಲಿ ಸಮಾಜ ಸರಿಯಾದ ಆಯ್ಕೆ ಮಾಡದ ಹೊರತು ಮಾಧ್ಯವನ್ನು ದೂರುವಂತಿಲ್ಲ. ಸಿನಿಮಾ ಮಾಧ್ಯಮ ಕೂಡಾ ಹಾಗೆಯೇ. ಅದು ನಿರ್ಧರಿತವಾಗುವುದು ಕಥೆ ಹಾಗೂ ಕಥೆಗಾರನ ಸಾಮರ್ಥ್ಯದ ಮೇಲೆ' ಎಂದರು.
ಕಸ್ತೂರಿ ಸುದ್ದಿ ವಾಹಿನಿಯ ಮುಖ್ಯಸ್ಥ ಗೌರೀಶ್ ಅಕ್ಕಿ ಮಾತನಾಡಿ, 'ಬದಲಾಗುವ ವಿದ್ಯಮಾನಕ್ಕೆ ಮಾಧ್ಯಮ ಹೊರತಾಗಿಲ್ಲ. ಬದಲಾವಣೆ ಆಶ್ಚರ್ಯ ಎನಿಸಿದರೆ ಅದು ವಾಸ್ತವ. ಕೆಲವೊಂದು ನಿದರ್ಶನದಲ್ಲಿ ಮಾಧ್ಯಮವು ಮರುಪ್ರಸರಣ ಮಾಡಿದ್ದು ಹಲವು ಉಪಯೋಗವನ್ನು ಉಂಟು ಮಾಡಿದೆ' ಎಂದು ಅಭಿಪ್ರಾಯಪಟ್ಟರು.
ಗೋಷ್ಠಿಯ ಸಮನ್ವಯಕಾರ, ಲೇಖಕ ಗಿರೀಶ್ ರಾವ್ (ಜೋಗಿ) ಮಾತನಾಡಿ, 'ಸಮಾಜದ ಪ್ರತಿಬಿಂಬ ಮಾಧ್ಯಮ. ಮಾಧ್ಯಮಗಳ ಮೇಲೆ ಟೀಕೆ ಮಾಡುವುದು ಬಹಳ ಸುಲಭ. ಆದರೆ, ಮಾಧ್ಯಮದ ಮೌಲ್ಯ ಮಾಪನ ಮತ್ತು ಬದಲಾವಣೆ ಅವಶ್ಯಕತೆ ಇದೆ. ಸಮಾಜದ ಜನರ ಆಯ್ಕೆಯ ಕುರಿತು ಪ್ರತಿ ವ್ಯಕ್ತಿ ಚಿಂತಿಸಬೇಕು' ಎಂದರು.
ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಗೋಷ್ಠಿಯಲ್ಲಿ ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡರು. ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು.
ಗೋಷ್ಠಿಯಲ್ಲಿ ಒನ್ ಇಂಡಿಯಾ ಕನ್ನಡದ ಸಂಪಾದಕರಾದ ಎಸ್.ಕೆ. ಶ್ಯಾಮ ಸುಂದರ, ಹಿರಿಯ ಪತ್ರಕರ್ತ ಬೋನಂತಾಯ ಹರಿಶ್ಚಂದ್ರ ಭಟ್, ಪತ್ರಕರ್ತ ಪಿ.ಬಿ. ಹರೀಶ್ ರೈ, ಮಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕಿ ಎಸ್. ಉಷಾಲತಾ, ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಚಿತ್ರಕಾರ ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.
ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.