ಭೋರ್ಗರೆಯುವ ಅಪಾಯಕಾರಿ ಅಲೆಗಳ ಜತೆ ನಿಮ್ಮ 'ಸೆಲ್ಫಿ' ಸಾಹಸ ಬೇಡ
ಮಂಗಳೂರು, ಜೂನ್ 14: ಮಂಗಳೂರು ಮಳೆಗೆ ಮುನ್ನುಡಿಯಂತೆ ಕರ್ನಾಟಕ ಕರಾವಳಿಯ ಕಡಲು ಉಗ್ರಾವತಾರ ತಾಳುತ್ತಿದ್ದು ಭೋರ್ಗರೆಯುತ್ತಿದೆ. ಈ ಅಪಾಯಕಾರಿ ಅಲೆಗಳ ಜತೆ ಸೆಲ್ಫಿ ತೆಗೆಯುವ ಪ್ರವಾಸಿಗರ ಕ್ರೇಜ್ ಅವರನ್ನು ಸಾವಿನತ್ತ ಸೆಳೆಯುತ್ತಿದೆ.
"ಕಡಲ ತೀರದ ಬಂಡೆಗಳ ಮೇಲೇರಿ ರಕ್ಕಸ ಅಲೆಗಳ ಭೋರ್ಗರೆಯುವ ಹಿನ್ನಲೆಯಲ್ಲಿ ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಅಪಾಯಕಾರಿ. ಹೀಗಾಗಿ ದೂರದಲ್ಲೇ ಅಲೆಗಳ ಸೌಂದರ್ಯವನ್ನು ಸವಿಯಿರಿ. ಕಲ್ಲು ಬಂಡೆಗಳಿದ್ದರಂತೂ ಅದರ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗದಿರಿ," ಎನ್ನುತ್ತಾರೆ ಇಲ್ಲಿನ ರಕ್ಷಣಾ ತಂಡದ ಸದ್ಯಸರು.
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಠಾಣೆ ವ್ಯಾಪ್ತಿಯ ಹನಿ ಬೀಚಿನಲ್ಲಿ ಇತ್ತೀಚಿಗೆ ನಡೆದ ಅವಘಡವೇ ಇದಕ್ಕೆ ಸಾಕ್ಷಿ. ಮೂವರು ಸ್ನೇಹಿತರೊಂದಿಗೆ ಜಾಲಿ ರೈಡ್ ಗೆ ಬಂದಿದ್ದ ಗುರುದರ್ಶನ್ ಶೇಟ್ ಅಲೆಗಳೊಂದಿಗೆ ಸೆಲ್ಫಿ ತೆಗೆಯಲು ಹೋಗಿ ನಾಪತ್ತೆಯಾಗಿದ್ದಾರೆ.
ಸಮುದ್ರ ಅಲೆಗಳು ನಿಜವಾಗಿಯೂ ಯುವ ಜನತೆಗೆ ಹೆಚ್ಚು ಆಪ್ತವಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳಿಗಂತೂ ಅಲೆಗಳು ಎಂದರೆ ಏನೋ ಒಂದು ರೀತಿಯ ಪ್ರೀತಿ. ಇದರೊಂದಿಗೆ ಸೆಲ್ಫಿ ಗೀಳು ಜತೆಗೊಡಿದರೆ ಉಳಿದ ಬದುಕಿನ ವಿಚಾರಗಳನ್ನು ಮರೆತು ಬಿಡುತ್ತಾರೆ. ಇದೆ ಕಾರಣದಿಂದ ಸೆಲ್ಫಿಯಾಟಕ್ಕೆ ಸಾಕಷ್ಟು ಯುವಜನತೆ ಬಲಿಯಾಗುತ್ತಿರುವ ಪ್ರಸಂಗಗಳು ನಡೆಯುತ್ತಿವೆ.
ಒಂದು ವೇಳೆ ಈಜು ಕಲಿತಿದ್ದರೂ ಕೂಡ ಅಬ್ಬರದ ಅಲೆಗಳ ಜತೆಯಲ್ಲಿ ಗುದ್ದಾಟ ಮಾಡುವುದು ತೀರಾ ಕಷ್ಟ. "ಮಳೆಗಾಲದಲ್ಲಿ ಅಲೆಗಳ ಮೋಡಿಯೇ ಬೇರೆ ರೀತಿಯಲ್ಲಿರುತ್ತದೆ. ಅಲೆಗಳು ಎತ್ತರಕ್ಕೆ ನೆಗೆದುಕೊಳುತ್ತಾ ಹತ್ತಿರಕ್ಕೆ ಬರುತ್ತಿದ್ದಂತೆ ಜೇಬಿನಲ್ಲಿರುವ ಮೊಬೈಲ್ ಎತ್ತಿಕೊಂಡು ಒಂದು ಸೆಲ್ಫಿ ಹೊಡೆಯಲೇಬೇಕು ಎನ್ನುವಂತೆ ಮನಸ್ಸು ಹಪಾಹಪಿಗೆ ಬೀಳುತ್ತದೆ," ಎನ್ನುತ್ತಾರೆ ಪ್ರವಾಸಿಗರೊಬ್ಬರು. ಆದರೆ ನೀವೂ ಈ ರೀತಿ ಹಪಾಹಪಿಗೆ ಬೀಳದಿದ್ದರೆ ಒಳ್ಳೆಯದು.
ಕರಾವಳಿಯ ಎಲ್ಲಾ ಬೀಚ್ ಗಳಲ್ಲಿ ಸಮುದ್ರ ಕೊರೆತ ತಡೆಗೆ ಹಾಕಿರುವ ದೊಡ್ಡ ಗಾತ್ರದ ಕಲ್ಲು ಬಂಡೆಗಳಿವೆ. ಅದರ ಮೇಲೆ ಅಲೆಗಳು ಹಾಗೂ ಮಳೆ ನೀರು ಹಾರಿ ಪಾಚಿ ಬೆಳೆಯುತ್ತವೆ. ಹೀಗಾಗಿ ಜಾರಿ ಬೀಳುವ ಸಂದರ್ಭವೇ ಹೆಚ್ಚು.
ಜೂನ್ ನಿಂದ ಆಗುಸ್ಟ್ ತಿಂಗಳು ಬೀಚ್ ಗಳ ಕಲ್ಲು ಬಂಡೆಯ ಮೇಲೆ ನಿಂತು ಸೆಲ್ಫಿಯೇ ತೆಗೆಯುವುದು ಅಪಾಯಕಾರಿ ಎನ್ನುತ್ತಾರೆ ಪಣಂಬೂರ್ ನಿವಾಸಿ ನಿಶಾಂತ್ ಶೆಟ್ಟಿ.