ಬಿಪಿಎಲ್ ಕಾರ್ಡ್ ಪಡೆಯಲು ಸ್ವಯಂ ಘೋಷಿತ ಪತ್ರ ಸಾಕು..!
ಬಿಪಿಎಲ್ ಪಡಿತರ ಚೀಟಿ ಪಡೆಯಲು ಇನ್ನು ಮುಂದೆ ಸ್ವಯಂಘೋಷಿತ ಪತ್ರ ಇದ್ದರೆ ಸಾಕು; ಬಿಪಿಎಲ್ ಪಡಿತರ ಚೀಟಿ ಸಿಗುತ್ತೆ. ಈ ಪತ್ರ ಬಿಟ್ಟರೆ ಬೇರಾವ ದಾಖಲೆಗಳು ಬೇಡ ಎಂದು ಸ್ವತಃ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರು, ಎಪ್ರಿಲ್ 11: ಬಿಪಿಎಲ್ ಪಡಿತರ ಚೀಟಿ ಬೇಕೆಂದರೆ ಇಂತಿಷ್ಟು ಆದಾಯ ಮಿತಿ ಇರಬೇಕು, ಸೂಕ್ತ ದಾಖಲೆಗಳು ಬೇಕೆಂಬ ನಿಯಮ ಇತ್ತು. ಆದರೆ ಇನ್ನು ಮುಂದೆ ಬಿಪಿಎಲ್ ಕಾರ್ಡ್ ಗಾಗಿ ಅಲೆದಾಡಬೇಕಾಗಿಲ್ಲ. ಸ್ವಯಂಘೋಷಿತ ಪತ್ರ ಇದ್ದರೆ ಸಾಕು; ಬಿಪಿಎಲ್ ಪಡಿತರ ಚೀಟಿ ಸಿಗುತ್ತೆ. ಈ ಪತ್ರ ಬಿಟ್ಟರೆ ಬೇರಾವ ದಾಖಲೆಗಳು ಬೇಡ ಎಂದು ಸ್ವತಃ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, "ಇನ್ನು ಮುಂದೆ ದಾಖಲೆ ಬೇಕು ಅಂತ ಯಾವ ಅಧಿಕಾರಿಗಳು ಸತಾಯಿಸುವಂತಿಲ್ಲ. ಅಧಿಕಾರಿಗಳು ದರ್ಪ ಮೆರೆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಬಡವರಿಗೆ ತೊಂದರೆಯಾಗುವುದನ್ನ ತಪ್ಪಿಸಲು ಈ ನೂತನ ಕ್ರಮವನ್ನ ಆಳವಡಿಸಲಾಗುತ್ತಿದೆ," ಎಂದು ಹೇಳಿದರು.[ಬಪ್ಪನಾಡು ದೇವಸ್ಥಾನದಲ್ಲಿ ದೊಡ್ಡಣ್ಣ ಸೆಲ್ಫಿಗಾಗಿ ಮುಗಿಬಿದ್ದ ಭಕ್ತರು!]
ಶೀಘ್ರವೇ ರಾಜ್ಯ ಸರ್ಕಾರ ಈ ಕುರಿತ ಆದೇಶ ಹೊರಡಿಸಲಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ. ಗ್ರಾಮ ಹಾಗೂ ನಗರ ಪಂಚಾಯತ್ ಗಳಲ್ಲಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಅಧಿಕಾರಿಗಳು ಅಧಿಕ ಪ್ರಸಂಗ ಮಾಡಿ ಸತಾಯಿಸುತ್ತಿದ್ದರು. ಈ ಬಗ್ಗೆ ನಾಗರಿಕರು ದೂರುಗಳು ಕೇಳಿ ಬಂದಿದ್ದವು ಎಂದು ಮಾಹಿತಿ ನೀಡಿದರು.
ಸಾರ್ವಜನಿಕರ ದೂರಿನ ಮೇರೆಗೆ ರಾಜ್ಯ ಸರ್ಕಾರ ನೂತನ ನಿಯಮ ಜಾರಿಗೆ ತರಲು ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ನಿಗದಿಪಡಿಸಿದ ಮಾನದಂಡಗಳ ಆಧಾರದಲ್ಲಿ ಅರ್ಜಿದಾರರು ನೀಡುವ ಸ್ವಯಂಘೋಷಿತ ಪತ್ರದ ಆಧಾರದಲ್ಲಿ ಬಿಪಿಎಲ್ ಪಡಿತರ ಚೀಟಿಯನ್ನು ಅಧಿಕಾರಿಗಳು ನೀಡಬೇಕಾಗುತ್ತದೆ ಎಂದು ತಿಳಿಸಿದರು.
ತೊಗರಿ ಬೇಳೆ ಸಿಗುತ್ತಾ..?
ಇನ್ನು ಎಪ್ರಿಲ್ ತಿಂಗಳಿನಿಂದ ಬಿಪಿಎಲ್ ಪಡಿತರದಾರರಿಗೆ ಒಂದು ಕೆ.ಜಿ.ತೊಗರಿಬೇಳೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ರಾಜ್ಯದಲ್ಲಿ ತೊಗರಿಬೇಳೆ ವಿತರಿಸಲು 15 ಟೆಂಡರ್ ದಾರರು ಇದ್ದರೂ ಸಹ ಇವರಲ್ಲಿ ಎಂಟು ಟೆಂಡರ್ ದಾರರು ತೊಗರಿ ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ತೊಗರಿ ಬೇಳೆ ಪೂರೈಕೆ ವಿಳಂಬವಾಗಲಿದೆ.[ಸಸಿಹಿತ್ಲು ಬೀಚ್ ನಲ್ಲಿ ಮೇ 26ರಿಂದ ಇಂಡಿಯನ್ ಓಪನ್ ಸರ್ಫಿಂಗ್]
ಇದೇ ವೇಳೆ ತೊಗರಿಬೇಳೆ ಯನ್ನ ನೇರವಾಗಿ ರೈತರಿಂದಲೇ ಖರೀದಿಸಿ ಪ್ಯಾಕಿಂಗ್ ಮಾಡಲು ಸಾಧ್ಯವೇ ಎಂಬುದರ ಕುರಿತು ಸಹ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈಗಾಗಲೇ ಕೆಲ ಜಿಲ್ಲೆಗಳಿಗೆ ತೊಗರಿ ಪೂರೈಕೆಯಾಗಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2177 ಕ್ವಿಂಟಾಲ್ ತೊಗರಿ ಬೇಳೆ ಪೂರೈಕೆ ಮಾಡಬೇಕು. ಆದರೆ ಪೂರೈಕೆಯಾಗಿದ್ದು ಕೇವಲ 150 ಕ್ವಿಂಟಾಲ್. ಶೀಘ್ರವೇ ಇದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದೆಂದು ಆಹಾರ ಸಚಿವರು ಭರವಸೆ ನೀಡಿದ್ದಾರೆ.