ಲೋಕಲ್ ಫೈಟ್ ನಲ್ಲಿ ಎಸ್ ಡಿಪಿಐ ಸಾಧನೆ: ದ.ಕ. ಕೈ ಪಾಳಯದಲ್ಲಿ ಆತಂಕ
ಮಂಗಳೂರು, ಸೆಪ್ಟೆಂಬರ್ 05: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 31 ರಂದು ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಜಿಲ್ಲೆಯ 2 ನಗರಸಭೆ ಹಾಗೂ 1 ಪುರಸಭೆ ಗೆ ನಡೆದ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ ಡಿ ಪಿ ಐ) ಹೆಚ್ಚಿನ ಸ್ಥಾನವನ್ನು ಗೆಲ್ಲುವ ಮೂಲಕ ಮೂರನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಕಿಂಗ್ ಮೇಕರ್ ಆಗುವ ಶಕ್ತಿ ಪಡೆದುಕೊಂಡಿದೆ.
ಜಿಲ್ಲೆಯ 2 ನಗರಸಭೆ ಹಾಗೂ 1 ಪುರಸಭೆಗೆ ನಡೆದ ಚುನಾವಣೆಗೆ ಒಟ್ಟು 24 ವಾರ್ಡ್ ಗಳಲ್ಲಿ ಎಸ್ ಡಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಉಳ್ಳಾಲ ನಗರಸಭೆಯ 9 ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ ಎಸ್ ಡಿಪಿಐ ಅಭ್ಯರ್ಥಿಗಳು 6 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಎಸ್ ಡಿಪಿಐ ಜೊತೆ ಮೈತ್ರಿಯಾಗಲು 'ಕೈ' ಹಿಂದೇಟು ಹಾಕುತ್ತಿರುವುದೇಕೆ?
ಬಂಟ್ವಾಳ ಪುರಸಭೆಗೆ ನಡೆದ ಚುನಾವಣೆಯಲ್ಲಿ 12 ವಾರ್ಡಿನಲ್ಲಿ ಸ್ಪರ್ಧಿಸಿದ್ದ ಎಸ್ ಡಿಪಿಐ ಅಭ್ಯರ್ಥಿಗಳ ಪೈಕಿ 4 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಹಾಗೆಯೇ ಪುತ್ತೂರು ನಗರಸಭೆಯಲ್ಲಿ 3 ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ 1 ವಾರ್ಡ್ ನಲ್ಲಿ ಅಭೂತಪೂರ್ವ ಜಯ ಸಾಧಿಸಿ ಇದೇ ಮೊದಲ ಬಾರಿಗೆ ಎಸ್ ಡಿಪಿಐ ಖಾತೆ ತೆರೆದಿದೆ.
ಈ ಹಿಂದೆ ಉಳ್ಳಾಲದಲ್ಲಿ ಕೇವಲ ಒಂದು ಸ್ಥಾನ ಗಳಿಸಿದ್ದ ಎಸ್ ಡಿಪಿಐ ಈ ಬಾರಿ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಚುನಾವಣೆಯಲ್ಲಿ ಎಸ್ ಡಿಪಿಐ ಖಾತೆ ತೆರೆದಿದ್ದ ಸರೀನಾ ಬಾನು ಈ ಬಾರಿಯೂ ಗೆಲುವು ದಾಖಲಿಸಿದ್ದಾರೆ .
ಉಳ್ಳಾಲದಲ್ಲಿ 'ಕೈ' ಪ್ರಾಬಲ್ಯ ಮುರಿದ ಎಸ್ ಡಿಪಿಐ: ಕಾಂಗ್ರೆಸ್-ಜೆಡಿಎಸ್ ಮೈತ್ರಿ?
ಅದಲ್ಲದೇ ಇನ್ನು 5 ಸ್ಥಾನಗಳನ್ನು ಎಸ್ ಡಿಪಿಐ ಬಾಚಿಕೊಂದಿದೆ. ಈ ಎಲ್ಲಾ ಸ್ಥಾನಗಳನ್ನು ಕಾಂಗ್ರೆಸ್ ನಿಂದ ಎಸ್ ಡಿಪಿಐ ಕಸಿದು ಕೊಂಡಿರುವುದು ಗಮನಾರ್ಹ. ಉಳ್ಳಾಲದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ದಾಖಲಿಸುವಲ್ಲಿ ತಡೆಯಾಗಿದ್ದೇ ಎಸ್ ಡಿಪಿಐ.
ಇನ್ನೊಂದೆಡೆ ಬಂಟ್ವಾಳದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 4 ಸ್ಥಾನಗಳನ್ನು ಬಾಚಿಕೊಂಡು ಕಿಂಗ್ ಮೇಕರ್ ಸ್ಥಾನದಲ್ಲಿ ಎಸ್ ಡಿಪಿಐ ಇದೆ. ಇಲ್ಲಿಯೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವಲ್ಲಿ ತೊಡಕಾಗಿದ್ದು ಎಸ್ ಡಿಪಿಐ ಎಂಬುದು ಗಮನಾರ್ಹ.
ಬಂಟ್ವಾಳ ಪುರಸಭೆಯ 27 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12 , ಬಿಜೆಪಿ 11 ಮತ್ತು ಎಸ್ ಡಿಪಿಐ 4 ಸ್ಥಾನಗಳನ್ನು ಗಳಿಸಿದೆ. ಗೆದ್ದ ಸ್ಥಾನಗಳ ಆಧಾರದಲ್ಲಿ ಇಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅಧಿಕಾರ ಹಿಡಿಯುವ ಸಂಖ್ಯಾಬಲವಿಲ್ಲ ಈ ಹಿನ್ನಲೆಯಲ್ಲಿ ಎಸ್ ಡಿ ಪಿ ಐ ದೊಂದಿಗೆ ಮೈತ್ರಿ ಅನಿವಾರ್ಯ.
"ಸ್ಥಳಿಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಮಟ್ಟಿಗೆ ಎಸ್ ಡಿಪಿಐ ಒಳ್ಳೆಯ ಸಾಧನೆ ತೋರಿದೆ. ಈ ಮುಖಾಂತರ ಜಿಲ್ಲೆಯಲ್ಲಿ ತನ್ನ ಶಕ್ತಿ ಹೆಚ್ಚಿಸಿಕೊಂಡಿದೆ" ಎಂದು ಈ ಕುರಿತು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹರ್ಷ ವ್ಯಕ್ತಪಡಿಸಿ, ಗೆಲುವಿಗೆ ಸಹಕರಿಸಿದ ಮತದಾರರಿಗೆ ಕೃತಜ್ಞತೆ ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆ ಹೀನಾಯ ಪರಿಸ್ಥಿತಿ: ಖಾದರ್ ನೀಡಿದ ಕಾರಣವೇನು?
ಜಿಲ್ಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ಚುನಾವಣಾ ಫಲಿತಾಂಶ ಬಹಳ ಮಹತ್ವದ್ದು.ಎಸ್ ಡಿಪಿಐ ತಳಮಟ್ಟದಲ್ಲಿ ಜನಪ್ರಿಯತೆ ಗಳಿಸುತ್ತಿದೆ ಎನ್ನುವುದಕ್ಕೆ ಈ ಫಲಿತಾಂಶ ಸ್ಪಷ್ಟ ಸಾಕ್ಷಿ.
ಈ ಚುನಾವಣಾ ಫಲಿತಾಂಶ ಮುಂಬರುವ ಮಂಗಳೂರು ಮಹಾನಗರ ಪಾಲಿಕೆ, ಬೆಳ್ತಂಗಡಿ, ಸುಳ್ಯ, ಮುಲ್ಕಿ ಮತ್ತು ಮೂಡಬಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಗಳಿಸುವ ಮುನ್ಸೂಚನೆಯಾಗಿದೆ. ಅದಲ್ಲದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಸ್ ಡಿಪಿಐ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.