ಎಸ್.ಡಿ.ಎಂ ಶಾಲಾ ಮಕ್ಕಳಿಂದ ಪರಿಸರ ಸ್ನೇಹಿ 'ಸೀಡ್ ಪೆನ್' ತಯಾರಿ
ಮಂಗಳೂರು, ಆಗಸ್ಟ್ 25: ಮಳೆಯ ಅಭಾವ ಒಂದೆಡೆಯಾದರೆ, ಪರಿಸರದ ನಾಶ ಇನ್ನೊಂದೆಡೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಪರಿಸರ ಉಳಿಸಬೇಕು ಎಂಬ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪರಿಸರ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಕ್ಷೇತ್ರದಲ್ಲಿರುವ ವಸತಿ ಗೃಹಗಳಲ್ಲಿ ಮರ ಉಪಯೋಗಿಸದೆ ಸಿಮೆಂಟಿನ ಬಾಗಿಲು, ಕಿಟಕಿ, ಮಂಚ ಎಲ್ಲವೂ ಪರಿಸರ ಸ್ನೇಹಿಯಾಗಿ ನಿರ್ಮಾಣವಾಗುತ್ತಿದೆ. ಪರಿಸರ ಉಳಿಯಬೇಕು ಎಂದು ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸೀಡ್ ಬಾಲ್ ಗಳಿಂದ ಪರಿಸರ ಬೆಳೆಸುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ 'ಸೀಡ್ ಪೆನ್'.
ಏನಿದು ಸೀಡ್ ಪೆನ್?
ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣವಾಗಬೇಕು ಎಂಬ ನಿಟ್ಟಿನಲ್ಲಿ ಧರ್ಮಸ್ಥಳದ ಎಸ್ ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಹೊಸ ಪ್ರಯೋಗದ ಮಾಡಿದ್ದಾರೆ. ಸೀಡ್ ಪೆನ್ನು ತಯಾರಿಸಿ ಅದರೊಳಗೆ ತುಂಬಿಸಿರುವ ನಾನಾ ಜಾತಿಯ ಬೀಜಗಳ ಮೂಲಕ ಸಸ್ಯ ಸಂರಕ್ಷಣೆಯ ಸಂದೇಶ ಸಾರುವ ವಿಶಿಷ್ಟ ಸಾಧನೆಯ ಅನಾವರಣ ಇದಾಗಿದೆ.
ಪೆನ್ನು ಹೇಗಿದೆ?
ದಿನನಿತ್ಯ ಉಪಯೋಗಿಸುವ ಪೂರ್ಣ ಪ್ರಮಾಣದ ಪ್ಲಾಸ್ಟಿಕ್ ನಿರ್ಮಿತ ಪೆನ್ನಿನ ಬದಲು ಕೇವಲ ರಿಫಿಲ್ ಮಾತ್ರ ಉಪಯೋಗಿಸಿ, ಅದರ ಮೇಲೆ ಬಣ್ಣ, ಬಣ್ಣದ ಕಾಗದ ಸುತ್ತಿ ಪೆನ್ನಿ ನಂತೆ ತಯಾರಿಸಲಾಗಿದೆ. ಪೆನ್ನು ತಯಾರಿಸುವ ವೇಳೆ ಅದರೊಳಗೆ ಹರಿವೆ ಸೊಪ್ಪಿ, ಮೆಣಸು,ಬೆಂಡೆ ಹೂವು ಹಾಗೂ ಇತರ ತರಕಾರಿ ಬೀಜ ಸೇರಿಸಿ ಪೆನ್ನು ತಯಾರಿಸಲಾಗಿದೆ.
ರಿಫಿಲ್ ನಿಂದ ಗಿಡ ಮೊಳೆತು ಹೊರಕ್ಕೆ
ರಿಫಿಲ್ ಸಣ್ಣ ಪ್ರಮಾಣದ ಪ್ಲಾಸ್ಟಿಕ್ ಆಗಿದ್ದರೂ ಅದರ ಉಪಯೋಗ ಮುಗಿದು ಅದನ್ನು ಹಿತ್ತಲಲ್ಲಿ ಬಿಸಾಡಿದರು ಪೆನ್ನಿನ ಒಳಗಿರುವ ಬೀಜಗಳು ಮೊಳಕೆಯೊಡೆದು ಪರಿಸರದ ರಕ್ಷಣೆಯೂ ಆಗುತ್ತದೆ.
ತರಕಾರಿ ಬೀಜಗಳು ಮತ್ತು ಕಾಗದದ ಮೂಲಕ ತಯಾರಿಸಿದ ಪೆನ್ನೇ ಸೀಡ್ ಪೆನ್ನು. ಇಂತಹ ಪರಿಸರ ಸ್ನೇಹಿ ಚಿಂತನೆಯನ್ನು ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ, ಸುಪ್ರಿಯಾ ಹರಿಶ್ಚಂದ್ರ ಕುಮಾರ್, ಎಸ್ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾರ್ಗದರ್ಶನದಲ್ಲಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳು ತಯಾರಿಸಿದ್ದಾರೆ.
ಸೀಡ್ ಪೆನ್ ಬಿಡುಗಡೆ
ಈ ಸೀಡ್ ಪೆನ್ ಬಿಡುಗಡೆಯ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಪರಿಸರ ಜಾಗೃತಿ ಮೂಡಿಸುವ ವಿಧದಲ್ಲಿ ವಿದ್ಯಾರ್ಥಿಗಳು ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿಗಳು ಪರಿಸರ ಸೀಡ್ ಪೆನ್ನು ಬಗ್ಗೆ ಪ್ರಹಸನದ ಮೂಲಕ ಪರಿಚಯಿಸಿದರು. ಪರಿಸರ ಸ್ನೇಹಿ ಪೆನ್ನಿನ ಪ್ರಾತ್ಯಕ್ಷಿಕೆಯನ್ನೂ ವಿದ್ಯಾರ್ಥಿಗಳು ಈ ಸಂದರ್ಭ ನಡೆಸಿಕೊಟ್ಟರು.
ವಿದ್ಯಾರ್ಥಿಗಳು ತಯಾರಿಸಿದ ಪರಿಸರ ಸ್ನೇಹಿ ಸೀಡ್ ಪೆನ್ನಿನಲ್ಲಿ ಬರೆಯುವ ಮೂಲಕ ಪೆನ್ನನ್ನು ಎಸ್ಡಿಎಂ ಶಾಲೆಯ ಸಲಹಾ ಸಮಿತಿ ಅಧ್ಯಕ್ಷೆ ಧರ್ಮಸ್ಥಳದ ಸುಪ್ರಿಯಾ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, "ಮಕ್ಕಳಲ್ಲಿ ಪರಿಸರದ ತಿಳಿವಳಿಕೆ ಬರಬೇಕು ಎಂಬ ನಿಟ್ಟಿನಲ್ಲಿ ಸೀಡ್ ಪೆನ್ ಗಳನ್ನು ತಯಾರಿಸಿ ಬಳಸಲು ಉತ್ತೇಜನ ನೀಡುತ್ತಿದ್ದೇವೆ. ಪೆನ್ನಿಗೆ ಅದರೊಳಗೆ ತರಕಾರಿ ಬೀಜಗಳನ್ನು ಇಡಲಾಗುತ್ತಿದೆ. ಪೆನ್ನನ್ನು ಬರೆಯಲು ಬಳಕೆ ಮಾಡಿ ನಂತರ ಹೂವಿನ ಕುಂಡದಲ್ಲಿ, ಹಿತ್ತಲಲ್ಲಿ ಹಾಕಿದರೆ ತರಕಾರಿಯಾಗಿರುತ್ತದೆ," ಎಂದರು.
ಸೀಡ್ ಬಾಲ್ ನಂತರ ಸೀಡ್ ಪೆನ್
"ಈಗಾಗಲೇ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೀಡ್ ಬಾಲ್ ಗಳನ್ನು ಬಳಕೆ ಮಾಡಲಾಗುತ್ತಿದೆ. 11 ಲಕ್ಷಕ್ಕೂ ಹೆಚ್ಚು ಸೀಡ್ ಬಾಲ್ ಬಳಕೆಯಾಗಿದೆ. ಇದಿಗ ಸೀಡ್ ಪೆನ್ ಬಿಡುಗಡೆ ಮಾಡಲಾಗಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು. ಪೋಷಕರು ಶಿಕ್ಷಕರು ಇದಕ್ಕೆ ಪ್ರೋತ್ಸಾಹ ನೀಡಬೇಕು. ಹೊಸ ಹೊಸ ಪರಿಸರ ಸ್ನೇಹಿ ಅವಿಷ್ಕಾರಗಳು ಆಗಬೇಕು," ಎಂದು ಅವರು ಹೇಳಿದರು.
ಮುಖ್ಯ ಶಿಕ್ಷಕಿ ಪರಿಮಳ ಉಪಸ್ಥಿತರಿದ್ದರು. ಪರಿಸರ ಸಂಘದ ಸಂಯೋಜಕ ಶಿಕ್ಷಕಿಯಾದ ಪೂರ್ಣಿಮಾ, ದೀಪಾ ಹಾಗೂ ಸೌಮ್ಯಾ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.