ವಿಪುಲ್ ಕುಮಾರ್ ವರ್ಗಾವಣೆ ಹಿಂದೆ ಮರಳು ಮಾಫಿಯಾ ಕೈ?
ಮಂಗಳೂರು, ಜೂನ್ 9 : ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಮತ್ತೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ರಾಜ್ಯ ಸರಕಾರದ ಈ ಆದೇಶ ಕುತೂಹಲ ಮೂಡಿಸಿದೆ.
ಇತ್ತೀಚೆಗಷ್ಟೇ ಮಂಗಳೂರು ಪೊಲೀಸ್ ಕಮಿಷನರ್ ಆಗಿ ವಿಪುಲ್ ಕುಮಾರ್ ನೇಮಕಗೊಂಡಿದ್ದರು. ಆದರೆ ರಾಜ್ಯ ಸರಕಾರ ದಿಢೀರ್ ಎಂದು ವಿಪುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ, ಮೈಸೂರಿನ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ ಹಾಗೂ ಐಜಿಪಿ ಯಾಗಿ ನಿಯುಕ್ತಿಗೊಳಿಸಿದೆ.
ಅಕ್ರಮ ಮರಳು ದಾಸ್ತಾನು ಬಚ್ಚಿಟ್ಟ ಆರೋಪ : 3 ಜನ ಪೊಲೀಸ್ ಸಸ್ಪೆಂಡ್
ಈ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಟಿ.ಆರ್. ಸುರೇಶ ಅವರನ್ನು ಏಪ್ರಿಲ್ 18ರಂದು ವರ್ಗಾವಣೆ ಮಾಡಿ, ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದ ವಿಪುಲ್ ಕುಮಾರ್ ಅವರನ್ನು ಮಂಗಳೂರು ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿತ್ತು. ಆದರೆ ಈಗ ವಿಪುಲ್ ಕುಮಾರ್ ವರ್ಗಾವಣೆ ಭಾಗ್ಯ ಪಡೆದಿದ್ದಾರೆ.
ವಿಪುಲ್ ಕುಮಾರ್ ನೇಮಕ ಬಳಿಕ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದರು. ಅದರಲ್ಲೂ ಆಕ್ರಮ ಮರಳುಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ಮಾತ್ರವಲ್ಲ, ವಿಶೇಷ ಕಾರ್ಯಪಡೆ ತಂಡ ಒಂದನ್ನು ರಚಿಸಿ ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು. 1400ಕ್ಕೂ ಅಧಿಕ ಲೋಡ್ ಮರಳನ್ನು ವಶಪಡಿಸಿಕೊಂಡಿದ್ದರು.
ವಿಪುಲ್ ಕುಮಾರ್ ಅವರ ದಿಢೀರ್ ವರ್ಗಾವಣೆಗೆ ಅಕ್ರಮ ಮರಳುಗಾರಿಕೆಗೆ ತಡೆಯೊಡ್ಡಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಹಾಗು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ದಾಸ್ತಾನು ಅಡ್ಡೆಗಳ ಮೇಲೆ ದಾಳಿ ಆರಂಭಿಸಿತ್ತು. ಇದು ಅಕ್ರಮ ಮರಳು ದಂಧೆಕೋರರ ನಿದ್ದೇಗೆಡಿಸಿತ್ತು.
ಅಕ್ರಮ ಮರಳುಗಾರಿಕೆ ಹಾಗೂ ಅಕ್ರಮ ಮರಳು ದಾಸ್ತಾನುಗಳ ಕುರಿತು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟ ಪೊಲೀಸ್ ಸಿಬ್ಬಂದಿ ಮೇಲೂ ವಿಪುಲ್ ಕುಮಾರ್ ಶಿಸ್ತು ಕ್ರಮ ಜರುಗಿಸಿ, ಅಮಾನತು ಮಾಡಿದ್ದರು. ಈ ರೀತಿ ಕಠಿಣ ಕ್ರಮ ಕೈಗೊಂಡಿದ್ದೇ ವಿಪುಲ್ ಕುಮಾರ್ ಅವರಿಗೆ ಮುಳುವಾಯಿತು ಎಂಬ ಮಾತು ಕೇಳಿಬರುತ್ತಿದೆ.