ಸಂಪಾಜೆ ಘಾಟ್ನಲ್ಲಿ ಲಘು ವಾಹನ ಸಂಚಾರಕ್ಕೆ ಒಪ್ಪಿಗೆ
ಮಂಗಳೂರು, ಸೆಪ್ಟೆಂಬರ್ 13 : ಮಂಗಳೂರು-ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರವನ್ನು ಆರಂಭಿಸಲಾಗಿದೆ. ಭೂ ಕುಸಿತದಿಂದಾಗಿ ಕಳೆದ ಒಂದು ತಿಂಗಳಿನಿಂದ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಆಗಸ್ಟ್ 16 ಮತ್ತು 17ರಂದು ಸಂಭವಿಸಿದ ಭೂ ಕುಸಿತದಿಂದಾಗಿ ಸಂಪಾಜೆ ಘಾಟ್ ರಸ್ತೆಯಲ್ಲಿ 25ಕ್ಕೂ ಹೆಚ್ಚು ಕಡೆ ಭೂ ಕುಸಿತ ಉಂಟಾಗಿತ್ತು. ಆದ್ದರಿಂದ, ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾಡಳಿ ರಸ್ತೆ ದುರಸ್ಥಿ ಕಾರ್ಯವನ್ನು ಆರಂಭಿಸಿದ್ದವು.
ಈಗ ಶಿರಾಡಿ ಘಾಟ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ
ಮಂಗಳೂರು-ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆ ಮರು ನಿರ್ಮಾಣಕ್ಕೆ ತಿಂಗಳುಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಜೋಡುಪಾಲದ ಬಳಿ ಜಲಸ್ಪೋಟಕ್ಕೆ ಕೊಚ್ಚಿಹೋಗಿದ್ದ ರಸ್ತೆ ಮರು ನಿರ್ಮಾಣಕ್ಕೆ ಸುಮಾರು 2 ರಿಂದ 3 ತಿಂಗಳು ಹಿಡಿಯಬಹುದೆಂದು ಹೇಳಲಾಗಿತ್ತು.
ಶಿರಾಡಿ ಘಾಟ್: ತಜ್ಞ ಇಂಜಿನಿಯರ್ಸ್ ಸಿಎಂಗೆ ನೀಡಿದ ವರದಿಯಲ್ಲೇನಿದೆ?
ರಸ್ತೆ ದುರಸ್ತಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಂಡ ಕಾರಣ ಲಘು ವಾಹನಗಳಿಗೆ ಸಂಪಾಜೆ ಘಾಟ್ ರಸ್ತೆಯಲ್ಲಿ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಒಂದು ತಿಂಗಳೊಳಗೆ ಎಲ್ಲಾ ರೀತಿಯ ವಾಹನಗಳಿಗೆ ಸಂಪಾಜೆ ಘಾಟ್ ಮೂಲಕ ಮಡಿಕೇರಿ ಪ್ರಯಾಣ ಸಾಧ್ಯವಾಗಲಿದೆ.
ರಸ್ತೆ ದುರಸ್ಥಿ ಕಾಮಗಾರಿ
ಮಡಿಕೇರಿ-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಸಂಪಾಜೆ ಘಾಟ್ ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಮಳೆ ಕಡಿಮೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಿಬ್ಬಂದಿ ಸಮರೋಪಾದಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಸುತ್ತಿದ್ದಾರೆ. ಇನ್ನೂ ಕಾಮಗಾರಿ ಮುಂದು ವರೆದಿದ್ದು ಕಾಮಗಾರಿಗೆ ಯಾವುದೇ ತಡೆ ಬರದೇ ಮುಂದುವರೆದರೆ ಅತೀ ಶೀಘ್ರ ಸಂಪಾಜೆ ಘಾಟ್ ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.
ಎರಡು ಕಡೆ ಭಾರಿ ಭೂ ಕುಸಿತವಾಗಿತ್ತು
ಸಂಪಾಜೆ ಘಾಟ್ ಭಾಗದಲ್ಲಿ ಈ ಸಮಯ ಮಳೆ ಮಾಮೂಲು. ಆದರೆ, ಕಳೆದ 20 ದಿನದಿಂದ ಮಳೆ ಪ್ರಮಾಣವೂ ಕಡಿಮೆಯಾಗಿದ್ದು, ಕಳೆದ ಒಂದು ವಾರದಿಂದ ಪೂರ್ತಿಯಾಗಿ ಮಳೆ ಬಿಟ್ಟಿರುವುದು ರಸ್ತೆ ದುರಸ್ಥಿ ಕೆಲಸಕ್ಕೆ ನೆರವಾಗಿದೆ.
ಸಂಪಾಜೆ ಘಾಟ್ ರಸ್ತೆಯಲ್ಲಿ ಭಾರಿ ಮಳೆಯಿಂದಾಗಿ 25ಕ್ಕೂ ಹೆಚ್ಚು ಕಡೆ ಭೂ ಕುಸಿತವಾಗಿತ್ತು. ಜೋಡುಪಾಲ ಬಳಿ ಎರಡು ಕಡೆ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿ, ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಆದರೆ, ಆ ದಿನದ ದುರಂತ ಚಿತ್ರಣ ಈಗಿಲ್ಲ.
ತಾತ್ಕಾಲಿಕ ರಸ್ತೆ ನಿರ್ಮಾಣ
ಕಳೆದ ಹಲವಾರು ದಿನಗಳಿಂದ ಮಳೆ ಸುರಿಯದ ಕಾರಣ ಈಗ ಮಣ್ಣು ಒಣಗಿ ಗಟ್ಟಿಯಾಗುತ್ತಿದೆ. ಹಿಂದೆ ರಸ್ತೆ ಇದ್ದ ಜಾಗ ಈಗ ಕುಸಿದಿದೆ. ಆದರೆ, ಆ ಸ್ಥಳದಲ್ಲಿ ಈಗ ತುರ್ತಾಗಿ ಸುಮಾರು 6 ಮೀಟರ್ ಅಗಲಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿದೆ.
ರಸ್ತೆ ಮೇಲೆ ನೀರು ಹರಿಯದಂತೆ ಪೈಪ್ ಹಾಕಿ ಚರಂಡಿ ಮಾಡಿ, ನೀರು ಚರಂಡಿಯಲ್ಲೇ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಜಲ್ಲಿ, ಜಲ್ಲಿಪುಡಿ ಸಂಗ್ರಹ ಮಾಡಲಾಗಿದ್ದು, ನೆಲದ ಮೇಲೆ ಜಿಯೋಫ್ಯಾಬ್ರಿಕ್ ಎನ್ನುವ ವಿಶೇಷ ಪದರ ಹಾಕಿ ಅದರ ಮೇಲೆ ಒಂದುವರೆ ಅಡಿಯಷ್ಟು ದಪ್ಪದಲ್ಲಿ ಜಿಎಸ್ಬಿ ಪದರ ಹಾಕಲಾಗುತ್ತಿದೆ.
ತುರ್ತಾಗಿ ರಸ್ತೆ ದುರಸ್ಥಿ
ತುರ್ತಾಗಿ ಮಡಿಕೇರಿಯನ್ನು ಮಂಗಳೂರಿಗೆ ಬೆಸೆಯುವ ಕೆಲಸ ಮಾಡಲಾಗುತ್ತಿದೆ. ಭೂ ಕುಸಿತವಾದಲ್ಲಿಂದ ಮಣ್ಣು ತೆರವು ಮಾಡಿ, ಅಲ್ಲಿಯೇ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ನೆಲ ಗಟ್ಟಿಯಾಗಿದ್ದು ಮುಂದೆ ಕುಸಿಯದು. ಅತೀ ಶೀಘ್ರದಲ್ಲಿ ಕಡಿದುಹೋದ ಸಂಪಾಜೆ-ಮಡಿಕೇರಿ ಸಂಪರ್ಕವನ್ನು ಸರಿಪಡಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ಗಳು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.