15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲೂ ಸದ್ದು ಮಾಡಿದ ಶಬರಿಮಲೆ ವಿವಾದ
ಮಂಗಳೂರು, ನವೆಂಬರ್.17:ಶಿಕ್ಷಣ ಕಾಶಿ ಎಂದೇ ಗುರುತಿಸಲಾಗುವ ಮೂಡಬಿದ್ರೆಯಲ್ಲಿ ಆರಂಭಗೊಂಡಿರುವ ಕನ್ನಡ ನಾಡು-ನುಡಿ-ಸಂಸ್ಕೃತಿ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2018ರ ಸಮ್ಮೇಳನದಲ್ಲಿ ಶಬರಿಮಲೆ ವಿಚಾರ ಸದ್ದು ಮಾಡಿದೆ.
ಆಳ್ವಾಸ್ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಡಾ.ಮಲ್ಲಿಕಾ ಎಸ್ .ಘಂಟಿ ತಮ್ಮ ಭಾಷಣದಲ್ಲಿ ಶಮರಿಮಲೆ ವಿವಾದವನ್ನು ಪ್ರಸ್ತಾಪಿಸಿದ್ದಾರೆ.
ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಧಾರ್ಮಿಕ ರಾಜಕಾರಣ ಅಡ್ಡಿಯಾಗುತ್ತಿದೆ. ಎಲ್ಲಾ ವಯೋಮಿತಿಯ ಮಹಿಳೆಯರು ದೇವಾಲಯ ಪ್ರವೇಶಿಸಲು ವಿರೋಧವಿರುವುದರ ಹಿಂದೆ ಬಹುದೊಡ್ಡ ರಾಜಕಾರಣವಿದೆ ಎಂದು ಅವರು ಆಭಿಪ್ರಾಯ ವ್ಯಕ್ತಪಡಿಸಿದರು.
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಮೂಲಕ ಸುಪ್ರೀಂ ಕೋರ್ಟ್ ಸಂವಿಧಾನದ ಲಿಂಗ ಸಮಾನತೆಯ ಆಶಯವನ್ನು ಎತ್ತಿಹಿಡಿದಿದೆ. ಆದರೆ ಇದಕ್ಕೆ ಧಾರ್ಮಿಕ ಸಂವಿಧಾನ, ಧಾರ್ಮಿಕ ರಾಜಕಾರಣ ಅಡ್ಡಿಪಡಿಸುತ್ತಿದೆ ಎಂದು ಟೀಕಿಸಿದರು.
ಈ ದೇಶವನ್ನು, ದೇಶವಾಸಿಗಳನ್ನು, ಅವರ ರಕ್ಷಣೆಯನ್ನು, ಅವರನ್ನು ಮುನ್ನಡೆಸುವ ಶಕ್ತಿ ಇರುವುದು ಸಂವಿಧಾನಕ್ಕೋ ಅಥವಾ ನಂಬಿಕೆ- ಭಾವನೆಗಳಿಗೋ? ಎಂದು ಮಲ್ಲಿಕಾ ಪ್ರಶ್ನಿಸಿದರು.
ಕನ್ನಡದ ಉಗಮ ಹಲ್ಮಿಡಿ ಶಾಸನದಿಂದಾಯಿತು ಎನ್ನುವುದು ಅರ್ಧ ಸತ್ಯ:ಡಾ.ಷ.ಶೆಟ್ಟರ್
ಮಕ್ಕಳು ಮತ್ತು ಋತುಚಕ್ರ ನಿಂತ ಮಹಿಳೆಯರಿಗೆ ಮಾತ್ರ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಪ್ರವೇಶ ಎಂಬ ವಾದ ಕುತರ್ಕ. ಋತುಚಕ್ರದೊಳಗಿನ ಮಹಿಳೆಯರು ದೇವಾಲಯ ಪ್ರವೇಶ ಮಾಡುವುದರಿಂದ ದೇವಾಲಯದ ಪಾವಿತ್ರ್ಯತೆ ನಾಶವಾಗುತ್ತದೆ ಎನ್ನುವವರ ವಾದಕ್ಕೆ ಯಾವುದೇ ತಾತ್ವಿಕ, ತಾರ್ಕಿಕತೆಯಿಲ್ಲ.
ಆವಿಷ್ಕಾರದಲ್ಲಿ ತೊಡಗಿರುವ ದೇಶದಲ್ಲಿ ಋತುಚಕ್ರದ ವಿಚಾರದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ನೋಡಿದರೆ ನಾವು ನಿಂತ ನೆಲದಲ್ಲಿ ಚಲಿಸಿಯೇ ಇಲ್ಲವೆಂದೆನಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಸ್ಲಿಮರೇ ಇಲ್ಲದ ಹಳ್ಳಿಗಳಲ್ಲಿ ದರ್ಗಾಗಳಿವೆ
ತಮ್ಮ ಭಾಷಣದಲ್ಲಿ ಸಾಮರಸ್ಯದ ಬಗ್ಗೆಯೂ ಪ್ರಸ್ತಾಪಿಸಿದ ಮಲ್ಲಿಕಾ ಘಂಟಿ ಉತ್ತರ ಕರ್ನಾಟಕದಲ್ಲಿ ಮುಸ್ಲಿಮರೇ ಇಲ್ಲದ ಎಷ್ಟೋ ಹಳ್ಳಿಗಳಲ್ಲಿ ದರ್ಗಾಗಳಿವೆ. ಮೊಹರಂನಂತಹ ಆಚರಣೆಗಳನ್ನು ಹಿಂದೂಗಳೇ ಮಾಡುತ್ತಾರೆ. ದರ್ಗಾದ ದೇವರುಗಳಿಗೆ ಬ್ರಾಹ್ಮಣರ ಮನೆಯಿಂದಲೇ ಸಕ್ಕರೆ ಹೋದ ಮೇಲೆ ಮೊಹರಂ ಆಚರಿಸಲಾಗುತ್ತದೆ ಮಲ್ಲಿಕಾ ಘಂಟಿ ತಿಳಿಸಿದರು.
15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್. ಘಂಟಿ ಆಯ್ಕೆ
ಹಿಂಸೆ ಏಕೆ ವಿಜೃಂಭಿಸುತ್ತಿದೆ ?
ಕರಾವಳಿಯ ದೇವರುಗಳು ಮಾತ್ರ ಕೂಡಿ ಬದುಕುತ್ತಿಲ್ಲ ಎಂದ ಮಲ್ಲಿಕಾ ಘಂಟಿ ಜೈನ ಮುನಿಗಳು ನಡೆದಾಡಿದ, ಇಂದಿಗೂ ಬಸದಿಗಳು ಇರುವ ಈ ಸಂಪದ್ಭರಿತ ನೆಲದಲ್ಲಿ ಹಿಂಸೆ ಏಕೆ ವಿಜೃಂಭಿಸುತ್ತಿದೆ ? ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಆಳ್ವಾಸ್ ವಿದ್ಯಾರ್ಥಿಸಿರಿ 2018: ಸಮ್ಮೇಳನಾಧ್ಯಕ್ಷೆಯಾಗಿ ಸನ್ನಿಧಿ ಟಿ.ರೈ ಪೆರ್ಲ ಆಯ್ಕೆ
ಸಂಪ್ರದಾಯನಿಷ್ಠರ ನಿದ್ದೆಗೆಡಿಸಿದೆ
ವಿವಾಹೇತರ ಸಂಬಂಧ ಮತ್ತು ತ್ರಿವಳಿ ತಲಾಕ್ ಕುರಿತು ನ್ಯಾಯಾಲಯ ನೀಡಿದ ತೀರ್ಪುಗಳನ್ನು ಸಮಾಜ ಸಹಾನುಭೂತಿಯಿಂದ ನೋಡಿದ್ದರೆ ಆತಂಕವಿರಲಿಲ್ಲ. ಆದರೆ ಮಹಿಳಾ ಸ್ವಾತಂತ್ರ್ಯವನ್ನು ಊಳಿಗಮಾನ್ಯ ವ್ಯವಸ್ಥೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆಲೆಯಿಂದ ನೋಡಿದ ಕಾರಣದಿಂದಲೇ ಈ ತೀರ್ಪು ಸಂಪ್ರದಾಯನಿಷ್ಠರನ್ನು ನಿದ್ದೆಗೆಡಿಸಿದೆ ಎಂದು ಮಲ್ಲಿಕಾ ಆತಂಕ ವ್ಯಕ್ತಪಡಿಸಿದರು.
ಬೆಲೆ ನಿಗದಿಗೊಳಿಸುವ ಹಕ್ಕು ನೀಡಬೇಕು
ತಮ್ಮ ಭಾಷಣದಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಪ್ರಸ್ತಾಪಿಸಿದ ಡಾ. ಮಲ್ಲಿಕಾ ಘಂಟಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಡೆಯುತ್ತಿದೆ. ಆತ ಆರ್ಥಿಕವಾಗಿ ಮುಂದೆ ಬರಬೇಕಾದರೆ ರೈತ ಬೆಳೆದ, ಉತ್ಪಾದಿಸಿದ ವಸ್ತುಗಳಿಗೆ ಅವನೇ ಬೆಲೆ ನಿಗದಿಗೊಳಿಸುವ ಹಕ್ಕು ನೀಡಬೇಕು.
ಬೆಳೆಗೆ ಬೆಲೆಯಿಲ್ಲದೆ ಬೀದಿಗೆ ಚೆಲ್ಲಿ ಹೋಗುವ ರೈತನ ಅಸಹಾಯಕತೆ ಆಕ್ರೋಶವಾಗುವ ಮೊದಲು ಆಡಳಿತ, ಸಮಾಜ ಈ ಕುರಿತು ಗಂಭೀರ ಚಿಂತನೆ ನಡೆಸಬೇಕು ಎಂದು ಅವರು ಸರಕಾರಕ್ಕೆ ಕಿವಿಮಾತು ಹೇಳಿದರು.