ಸಿನಿಮಾ ಮಂದಿಯ ಹಣ ಉಳಿಸಿದ ಮಂಗಳೂರಿನ ಕೆಸರುಗದ್ದೆ ಕ್ರೀಡಾಕೂಟ
ಮಂಗಳೂರು, ಸೆಪ್ಟೆಂಬರ್ 18: ತುಳು ಸಿನಿಮಾವೊಂದಕ್ಕೆ ಗ್ರಾಮೀಣ ಕ್ರೀಡಾಕೂಟದ ದೃಶ್ಯವೊಂದು ಬೇಕಾಗಿತ್ತು. ಅದೇ ವೇಳೆಗೆ ಕುತ್ತಾರು ಅಂಬ್ಲಮೊಗರುವಿನ ದೋಟೆಮಾರು ಗದ್ದೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಆಯೋಜನೆಯಾಗಿತ್ತು.
ಅಲ್ಲಿಗೆ ಕಲಾವಿದರ ಜತೆಗೆ ಬಂದ ಚಿತ್ರ ತಂಡ ದೃಶ್ಯಗಳನ್ನು ಚಿತ್ರೀಕರಣಗೊಳಿಸಿತು. ಹೀಗೆ ಸೆಟ್ ಹಾಕದೆಯೇ, ಸಹ ಕಲಾವಿದರನ್ನು ಬಳಸಿಕೊಳ್ಳದೆ ಸುಲಭವಾಗಿ ಚಿತ್ರೀಕರಣ ಮಾಡಿ ಹಣ ಉಳಿಸಿಕೊಂಡಿತು. ತುಳುವಿನಂತ ಸಣ್ಣ ಬಜೆಟಿನ ಸಿನಿಮಾಗೆ ಇದರಿಂದ ಲಾಭವಾಯಿತು.
ಜನಸೇವಾ ಯುವಕ ಮಂಡಲ ಅಂಬ್ಲಮೊಗರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ದ.ಕ ಜಿಲ್ಲಾ ಪಂಚಾಯತ್ ಜಂಟಿ ಆಶ್ರಯದಲ್ಲಿ ಕುತ್ತಾರು ಅಂಬ್ಲಮೊಗರುವಿನ ದೋಟೆಮಾರು ಗದ್ದೆಯಲ್ಲಿ ಭಾನುವಾರ "ಬಲೇ ಕೆಸರ್ಡು ಗೊಬ್ಬುಗ" ಹೆಸರಿನಲ್ಲಿ ತುಳುನಾಡಿನ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಈ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ತುಳುನಾಡಿನ ಸಂಸ್ಕೃತಿಯನ್ನು ನೆನಪಿಸುವ ಕ್ರೀಡಾಕೂಟಗಳು
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, "ಪ್ರತೀ ವರುಷವೂ ಜನಸೇವಾ ಯುವಕ ಮಂಡಲದ ಸದಸ್ಯರು ಎಲ್ಲಾ ಜಾತಿ, ಮತ ಪಕ್ಷದವರನ್ನು ಒಟ್ಟುಗೂಡಿಸಿ ತುಳುನಾಡಿನ ಸಂಸ್ಕೃತಿಯನ್ನು ನೆನಪಿಸುವ ಕ್ರೀಡಾಕೂಟಗಳನ್ನು ಆಚರಿಸುವುದರೊಂದಿಗೆ ಇಡೀ ದೇಶಕ್ಕೆ ಉತ್ತಮ ಸಂದೇಶವನ್ನು ಸಾರುತ್ತಿದ್ದಾರೆ. ಜಗತ್ತಿನಲ್ಲಿ ಬಲು ಮುಖ್ಯವಾಗಿ ಮಾನವ ಧರ್ಮವೊಂದೇ ಶ್ರೇಷ್ಠವಾಗಿದ್ದು, ಮಾನವೀಯ ಮನೋಭಾವವನ್ನು ಪರಸ್ಪರ ಬಲಗೊಳಿಸಲು ಇಂತಹ ಕ್ರೀಡಾಕೂಟಗಳೇ ಉತ್ತಮ ವೇದಿಕೆಯಾಗಿದೆ," ಎಂದರು.
ಕೃಷಿಯಲ್ಲಿ ಆಸಕ್ತಿ ಮೂಡುವಂತಾಗಬೇಕು
ಅಧ್ಯಕ್ಷೀಯ ಸ್ಥಾನವಹಿಸಿದ್ದ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ, "ತುಳುನಾಡಿನ ಕೃಷಿಕ ಕುಟುಂಬದ ಯುವಪೀಳಿಗೆಯಿಂದು ವೈಟ್ ಕಾಲರ್ ಹುದ್ದೆಗಳನ್ನು ಅರಸಿ ನಗರದಲ್ಲಿ ನೆಲೆಸಿ ಕೃಷಿಯಿಂದ ವಿಮುಖರಾಗಿದ್ದಾರೆ. ಸರಕಾರವೂ ವಿವಿಧ ಯೋಜನೆ, ಕಾರ್ಯಕ್ರಮಗಳ ಮೂಲಕ ಕೃಷಿ ಮತ್ತು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುತ್ತಿವೆ. ಜತೆಗೆ ಸಂಘ, ಸಂಸ್ಥೆಗಳು ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದಲಾದರೂ ಮಕ್ಕಳು, ಯುವ ಜನತೆಯಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡುವಂತಾಗಬೇಕು," ಎಂದು ಆಶಿಸಿದರು.
ಸಿನಿಮಾ ಕಲಾವಿದರು, ಗಣ್ಯರ ಉಪಸ್ಥಿತಿ
ಉದ್ಯಮಿ ಸತೀಶ್ ಮುಂಚೂರು, ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಅಂಬ್ಲಮೊಗರು ಪಡ್ಯಾರಮನೆ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಮಂಗಳೂರು, ತುಳು ಚಿತ್ರನಟ ಅರವಿಂದ ಬೋಳಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಪ್ರದೀಪ್ ಡಿಸೋಜಾ, ಮೊದಲಾದವರು ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು.
"ತುಳು ನಾಡಿನ ಸಂಸ್ಕೃತಿ ನಮ್ಮಿಂದಲೇ ಉಳಿಯಬೇಕಿದೆ. ನಮ್ಮ ನಾಡಿನ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜತೆಗೆ ಕಿರಿಯರಿಗೂ ಪರಿಚಯಿಸುವ ಇಂತಹ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಘ-ಸಂಸ್ಥೆಗಳು ಆಯೋಜಿಸಬೇಕು ಅದಕ್ಕೆ ಬೇಕಾದ ಸಹಕಾರ ನೀಡಲು ಸಿದ್ಧ," ಎಂದು ದಿನೇಶ್ ಶೆಟ್ಟಿ ಹೇಳಿದರು.
"ಆಪಿನ ಪೂರ ಎಡ್ಡೆಗೆ"ಸಿನೆಮಾ ಚಿತ್ರೀಕರಣ
ಅಂಬ್ಲಮೊಗರು ದೋಟೆಮಾರು ಗದ್ದೆಯಲ್ಲಿ ಕೆಸರು ಕ್ರೀಡಾಕೂಟ ಆಯೋಜಿಸಿದನ್ನು ತಿಳಿದಿದ್ದ "ಆಪಿನ ಪೂರ ಎಡ್ಡೆಗೆ"(ತುಳು-ಕನ್ನಡ)ಚಿತ್ರ ತಂಡವು ಆದಿತ್ಯವಾರದಂದು ಇಲ್ಲಿ ಚಿತ್ರೀಕರಣ ನಡೆಸಿತು.
ಚಿತ್ರತಂಡವು ದಿನವಿಡೀ ಚಿತ್ರದಲ್ಲಿ ಬರುವಂತಹ ಗ್ರಾಮೀಣ ಕ್ರೀಡಾ ಸ್ಫರ್ಧೆಯ ಸನ್ನಿವೇಶವನ್ನು ಸೆರೆ ಹಿಡಿಯಿತು. ತುಳು ರಂಗ ಹಾಗೂ ಚಲನಚಿತ್ರ ಹಾಸ್ಯನಟರಾದ ಅರವಿಂದ ಬೋಳಾರ್ ಅವರ ಹಾಸ್ಯ ಸನ್ನಿವೇಶವನ್ನು ಕ್ರೀಡಾಕೂಟದ ಗದ್ದೆಯಲ್ಲೇ ಚಿತ್ರೀಕರಿಸಲಾಯಿತು.
ಈ ವೇಳೆ ಅರವಿಂದ ಬೋಳಾರ್ ಅವರ ನಟನೆಯನ್ನು ನೋಡಲು ನೂರಾರು ಮಂದಿ ಕಿಕ್ಕಿರಿದು ಜಮಾಯಿಸಿದ್ದರು. ನಾಲ್ಕು ನಾಯಕ ನಟರನ್ನು ಹೊಂದಿರುವ ಈ ಚಿತ್ರದಲ್ಲಿ ಈಗಾಗಲೇ"ಒಂದು ಮೊಟ್ಟೆಯ ಕಥೆ" ಕನ್ನಡ ಚಿತ್ರದಲ್ಲಿ ಸಹನಟ ಪಾತ್ರದಲ್ಲಿ ಮಿಂಚಿದ್ದ ಮಂಗಳೂರಿನ ವಿಜೆ ವಿನೀತ್ ಅವರು ಪ್ರಮುಖ ನಾಯಕ ನಟನಾಗಿ ನಟಿಸುತ್ತಿದ್ದಾರೆ.
ಖ್ಯಾತ ಕನ್ನಡ ಚಲನಚಿತ್ರ ನಿದೇಶಕರಾದ ಪ್ರವೀಣ್ ಶೆಟ್ಟಿ ತೊಕ್ಕೊಟ್ಟು ಅವರು ಚಿತ್ರಕ್ಕೆ ಆಕ್ಷನ್,ಕಟ್ ಹೇಳುತ್ತಿದ್ದಾರೆ.