ಮಂಗಳೂರು: ಐಟಿ ದಾಳಿ, ಒಂದೇ ದಿನದಲ್ಲಿ ಸಿಕ್ಕಿರೋದು ರು.172 ಕೋಟಿ!
ಫೆ.1ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಒಂದೇ ದಿನ ಬರೋಬ್ಬರಿ 172 ಕೋಟಿ ರು. ಅಘೋಷಿತ ಆದಾಯ ಪತ್ತೆಯಾಗಿದೆ.
ಮಂಗಳೂರು, ಫೆಬ್ರವರಿ. 21 : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಫೆಬ್ರವರಿ 1ರಂದು ನಡೆಸಿದ ದಾಳಿ ವೇಳೆ ಒಂದೇ ದಿನ ಬರೋಬ್ಬರಿ 172 ಕೋಟಿ ರು. ಮೊತ್ತದ ಅಘೋಷಿತ ಆದಾಯವನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಕರ್ನಾಟಕ-ಗೋವಾ ಮಹಾನಿರ್ದೇಶಕ ಬಿ.ಆರ್. ಬಾಲಕೃಷ್ಣನ್ ತಿಳಿಸಿದರು.
ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಮಂಗಳೂರು ವಲಯದ ನೂತನ ಕಚೇರಿಯನ್ನು ಸೋಮವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಒಂದು ದಿನ ನಡೆಸಿದ ಕಾರ್ಯಾಚರಣೆಯಲ್ಲಿ ಇಷ್ಟೊಂದು ಮೊತ್ತದ ಹಣ ಪತ್ತೆಯಾಗಿರುವುದು ಇದೇ ಪ್ರಥಮ ಬಾರಿ.
ವಶಕ್ಕೆ ಪಡೆದಿರುವ ಆದಾಯದ ಕುರಿತಂತೆ ತನಿಖೆ ಮುಂದುವರೆದಿದ್ದು, ಇದು ಪೂರ್ಣಗೊಳ್ಳಲು ನಾಲ್ಕು ತಿಂಗಳಾದರೂ ಬೇಕಾಗುತ್ತದೆ ಎಂದರು.
ಈ ಹಿಂದೆ 2016ರ ಆಗಸ್ಟ್ ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 101 ಕೋಟಿ ರು. ಅಘೋಷಿತ ಆಸ್ತಿ ಪತ್ತೆಹಚ್ಚಲಾಗಿತ್ತು. ಆದರೆ, ಈ ಬಾರಿ ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ.
ಇದಲ್ಲದೆ ನವೆಂಬರ್ 8ರ ನೋಟು ಅಮಾನ್ಯದ ಬಳಿಕ ನಡೆದ ದಾಳಿಯಲ್ಲಿ ಪತ್ತೆ ಮಾಡಿದ ನಗದು ಹಣ ಇದಾಗಿದೆ. ಇದರೊಂದಿಗೆ ಸಹಕಾರ ಸಂಸ್ಥೆಗಳಲ್ಲಿ ನಡೆದಿರುವ ಅನುಮಾನಾಸ್ಪದ ರೀತಿಯ ಹಣ ಠೇವಣಿ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ಬಹುತೇಕ ಸಹಕಾರಿ ಸಂಸ್ಥೆಗಳು ಕೆವೈಸಿ ನಿಯಮಗಳನ್ನು ಪಾಲಿಸದೇ ಬೃಹತ್ ಮೊತ್ತದ ಹಣವನ್ನು ಪಡೆಯುತ್ತಿರುವುದು ಪತ್ತೆಯಾಗಿದೆ. ಇಂತಹ ಪ್ರಕರಣಗಳ ಪತ್ತೆಗೆ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.