23 ಕೇಸಿನಲ್ಲಿದ್ದ ರೌಡಿ ಇಲ್ಯಾಸ್ ಕೊಲೆಯಾಗಿದ್ದು ಹೇಗೆ?
ಮಂಗಳೂರು, ಜನವರಿ 13: ಟಾರ್ಗೆಟ್ ಗ್ಯಾಂಗ್ ನ ಲೀಡರ್ ಇಲ್ಯಾಸ್ ನನ್ನು ಶನಿವಾರ ಮುಂಜಾನೆ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹಲವು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಈತ ಎರಡು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ.
ಮಂಗಳೂರಿನ ಜಪ್ಪು ಕುಡ್ಪಾಡಿ ಎಂಬಲ್ಲಿರುವ ಮಸೀದಿ ಎದುರು ಫ್ಲಾಟ್ ನಲ್ಲಿ ಪತ್ನಿಯೊಂದಿಗೆ ಇಲ್ಯಾಸ್ ವಾಸವಾಗಿದ್ದ. ಶನಿವಾರ ಬೆಳಗ್ಗೆ ದುಷ್ಕರ್ಮಿಗಳಿಬ್ಬರು ಮನೆ ಬಾಗಿಲನ್ನು ಬಡಿದಿದ್ದಾರೆ. ಇಲ್ಯಾಸ್ ಪತ್ನಿ ಬಾಗಿಲು ತೆರೆದಾಗ ಮನೆಯೊಳಗೆ ನುಗ್ಗಿ, ಮಲಗಿದ್ದ ಇಲ್ಯಾಸ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಮಂಗಳೂರಿನಲ್ಲಿ ಗ್ಯಾಂಗ್ ವಾರ್, ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆ
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಲ್ಯಾಸ್ ನನ್ನು ಆಸ್ಪತ್ರೆ ಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟಿದ್ದಾನೆ.
ಇಲ್ಯಾಸ್ ರೌಡಿ ಶೀಟರ್ ಆಗಿದ್ದ. 23ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗುಯಾಗಿದ್ದ. ಹನಿಟ್ರ್ಯಾಪ್, ಸುಲಿಗೆ, ಅಪಹರಣ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿದ್ದವು. ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪಹರಿಸಿ, ಅವರ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಈತನಾಗಿದ್ದ.
ಇಲ್ಯಾಸ್ ಉಳ್ಳಾಲ ಬ್ಲಾಕ್ ನ ಯುವ ಕಾಂಗ್ರೆಸ್ ನ ಉಪಾಧ್ಯಕ್ಷನಾಗಿದ್ದ. ಈಚೆಗೆ ಸಚಿವ ಯು.ಟಿ.ಖಾದರ್ ಜೊತೆಗಿದ್ದ ಇಲ್ಯಾಸ್ ಫೋಟೋ ವೈರಲ್ ಆಗಿತ್ತು. ಪ್ರಕರಣ ಒಂದರ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿ ಮಂಗಳೂರಿಗೆ ಕರೆತಂದಿದ್ದರು.