ಮಂಗಳೂರು: ಮೇಯರ್ ಮೇಡಂ, ಜಾಹೀರಾತು ಫಲಕ ತೆರವುಗೊಳಿಸುವುದು ಯಾವಾಗ?
"ಅನುಮತಿರಹಿತ ಬ್ಯಾನರ್ ಎಪ್ರಿಲ್ ಒಂದರ ಬಳಿಕ ಕಂಡು ಬಂದಲ್ಲಿ ಪಾಲಿಕೆಯೇ ಇದನ್ನು ಸ್ವಚ್ಛಗೊಳಿಸಲಿದೆ,” ಎಂಬಿತ್ಯಾದಿಯಾಗಿ ಹೇಳಿಕೆಗಳನ್ನು ನೀಡಿದ್ದ ಮಂಗಳೂರು ಮೇಯರ್ ಕವಿತಾ ಸನಿಲ್ ಯಾಕೋ ಮೌನಕ್ಕೆ ಶರಣಾಗಿದ್ದಾರೆ.
ಮಂಗಳೂರು, ಏಪ್ರಿಲ್ 5: "ಮಂಗಳೂರು ನಗರ ಸುಂದರ ಕಾಣಬೇಕು. ಮಂಗಳೂರು ಸ್ವಚ್ಛ ನಗರವಾಗಿ ಹೆಗ್ಗಳಿಕೆ ಹೊಂದಬೇಕು. ಈ ನಿಟ್ಟಿನಲ್ಲಿ ನಾನು ಎಪ್ರಿಲ್ ಒಂದರಿಂದ ನಗರದಲ್ಲೆಡೆ ಇರುವ ಪ್ಲಾಸ್ಟಿಕ್ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಬಾವುಟಗಳನ್ನು ತೆರವುಗೊಳಿಸಲು ಸೂಚಿಸಿದ್ದೇನೆ," ಹೀಗಂತ ಮಂಗಳೂರಿನ ನೂತನ ಮೇಯರ್ ಕವಿತಾ ಸನಿಲ್ ಭಾಷಣ ಬಿಗಿಯುತ್ತಿದ್ದರೆ ಕೇಳಿದವರೆಲ್ಲಾ ಅಹುದಹುದು ಅನ್ನುತ್ತಿದ್ದರು.
"ಅನುಮತಿರಹಿತ ಬ್ಯಾನರ್ ಎಪ್ರಿಲ್ ಒಂದರ ಬಳಿಕ ಕಂಡು ಬಂದಲ್ಲಿ ಪಾಲಿಕೆಯೇ ಇದನ್ನು ಸ್ವಚ್ಛಗೊಳಿಸಲಿದೆ. ಸ್ವಚ್ಛತೆಗೆ ನಾನು ಮೊದಲ ಆದ್ಯತೆ ನೀಡುತ್ತೇನೆ," ಎಂಬಿತ್ಯಾದಿಯಾಗಿ ಹೇಳಿಕೆಗಳನ್ನು ಮಂಗಳೂರು ಮೇಯರ್ ಹೇಳಿದ್ದರು. ಆದರೆ ತಮ್ಮ ಮಾತುಗಳನ್ನೇ ಕವಿತಾ ಸನಿಲ್ ಮರೆತುಬಿಟ್ಟಿದ್ದಾರೆ ಎಂದು ಜನ ಮಾತಾಡುತ್ತಿದ್ದಾರೆ.[ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?]
ಏಪ್ರಿಲ್ 1 ರಿಂದ ಎಂದು ಬೇರೆ ಹೇಳಿರುವುದರಿಂದ ಇದೇನು ಏಪ್ರಿಲ್ ಫೂಲಾ ಹೇಗೆ ಎಂದೂ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಬ್ಯಾನರ್, ಬಂಟಿಂಗ್ಸ್, ಬಾವುಟಗಳ ಹಾರಾಟ
ಈಗಲೂ ನಗರದೆಲ್ಲೆಡೆ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಬಾವುಟಗಳ ಹಾರಾಟ ಜೋರಾಗಿದೆ. ಇಷ್ಟೇ ಏಕೆ ಸ್ವತಃ ಮೇಯರ್ ಕವಿತಾ ಸನಿಲ್ ರಿಗೆ ಶುಭ ಕೋರಿ ನಗರದೆಲ್ಲೆಡೆ ಬೃಹತ್ ಬ್ಯಾನರುಗಳನ್ನು ಅಳವಡಿಸಲಾಗಿದೆ. ಕೆಪಿಟಿಯಿಂದ ಬೊಂದೇಲ್ ತನಕ ರಸ್ತೆಯಲ್ಲಿ ಸಾಗಿದರೆ ಮೇಯರಿಗೆ ಶುಭ ಕೋರಿ ಹಾಕಲಾಗಿರುವ ಬೃಹತ್ ಕಟೌಟುಗಳು ಕಂಡು ಬರುತ್ತಿವೆ.
ಅನುಮತಿಯಿಲ್ಲದ ಬ್ಯಾನರ್ ತೆರವು ಅಂದಿದ್ದರು
ಅನುಮತಿ ಪಡೆದು ಅಳವಡಿಸಿರುವ ಬ್ಯಾನರುಗಳನ್ನು ಬಿಟ್ಟು ಉಳಿದವುಗಳನ್ನು ತೆರವುಗೊಳಿಸುವುದಾಗಿ ಮೇಯರ್ ಹೇಳಿದ್ದರು. ಆದರೆ ಇದೀಗ ಪಾಲಿಕೆ ಅಧಿಕಾರಿಗಳು ಎಲ್ಲೂ ಕಾರ್ಯಾಚರಣೆ ನಡೆಸಿ ಬ್ಯಾನರುಗಳನ್ನು ತೆರವುಗೊಳಿಸಿದಂತೆ ಕಂಡು ಬರುತ್ತಿಲ್ಲ.[ಮಂಗಳೂರು ಮಹಾನಗರ ಪಾಲಿಕೆಯಲ್ಲಿನ್ನು 'ಕವಿತಾ' ದರ್ಬಾರ್]
ನಿತ್ಯ ಬ್ಯಾನರುಗಳ ದರ್ಶನ
ನಗರದ ಪಂಪ್ವೆಲ್, ಲಾಲಬಾಗ್, ಹಂಪನಕಟ್ಟೆ, ಜ್ಯೋತಿ ವೃತ್ತ, ಎಕ್ಕೂರು ಜಂಕ್ಷನುಗಳಲ್ಲಿ ನಿತ್ಯ ಬ್ಯಾನರುಗಳು ಕಂಡು ಬಂದರೆ, ಜಾತ್ರೆ, ಉತ್ಸವಗಳು ನಡೆಯುವ ಕಡೆಗಳಲ್ಲಿ ಇಂತಹ ಬ್ಯಾನರುಗಳು ಹೆಚ್ಚಾಗಿಯೇ ಕಂಡುಬರುತ್ತವೆ. ಕಾರ್ಯಕ್ರಮ ಮುಗಿದ ಬಳಿಕವೂ ಇವುಗಳನ್ನು ತೆರವುಗೊಳಿಸದೇ ಮಾರ್ಗದ ಪಕ್ಕದಲ್ಲಿ, ಪಾದಚಾರಿಗಳ ಕಾಲಡಿಗೆ ಬಿದ್ದುಕೊಂಡಿರುವುದು ಕಂಡುಬರುತ್ತದೆ.
ಬ್ಯಾನರ್ ತೆರವು ಸಾಧ್ಯವೇ?
ಪಾಲಿಕೆ ವ್ಯಾಪ್ತಿಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ. ಮೆರವಣಿಗೆ, ಜಾಥಾ, ಪ್ರತಿಭಟನೆ, ಬಂದ್ ಇತ್ಯಾದಿ ಎಲ್ಲದಕ್ಕೂ ಪ್ರಚಾರ ನೀಡಲು ಬ್ಯಾನರುಗಳು ಅತೀ ಅಗತ್ಯ. ರಾಜಕೀಯ ಪಕ್ಷಗಳ ಬ್ಯಾನರುಗಳು ಕೂಡಾ ನಗರದಲ್ಲಿ ಕಂಡುಬರುತ್ತದೆ. ತಮ್ಮದೇ ಪಕ್ಷದ ಕಾರ್ಯಕ್ರಮಗಳು ನಡೆದಾಗ ಹಾಕಲಾಗುವ ಶುಭಕೋರುವ ಬ್ಯಾನರುಗಳನ್ನು ತೆರವುಗೊಳಿಸಲು, ಇಲ್ಲವೇ ಅನುಮತಿ ನಿರಾಕರಿಸಲು ಮೇಯರಿಗೆ ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ.[ಮಂಗಳೂರು ಎಎಸ್ಐ ಐತಪ್ಪನ ಮೇಲೆ ಮಾರಣಾಂತಿಕ ಹಲ್ಲೆ]
ದಂಡವೇ ಮದ್ದು
ಬ್ಯಾನರ್, ಬಂಟಿಂಗ್ಸುಗಳನ್ನು ಅಳವಡಿಸಿದ ಬಳಿಕ ಅವುಗಳನ್ನು ಹಾಕಿದ ಆಯಾ ಕಾರ್ಯಕ್ರಮದ ಸಂಘಟಕರೇ ತೆರವುಗೊಳಿಸುವಂತಾಗಬೇಕು. ಆದರೆ ಇದನ್ನು ಹಾಕಿದವರಿಗೆ ಮತ್ತೆ ತೆಗೆಯಲು ಉತ್ಸಾಹ ಇರುವುದಿಲ್ಲ. ಇಂತಹವರಿಗೆ ದಂಡ ವಿಧಿಸಿದರೆ ನಗರವನ್ನು ಹೆಚ್ಚು ಸುಂದರವನ್ನಾಗಿರಿಸಲು ಸಾಧ್ಯವಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.