ಯಕ್ಷಗಾನದಲ್ಲಿ 'ತುಟಿಗೆ ತುಟಿ ಬೆಸೆದ' ಅಸಲಿಯತ್ತು ಬಿಚ್ಚಿಟ್ಟ ಕಲಾವಿದ
Recommended Video
ಮಂಗಳೂರು, ಸೆಪ್ಟೆಂಬರ್ 21 : ಯಕ್ಷಗಾನ ಪ್ರಸಂಗದಲ್ಲಿ ತುಟಿಗೆ ತುಟಿ ಬೆಸೆಯಲಾಗಿದೆ ಎನ್ನಲಾದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡಿದೆ. ಈ ವಿಡಿಯೋ ನೋಡಿದವರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಕ್ಷಗಾನಕ್ಕೆ ಈ ಪ್ರಸಂಗದಿಂದ ಅವಮಾನ ಆಗಿದೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.
ಯಕ್ಷಗಾನವು ಸಿನಿಮಾದಂತೆ ಮನರಂಜನಾ ಮಾಧ್ಯಮ ಮಾತ್ರವಲ್ಲ. ದೇವರನ್ನು ಒಲಿಸುವುದಕ್ಕಾಗಿ ನಡೆಸುವ ಒಂದು ಪೂಜೆ ಎಂಬ ನಂಬಿಕೆ ಕರಾವಳಿಯ ಜನರಲ್ಲಿದೆ. ಶತಮಾನಗಳಿಂದಲೂ ಕಟೀಲು, ಧರ್ಮಸ್ಥಳ ಮೊದಲಾದ ಮೇಳಗಳು ಹರಕೆಯ ರೂಪದಲ್ಲಿಯೇ ಯಕ್ಷಗಾನವನ್ನು ಆಡಿಕೊಂಡು ಬಂದಿವೆ.
ಬೀದಿಗೆ ಬಿದ್ದ ಹಿರಿಯ ಯಕ್ಷ ಜೀವಕ್ಕೆ ಆಸರೆಯಾದ ಪಟ್ಲ ಸತೀಶ್ ಶೆಟ್ಟಿ
ಆದರೆ, ಆಧುನಿಕತೆಯ ಭರಾಟೆಗೆ ಸಿಕ್ಕಿ ಯಕ್ಷಗಾನ ತನ್ನ ನೈಜತೆಯನ್ನು ಇಂದಿಗೂ ಕಳೆದುಕೊಂಡಿಲ್ಲ. ಹಾಡುಗಾರಿಕೆಯ ಶೈಲಿ, ಕುಣಿತದ ನಡೆಗಳು ಬದಲಾವಣೆಯಾಗಿವೆ ಅನ್ನೋದು ಹೌದು. ಹಾಗಂತ ಯಕ್ಷಗಾನದ ರಂಗದಲ್ಲಿ ಅಶ್ಲೀಲತೆ ಕಂಡಿಲ್ಲ.
ಕೆಲ ದಿನದ ಹಿಂದೆ ನಡೆದ ಯಕ್ಷಗಾನ ಪ್ರಸಂಗವೊಂದರ ಶೃಂಗಾರ ಸನ್ನಿವೇಶದಲ್ಲಿ ತುಟಿಗೆ ತುಟಿ ಬೆಸೆಯುವ ದೃಶ್ಯ ತಂದಿದ್ದಾರೆ ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ದೂರು. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಯಕ್ಷಗಾನ ಪ್ರಸಂಗದಲ್ಲಿ ಭಾಗವಹಿಸಿದ್ದ ಕಲಾವಿದ ರಾಜೇಶ್ ರೈ ಅಡ್ಕ ಅವರ ಮಾತುಗಳಲ್ಲೇ ಕೇಳಿ.
ಮೇಲ್ನೋಟಕ್ಕೆ ಹೀಗೆ ಕಾಣುತ್ತಿದೆ
ಇತ್ತೀಚೆಗೆ ನಡೆದ ನಾಟ್ಯವೈಭವ ಒಂದರ ಸಣ್ಣ ತುಣುಕನ್ನು ವಿರೋಧಿಸಿ ಅನೇಕ ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ವಾಸ್ತವವನ್ನು ಬಿಚ್ಚಿಡುವುದು ನನ್ನ ಕರ್ತವ್ಯವೆಂದು ತಿಳಿದು ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಪದ್ಯವೊಂದಕ್ಕೆ ಅಭಿನಯಿಸುವಾಗ ಮೇಲ್ನೋಟಕ್ಕೆ ಸಹಕಲಾವಿದನ ಕೆನ್ನೆಗೆ ಮುತ್ತಿಕ್ಕುವಂತೆ ಕಂಡರೂ ವಾಸ್ತವದಲ್ಲಿ ನಡೆದಿರುವುದು ಬೇರೆ.
ನಾಟ್ಯ ವೈಭವ ಗಿಳಿಪಾಠದಂತಲ್ಲ
ವೃತ್ತಿಪರ ಕಲಾವಿದರಾಗಿ ರಂಗದಲ್ಲಿ ಮಾಡಬೇಕಾದ ಎಲ್ಲವನ್ನೂ ಮೊದಲೇ ನಿರ್ಣಯಿಸಿ ಗಿಣಿಪಾಠ ಒಪ್ಪಿಸಿದಂತೆ ಅಭಿನಯಿಸುವುದಕ್ಕೆ ಸಾಧ್ಯವಿಲ್ಲ. ಅದರಲ್ಲೂ ನಾಟ್ಯವೈಭವದಲ್ಲಿ ನಾಟ್ಯದ ಮೂಲಕವೇ ಕಥೆಯ ಆಶಯವನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಅನಿವಾರ್ಯ ಇರುವುದರಿಂದ ಅಗತ್ಯಕ್ಕೆ ತಕ್ಕಂತೆ ಆಯಾ ಸನ್ನಿವೇಶದಲ್ಲೇ ಕಲಾವಿದರು ದೃಶ್ಯಗಳನ್ನು ರೂಪಿಸಬೇಕಾಗುತ್ತದೆ.
ಸನ್ನೆಯ ಮೂಲಕ ಸಂವಹನ
ದೃಶ್ಯವೊಂದು ಉತ್ತಮವಾಗಿ ರೂಪುಗೊಳ್ಳಬೇಕಾದರೆ ಕಲಾವಿದರ ನಡುವೆ ಸಮನ್ವಯ, ಸಂವಹನ ಅಗತ್ಯ. ಎಷ್ಟೋ ಸಲ ಸಹಕಲಾವಿದರಲ್ಲಿ ಕಣ್ಸನ್ನೆಯ ಮೂಲಕವೋ ಆಂಗಿಕ ಸನ್ನೆಯ ಮೂಲಕವೋ ರಂಗದಲ್ಲಿಯೇ ಮುಂದಿನ ನಡೆ ಹೇಗೆ ಎನ್ನುವ ಸುಳಿವನ್ನು ನೀಡಬೇಕಾಗುತ್ತದೆ.
ಔಚಿತ್ಯ ಮೀರುವ ಹಾಗಿಲ್ಲ
ಆದರೆ, ಈ ರೀತಿಯ ಸುಳಿವನ್ನು ನೀಡುವಾಗ ಕಲಾವಿದ ಪಾತ್ರದ ಔಚಿತ್ಯವನ್ನು ಮೀರಿ ಹೋಗುವ ಹಾಗಿಲ್ಲ. ಪ್ರೇಕ್ಷಕರ ಅರಿವಿಗೆ ಬಾರದಂತೆ ಸಹಕಲಾವಿದರಿಗೆ ಸೂಚನೆಗಳನ್ನು ಕೊಡಬೇಕಾದುದು ಅನಿವಾರ್ಯವಾಗುತ್ತದೆ. ಅನೇಕ ಬಾರಿ ಭಾಗವತರೂ ಕೂಡಾ ರಂಗದಲ್ಲಿಯೇ ಸನ್ನೆಯ ಮೂಲಕವೇ ಕಲಾವಿದರ ಜೊತೆ ಸಂವಹನ ಮಾಡುವುದುಂಟು. ಮೊನ್ನೆಯ ನಾಟ್ಯವೈಭವದಲ್ಲಿಯೂ ನಡೆದಿರುವುದು ಅಷ್ಟೇ.
ಸೂಚನೆಯನ್ನು ಕಿವಿಯಲ್ಲಿ ಹೇಳಿದೆ
ಭಾಗವತರಾದ ಪಟ್ಲ ಸತೀಶ್ ಶೆಟ್ಟರಿಂದ ಕಾರ್ಯಕ್ರಮವನ್ನು ಬೇಗ ಮುಗಿಸಬೇಕೆಂಬ ಸೂಚನೆ ನನಗೆ ಸಿಕ್ಕಿದ್ದರಿಂದ ಅದನ್ನು ಸಹಕಲಾವಿದರಾದ ಪ್ರಶಾಂತ್ ನೆಲ್ಯಾಡಿ ಗಮನಕ್ಕೆ ತರುವ ಅನಿವಾರ್ಯ ನನಗಿತ್ತು. ಶೃಂಗಾರ ಪದ್ಯವೊಂದಕ್ಕೆ ಅಭಿನಯಿಸುತ್ತಾ ನಾನು ಸಹಕಲಾವಿದರ ಕಿವಿಯಲ್ಲಿ ಭಾಗವತರ ಸೂಚನೆಯನ್ನು ಉಸುರಿದ್ದೇ ಹೊರತು ಮುತ್ತಿಕ್ಕಿದ್ದಲ್ಲ.
ಪ್ರೇಕ್ಷಕರಿಗೆ ಸೂಕ್ಷ್ಮ ಸಂವಹನ ಅರ್ಥವಾಗಲ್ಲ
ರಂಗಸ್ಥಳ ಮತ್ತು ಪ್ರೇಕ್ಷಕರ ನಡುವೆ ಅಂತರ ಇರುವುದರಿಂದ ಕಲಾವಿದರ ಇಂತಹ ಸೂಕ್ಷ್ಮ ಸಂವಹನ ಪ್ರೇಕ್ಷಕರ ಗಮನಕ್ಕೆ ಬರುವುದಿಲ್ಲ. ಹತ್ತು ಹದಿನೈದು ನಿಮಿಷದ ವಿಡಿಯೋ ನೋಡುವಾಗ ಕ್ಷಣಾರ್ಧದಲ್ಲಿ ನಡೆದ ಈ ಘಟನೆ ವಿಶೇಷಾರ್ಥವನ್ನೋ ಅಪಾರ್ಥವನ್ನೋ ಸೂಚಿಸದೇ ಹೋದರೂ ದೂರದಿಂದ ತೆಗೆದ ವಿಡಿಯೋವನ್ನೂ ಜೂಮ್ ಮಾಡುವುದರಿಂದ ಅಭಾಸವಾಗುತ್ತದೆ.
ಹಣೆಗೆ ಮುತ್ತಿಕ್ಕಿದ್ದು ಹೌದು
ಮುತ್ತಿಕ್ಕುವಂತೆ ಭಾಸವಾಗುವುದಕ್ಕೆ ಕ್ಯಾಮೆರಾ ಕೋನವೇ ಕಾರಣವಿರಬಹುದು. ಅಥವಾ ಎಡಗಿವಿಯಲ್ಲಿ ಸೂಚನೆ ಕೊಡುವುದರ ಬದಲಿಗೆ ಬಲಗಿವಿಯಲ್ಲಿ ಸೂಚನೆ ಕೊಟ್ಟದ್ದೇ ಕಾರಣವಿರಬಹುದು. ಎಡಿಟ್ ಮಾಡಿದ ಕೇವಲ ಇಪ್ಪತ್ತು ಸೆಕೆಂಡುಗಳ ತುಂಡು ದೃಶ್ಯವನ್ನೇ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದರಿಂದ ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿದೆ. ದಯವಿಟ್ಟು ಕೋಗ್ನೋಟ್ಟು ರಾಧಾಕೃಷ್ಣ ಅವರು ಯು ಟ್ಯೂಬ್ ನಲ್ಲಿ ಹಾಕಿರುವ ಸಂಪೂರ್ಣ ವಿಡಿಯೋವನ್ನು ನೋಡಿದರೆ ಅರ್ಥವಾದೀತು. ಹಾಗೆಂದು ಹಣೆಗೆ ಮುತ್ತಿಕ್ಕಿದ್ದನ್ನು ನಾನು ಅಲ್ಲಗಳೆಯುತ್ತಿಲ್ಲ.