ಹಿಂದೂ ವಿರೋಧಿಗಳನ್ನು ಕೊಲ್ಲದೆ ಬಿಡಲಾರೆ : ರವಿ ಪೂಜಾರಿ
ಮಂಗಳೂರು, ಅಕ್ಟೋಬರ್ 31 : ಯುವಜನ ಸೇವಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಗೆ ಮಾತ್ರವಲ್ಲ, ಆರೋಗ್ಯ ಸಚಿವ ಯುಟಿ ಖಾದರ್ ಮತ್ತು ಅರಣ್ಯ ಸಚಿವ ರಾಮನಾಥ ರೈ ಅವರ ವಿರುದ್ಧವೂ ಭೂಗತ ದೊರೆ ರವಿ ಪೂಜಾರಿ ಕಿಡಿ ಕಾರಿದ್ದಾನೆ.
ಇವರಿಬ್ಬರೂ ಕೂಡ ನನ್ನ ಹಿಟ್ ಲಿಸ್ಟ್ ನಲ್ಲಿದ್ದಾರೆ. ಹಿಂದೂ ಯುವಕರನ್ನು ಮುಟ್ಟಿದ್ರೆ ಸಹಿಸಲಾರೆ. ಕರಾವಳಿಯ ಇಸ್ಲಾಂ ಭಯೋತ್ಪಾದಕರಿಗೂ ಇದೊಂದು ಎಚ್ಚರಿಕೆ ಎಂದು ಆಸ್ಟ್ರೇಲಿಯಾದಿಂದ ಸುದ್ದಿವಾಹಿನಿಗೆ ಪೂಜಾರಿ ಕರೆ ಮಾಡುವ ಮೂಲಕ ಮತ್ತೆ ಹೂಂಕರಿಸಿದ್ದಾನೆ.
ಉಡುಪಿ ಮೂಲದ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಡಾನ್ ರವಿ ಪೂಜಾರಿ, ಸಚಿವ ಅಭಯಚಂದ್ರಗೆ ಬೆದರಿಕೆ ಕರೆ ಮಾಡಿದ್ದು ನಾನೇ, ಪ್ರಶಾಂತ್ ಹತ್ಯೆಯಲ್ಲಿ ಜೈನ್ ಕೈವಾಡ ದೃಢಪಟ್ಟರೆ ಅವರನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಮತ್ತೆ ಧಮ್ಕಿ ಹಾಕಿದ್ದಾನೆ. [ಅಭಯಚಂದ್ರ ಜೈನ್ಗೆ ರವಿ ಪೂಜಾರಿಯಿಂದ ಬೆದರಿಕೆ]
ಕೆಲ ದಿನಗಳ ಹಿಂದೆ ರವಿ ಪೂಜಾರಿ ಮೀನುಗಾರಿಕಾ ಸಚಿವ ಅಭಯಚಂದ್ರ ಅವರಿಗೆ ಬೆದರಿಕೆ ಕರೆಹಾಕಿದ್ದ. ಈ ಹಿನ್ನೆಲೆಯಲ್ಲಿ ಜೈನ್ ಗೆ ಮತ್ತವರ ನಿವಾಸಕ್ಕೆ ವಿಶೇಷ ಭದ್ರತೆಯನ್ನು ಒದಗಿಸಲಾಗಿತ್ತು. ಇದೀಗ ಮತ್ತೊಮ್ಮೆ ಪೂಜಾರಿ ಧಮ್ಕಿ ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮೂಡಬಿದರೆಯ ಬಜರಂಗದಳ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿಯನ್ನು ಬೆಳ್ಳಂಬೆಳಗ್ಗೆ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಹತ್ಯೆಯನ್ನು ಪಿಎಫ್ಐ ಸಂಘಟನೆ ನಡಸಿದೆ ಎಂದು ಬಿಜೆಪಿ ಮುಖಂಡ ಉಮಾನಾಥ್ ಕೋಟ್ಯಾನ್ ಅವರು ಆರೋಪಿಸಿದ್ದರು. ಪ್ರಶಾಂತ್ ಹತ್ಯೆಯ ಆರೋಪಿಗಳೊಂದಿಗೆ ಸಚಿವರು ಸಂಬಂಧ ಇಟ್ಟುಕೊಂಡಿದ್ದಾರೆ, ಅವರೇ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ದೂರಿದ್ದರು. ರಾಷ್ಟ್ರೀಯ ಚಾನಲ್ ಕೂಡ ಅಭಯಚಂದ್ರ ಅವರು ಪಿಎಫ್ಐ ಸಂಘಟನೆಯ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡಿದ್ದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ ವರದಿ ಬಿತ್ತರಿಸಿ ಸಂಘಪರಿವಾರದ ಆರೋಪಕ್ಕೆ ತುಪ್ಪ ಸುರಿದಿತ್ತು.
ಅಭಯಚಂದ್ರ ಮೂಡುಬಿದಿರೆಯ ಶಾಸಕರೆಂಬ ಹಿನ್ನೆಲೆಯಲ್ಲಿ ಪ್ರಶಾಂತ್ ಮನೆಗೆ ಹೋಗಿರಲಿಲ್ಲ. ಪ್ರಶಾಂತ್ ಹತ್ಯೆಯ ಬಳಿಕ ಶಾಂತಿ ಸಭೆಯನ್ನು ಆಯೋಜಿಸಿರಲಿಲ್ಲ. ಈ ಎಲ್ಲ ಅಂಶಗಳು ಅಭಯಚಂದ್ರ ಅವರು ಪ್ರಶಾಂತ್ ಹತ್ಯಾ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂಬ ಬಿಜೆಪಿಯ ವಾದಕ್ಕೆ ಪುಷ್ಟಿ ನೀಡಿತ್ತು. [ರವೀಂದ್ರ ಪೂಜಾರಿ ತಂಡದ ಐವರ ಬಂಧನ]