ಪತ್ರಕರ್ತ ಮನೋಹರ್ ಪ್ರಸಾದ್ರಿಗೆ ರಂಗ ಚಾವಡಿ ಪ್ರಶಸ್ತಿ
ಸುರತ್ಕಲ್, ನವೆಂಬರ್ 07 : "ತುಳುನಾಡಿನಲ್ಲಿದ್ದ ಕೌಟುಂಬಿಕ ಚೌಕಟ್ಟು ನಾಶವಾಗುತ್ತಿದೆ. ಇದರಿಂದಾಗಿ ನಾವು ಇಂದು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ" ಎಂದು ಖ್ಯಾತ ಪತ್ರಕರ್ತ ಉದಯವಾಣಿ ಪತ್ರಿಕೆಯ ಸುದ್ದಿ ವಿಭಾಗದ ಮುಖ್ಯಸ್ಥ ಮನೋಹರ್ ಪ್ರಸಾದ್ ವಿಷಾದ ವ್ಯಕ್ತಪಡಿಸಿದ್ದಾರೆ.
ಅವರು ಸುರತ್ಕಲ್ ಬಂಟರ ಭವನದಲ್ಲಿ ನಡೆದ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯಾದ 'ರಂಗ ಚಾವಡಿ' ಪ್ರಶಸ್ತಿಯನ್ನು ಸ್ವೀಕರಿಸಿ ಮಂಗಳವಾರ ಮಾತನಾಡುತ್ತಿದ್ದರು.
ಇದು ಕುಟುಂಬದಲ್ಲಿ ಪರಸ್ಪರ ಪ್ರೀತಿ ಕಡಿಯೆಮಾಗುತ್ತಿದೆ. ಅವಿಭಕ್ತ ಕುಟುಂಬ ಪದ್ಧತಿ ಇದ್ದಾಗ ಮನೆಯಲ್ಲಿ ಹತ್ತಿಪ್ಪತ್ತು ಜನರಿದ್ದರು. ಹತ್ತಾರು ಮಕ್ಕಳನ್ನು ತಾಯಿ, ಚಿಕ್ಕಮ್ಮ, ಅತ್ತೆ ಇತ್ಯಾದಿಯಾಗಿ ಯಾರಾದರೂ ನೋಡಿಕೊಳ್ಳುವವರಿದ್ದರು. ಆದರೆ ಈಗ ಹಾಗಿಲ್ಲ. ಕುಟುಂಬದಲ್ಲಿ ಪ್ರೀತಿಯ ಕೊರತೆ ಕಾಡುತ್ತಿದೆ. ನಗು ಎಂಬುದು ಕುಟುಂಬದಲ್ಲಿ ಮಾಯವಾಗಿಬಿಟ್ಟಿದೆ. ಇದರ ಪರಿಣಾಮವಾಗಿ ಅಲ್ಜೀಮೈಯರ್ ಅಂದರೆ ಮರೆಗುಳಿತನದ ರೋಗ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ನಾನು ಸಾವಿರಾರು ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿದ್ದೇನೆ. ಇದಕ್ಕೆ ಮೂಲ ಪ್ರೇರಣೆ ಯಕ್ಷಗಾನ. ನಾವು ಬಾಲಕರಾಗಿದ್ದಾಗ ರಾತ್ರಿ ಎಲ್ಲಾ ಆಟ ನೋಡಿ ಹಗಲಿನಲ್ಲಿ ಡಬ್ಬವನ್ನು ಬಡಿಯುತ್ತಾ ನಿದ್ದೆಗಣ್ಣಲ್ಲಿ ರಾತ್ರಿ ನೋಡಿದ ಪ್ರಸಂಗವನ್ನು ಪುನರಾವರ್ತಿಸುತ್ತಿದ್ದೆವು. ಯಕ್ಷಗಾನದಲ್ಲಿ ಮಾತನಾಡಿದಂತೆ ಮಾತನಾಡುತ್ತಿದ್ದೆವು. ಇದರ ಪರಿಣಾಮವಾಗಿ ನಾನು ಮಾತನಾಡುವುದಕ್ಕೆ ಕಲಿತಿದ್ದೇನೆ ಎಂದು ನೆನಪಿನಂಗಳಕ್ಕೆ ಜಾರಿದರು.
ಆದರೆ ಇಂದಿನ ಯುವ ಜನರಲ್ಲಿ ಈ ಆಸಕ್ತಿ ಕಡಿಮೆಯಾಗುತ್ತಿರುವುದು ಕಂಡು ಬರುತ್ತಿದೆ. ಇಲ್ಲಿ ನೂರಾರು ಮಂದಿ ಮಹಿಳೆಯರು ಮತ್ತು ಪುರುಷರು ಸಮಪ್ರಮಾಣದಲ್ಲಿ ನೆರೆದಿದ್ದಾರೆ. ಆದರೆ ಯುವಕರು ಎಲ್ಲಿದ್ದಾರೆ ಎಂದೇ ಅರ್ಥವಾಗುವುದಿಲ್ಲ ಎಂದು ಅವರು ವಿಷಾದಿಸಿದರು.
ಮುಂದಿನ ತಲೆ ಮಾರಿಗೆ ತುಳು ಸಿನಿಮಾವಲೋಕನ ಪುಸ್ತಕವು ತುಳು ಸಿನಿಮಾ ಮತ್ತು ಅದಕ್ಕಾಗಿ ದುಡಿದವರ ಬಗ್ಗೆ ಮಾಹಿತಿಯನ್ನು ನೀಡುತ್ತದೆ ಎಂದು ಅವರು, 'ಸಿನಿಮಾವಲೋಕನ' ಪುಸ್ತಕವನ್ನು ಹೊರತಂದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸಾಹಸ ನಿರ್ದೇಶಕ ರಾಮ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವರ ಜತೆಗಿನ ತಮ್ಮ ಒಡನಾಟವನ್ನು ಸ್ಮರಿಸಿದರು. ಈ ಪುರಸ್ಕಾರವು ತನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದಲ್ಲದೆ, ಆಗಾಗ ಅಸ್ಪಷ್ಟವಾಗಿ ಕೇಳಿ ಬರುತ್ತಿದ್ದ ವಿವಿಧ ಭಾರತಿಯನ್ನು ಫೈನ್ ಟ್ಯೂನ್ ಮಾಡಿದಂತೆ ನನ್ನ ಜವಾಬ್ದಾರಿಯನ್ನು ನೆನಪಿಸಿಕೊಟ್ಟಿದೆ ಎಂದು ಅವರು ಹೇಳಿದರು.
ಮನೋಹರ್ ಪ್ರಸಾದ್ ಅಭಿನಂದನೆಯ ಸಂದರ್ಭದಲ್ಲಿ ಕದ್ರಿ ನವನೀತ ಶೆಟ್ಟಿಯವರು ಅಭಿನಂದನಾ ಭಾಷಣ ಮಾಡಿದರು. ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.