ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಶಕ್ತಿ ಪ್ರದರ್ಶಿಸಿದ ರಮಾನಾಥ್ ರೈ
ಮಂಗಳೂರು, ಏಪ್ರಿಲ್ 19: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಚಿವ ರಮಾನಾಥ ರೈ ಇಂದು ನಾಮಪತ್ರ ಸಲ್ಲಿಸಿದರು. ಸಾವಿರಾರು ಕಾರ್ಯಕರ್ತರೊಂದಿಗೆ ಬಂಟ್ವಾಳದ ತಾಲೂಕು ಕಚೇರಿ ಮಿನಿ ವಿಧಾನಸೌಧಕ್ಕೆ ಆಗಮಿಸಿದ ರಮಾನಾಥ್ ರೈ, ಬಂಟ್ವಾಳ ಕ್ಷೇತ್ರದ ಚುನಾವಣಾ ಅಧಿಕಾರಿ ರವಿ ಬಸರಿಹಳ್ಳಿ ಅವರಿಗೆ ನಾಮಪತ್ರ ಸಲ್ಲಿಸಿದರು.
ರಮಾನಾಥ್ ರೈ ನಾಮಪತ್ರ ಸಲ್ಲಿಸುವ ಮೊದಲು ಬಂಟ್ವಾಳದಲ್ಲಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಸೇರಿದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ್ ರೈ, "ದಿ. ದೇವರಾಜ ಅರಸು ಅವರ ಬಳಿಕ ಸಾಮಾಜಿಕ ನ್ಯಾಯಕ್ಕಾಗಿ ಪೂರಕ ಕೆಲಸ ಮಾಡಿರುವವರು ಸಿಎಂ ಸಿದ್ಧರಾಮಯ್ಯ," ಎಂದು ಹೇಳಿದರು.
ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯ
ಸಂಖ್ಯಾಶಾಸ್ತ್ರ ಪ್ರಕಾರ 19ನೇ ತಾರೀಕು ಉತ್ತಮ ದಿನ . ಚೌತಿಯ ದಿನವಾದ್ದರಿಂದಲೂ ಈ ದಿನ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
6 ಗೆಲುವು 1 ಸೋಲು
ಈ ಹಿಂದೆ 6 ಬಾರಿ ಈ ಕ್ಷೇತ್ರದಲ್ಲಿ ಗೆದ್ದು 1 ಬಾರಿ ಸೋತಿದ್ದೇನೆ. ಕಾಂಗ್ರೆಸ್ ನನ್ನ ಧರ್ಮ. ಎಲ್ಲಾ ಭಾಷೆ, ಧರ್ಮವನ್ನು ಹಾಗೂ ಎಲ್ಲಾ ಜನರನ್ನು ಕಾಂಗ್ರೆಸ್ ಪ್ರೀತಿಸುತ್ತದೆ ಎಂದು ಹೇಳಿದರು.
ನಾನು ಕೂಡಾ ಇದೇ ತತ್ವವನ್ನು ಪಾಲಿಸುತ್ತಿದ್ದೇನೆ ಎಂದು ಹೇಳಿದ ಅವರು, ಇನ್ನೊಂದು ಧರ್ಮವನ್ನು ಪ್ರೀತಿ ಮಾಡುವವರು ಮಾತ್ರ ನಿಜವಾದ ಹಿಂದೂ. ಎಲ್ಲಾ ಧರ್ಮದ ಜನರನ್ನು ಪ್ರೀತಿ ಮಾಡುವ ಅವಶ್ಯಕತೆ ನಮಗಿದೆ ಎಂದರು. ನನ್ನ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಪೂರೈಸಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಜನಾರ್ದನ ಪೂಜಾರಿ ನೆನಪು
ಜನಾರ್ದನ ಪೂಜಾರಿಯವರ ಎಲ್ಲಾ ಚುನಾವಣೆಯಲ್ಲೂ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ದುಡಿದಿದ್ದೇನೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಯಾರು ಚುನಾವಣೆಗೆ ನಿಲ್ಲುತ್ತಾರೋ ಅವರಿಗೆ ದ್ರೋಹ ಮಾಡುವ ಕೆಲಸ ನಾನು ಮಾಡಿಲ್ಲ ಎಂದು ರಮಾನಾಥ ರೈ ಹೇಳಿದರು.
ಸಣ್ಣಪುಟ್ಟ ನೋವಿದ್ದಲ್ಲಿ ಮರೆತು ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡಬೇಕು ಎಂದು ಅವರು ಕಾರ್ಯಕರ್ತರಿಗೆ ಕಾರ್ಯಕ್ರಮದಲ್ಲಿ ಕರೆ ನೀಡಿದರು.
ವೈಷಮ್ಯ ಮರೆತು ಪೂಜಾರಿ ಆಶೀರ್ವಾದ ಪಡೆದ ರಮಾನಾಥ ರೈ
ಬಂಟ್ವಾಳದಲ್ಲಿ ಮಾತ್ರ ನನಗೆ ಮನೆ
ನಾನು ಬೆಂಗಳೂರಿನಲ್ಲಿ, ಮಂಗಳೂರಿನಲ್ಲಿ ಮನೆ ಮಾಡಿಲ್ಲ. ನನ್ನ ಕ್ಷೇತ್ರದಲ್ಲಿ ಮಾತ್ರ ಮನೆ ಮಾಡಿದ್ದೇನೆ. ನಾನು ಈ ಕ್ಷೇತ್ರ ದಿಂದ 8ನೇ ಬಾರಿ ಸ್ಪರ್ಧಿಸುತ್ತಿದ್ದು, ಹಂತ ಹಂತವಾಗಿ ಕಾಂಗ್ರೆಸ್ ಋಣ ಹೆಚ್ಚಾಗುತ್ತಿದೆ. ಕಾಂಗ್ರೆಸ್ ನನಗೆ ಹಲವು ಅವಕಾಶಗಳನ್ನು ನೀಡಿವೆ ಎಂದು ಹೇಳಿದರು.
ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಜಿಲ್ಲೆಯ ಅಭಿವೃದ್ದಿಗೆ ಬಿಡುಗಡೆಯಾದ ಹಣವನ್ನೆಲ್ಲಾ ಸಚಿವರು ಬಂಟ್ವಾಳಕ್ಕೆ ಕೊಂಡೊಯ್ಯುತ್ತಾರೆಂದು ದೂರಿದ್ದಾರೆ. ಪುನಃ ಅವರೇ ಬಂಟ್ವಾಳದಲ್ಲಿ ಯಾವುದೇ ಕೆಲಸ ನಡೆದಿಲ್ಲ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.
ಕೆಲಸಕ್ಕೆ ಕೂಲಿ ಕೊಡಿ
'ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಕೂಲಿ ಕೊಡಿ' ಎಂದು ಕೇಳುತ್ತಾ ಚುನಾವಣೆಗೆ ಹೊರಟಿದ್ದೇನೆ. ಬಂಟ್ವಾಳ ಕ್ಷೇತ್ರದಲ್ಲಿ ನಾನು 6 ಬಾರಿ ಗೆದ್ದಿದ್ದು, ಒಮ್ಮೆ ಮಾತ್ರ ಸೋತಿದ್ದೇನೆ . ಈಗ ನನ್ನನ್ನು ಮತ್ತೆ ಗೆಲ್ಲಿಸುವ ಜವಾಬ್ದಾರಿ ಜನರ ಮೇಲಿದೆ ಎಂದು ಹೇಳಿದರು.
ನಾನು ಗೆದ್ದಲ್ಲಿ ಈ ಹಿಂದೆ ಮಾಡಿದ ಕೆಲಸಕ್ಕಿಂತ ದುಪ್ಪಟ್ಟು ಕೆಲಸ ಮಾಡಿ ತೋರಿಸುತ್ತೇನೆ ಎಂದು ಅವರು ಭರವಸೆ ನೀಡಿದರು.