'ರಾಹುಲ್ ಬಂಟ್ವಾಳಕ್ಕೆ ಕಾಲಿಟ್ಟಾಗಲೇ ರಮಾನಾಥ ರೈ ಸೋಲು ಖಚಿತ'
ಮಂಗಳೂರು, ಏಪ್ರಿಲ್ 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಮಾನಾಥ ರೈ ಹಾಗೂ ಕಾಂಗ್ರೆಸ್ ಇರುವವರೆಗೂ ಸೌಹಾರ್ದತೆ ನೆಲೆಸಲು ಸಾಧ್ಯವಿಲ್ಲ. ಈ ಬಾರಿ ಚುನಾವಣೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ರಮಾನಾಥ ರೈ ಸೋಲು ಖಚಿತ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂಟ್ವಾಳಕ್ಕೆ ಕಾಲಿರಿಸಿದಾಗಲೇ ರಮಾನಾಥ ರೈ ಸೋಲುತ್ತಾರೆ ಎಂದು ನಿರ್ಧಾರವಾಗಿದೆ. ರಾಹುಲ್ ಬಂಟ್ವಾಳಕ್ಕೆ ಬಂದದ್ದೇ ಶನೀಶ್ವರ ಬಂದಂತೆ. ರಾಹುಲ್ ಎಲ್ಲೆಲ್ಲಿ ಭೇಟಿ ನೀಡಿದ್ದಾರೆ ಅಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸವಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಈ ಚುನಾವಣೆಯೇ ರಮಾನಾಥ ರೈ ಕೊನೆಯ ಬಯಲಾಟ ಎಂದ ಹರಿಕೃಷ್ಣ ಬಂಟ್ವಾಳ
ರಮಾನಾಥ ರೈ ಸೋಲುವ ಭೀತಿಯಿಂದ ಬಂಟ್ವಾಳದಲ್ಲಿ ಎಸ್ ಡಿಪಿಐ ಜತೆ ಕಾಂಗ್ರೆಸ್ ಕೈ ಜೋಡಿಸಿದೆ. ಮುಸ್ಲಿಂ ಮತಗಳನ್ನು ಪಡೆಯುವ ಉದ್ದೇಶದಿಂದ ಕೈ ಜೋಡಿಸಿದೆ ಎಂದು ಅವರು ಆರೋಪಿಸಿದರು.
ಹತ್ಯೆಮುಕ್ತ, ಭಯಮುಕ್ತ ಜಿಲ್ಲೆಯಾಗಬೇಕಾದಲ್ಲಿ ದಕ್ಷಿಣ ಕನ್ನಡದಲ್ಲಿ ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಹೊರಬರಬೇಕು. ದೇಶದಲ್ಲಿ ಭಗವದ್ಗೀತೆ, ಕುರ್ ಆನ್, ಬೈಬಲ್, ತ್ರಿಪಿಟಿಕಾ ಆಧಾರದ ಮೇಲೆ ದೇಶ ರಚನೆ ಆಗಲ್ಲ. ಆಡಳಿತ ನಡೆಸಲು ಸಾಧ್ಯವಿಲ್ಲ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನದಿಂದ ಮಾತ್ರ ದೇಶ ಕಟ್ಟಲು, ನಡೆಸಲು ಸಾಧ್ಯ ಎಂದು ಅವರು ಹೇಳಿದರು.
ದೇಶದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಒಟ್ಟಾಗಿರಬಾರದು ಎಂದು ಬ್ರಿಟಿಷರು ವಿಷ ಬೀಜ ಬಿತ್ತಿದ್ದರು. ಅದೇ ರೀತಿ ವಿಷಬೀಜ ಬಿತ್ತುತ್ತಿರುವವರು ನೆಹರೂ, ಗಾಂಧಿ ಕುಡಿಗಳು ಎಂದು ವಾಗ್ದಾಳಿ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣೆಗಾಗಿ ಮರಳಿನ, ಮರದ, ಟ್ರಾನ್ಸ್ ಪೋರ್ಟ್ ಮಾಡಿಸಿಕೊಟ್ಟ ದುಡ್ಡು ಹಂಚುತ್ತಿದೆ ಎಂದು ದೂರಿದ ಅವರು, ದುಡ್ಡಿನಿಂದಲೇ ಚುನಾವಣೆ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ ಎಂದು ಆರೋಪಿಸಿದರು.
ಕ್ಷೇತ್ರ ಪರಿಚಯ: ಬಂಟ್ವಾಳದಲ್ಲಿ ರಮಾನಾಥ ರೈಗೆ ಸಿಗುವುದೇ 7ನೇ ಗೆಲುವು?
ನುಡಿದಂತೆ ನಡೆದಿದ್ದರೆ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೇಕೆ ಓಡಿ ಹೋದರು? ಒಂದು ಕ್ಷೇತ್ರದಲ್ಲಿ ನಿಂತು ಗೆಲ್ಲಲು ಧೈರ್ಯವಿಲ್ಲದ ಸಿದ್ದರಾಮಯ್ಯನವರು ಓಡಿ ಹೋಗಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಣಾಯಕರಾದ ಬಿಲ್ಲವ ಸಮುದಾಯಕ್ಕೆ ಬಿಜೆಪಿಯಲ್ಲಿ ನೀಡಿದ ಸ್ಥಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಲ್ಲವರು ನಿಷ್ಠಾವಂತ ರಾಷ್ಟ್ರವಾದಿಗಳೇ ಹೊರತು ಜಾತಿವಾದಿಗಳಲ್ಲ. ಒಂದು ವೇಳೆ ಜಾತಿವಾದಿಗಳಾಗುತ್ತಿದ್ದರೆ ಜನಾರ್ದನ ಪೂಜಾರಿ ಲೋಪಸಭಾ ಚುನಾವಣೆಯಲ್ಲಿ ಸೋಲಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಮೇಲೆ ಆರೋಪ ಮಾಡುವ ಕಾಂಗ್ರೆಸ್ ಬಿಲ್ಲವರಿಗೆ ಎಷ್ಟು ಪ್ರಾಮುಖ್ಯ ನೀಡಿದೆ ಎಂದು ಪ್ರಶ್ನಿಸಿದ ಅವರು, ರಮಾನಾಥ ರೈ ಗೆದ್ದಲ್ಲಿ ಜನಾರ್ದನ ಪೂಜಾರಿ ಮನೆಯಲ್ಲಿ ಊಟ ಹಾಕುತ್ತೇನೆಂಬ ಹೇಳಿಕೆ ವಿಚಾರವಾಗಿ ಅವರು ಮಾತನಾಡಿದರು. ಈ ಬಾರಿಯ ಚುನಾವಣೆಯಲ್ಲಿ ರೈ ಸೋಲು ಖಚಿತವಾಗಿದೆ. ರಮಾನಾಥ ರೈಗಾಗಿ ಜನಾರ್ದನ ಪೂಜಾರಿ ಮನೆಯಲ್ಲಿ ಊಟ ಹಾಕುವ ಅವಕಾಶವೇ ಬರೋದಿಲ್ಲ ಎಂದರು.