ಗೃಹ ಸಚಿವ ರಾಮಲಿಂಗಾ ರೆಡ್ಡಿ ದಕ್ಷಿಣ ಕನ್ನಡ ಭೇಟಿ
ಮಂಗಳೂರು, ಸೆಪ್ಟೆಂಬರ್ 20: ರಾಜ್ಯದ ನೂತನ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ರಾಮಲಿಂಗಾ ರೆಡ್ಡಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದರು.
ಇಂದು ಮುಂಜಾನೆ ಮಂಗಳೂರಿಗೆ ಆಗಮಿಸಿದ ಅವರು ಮೊದಲಿಗೆ ಮೂಡಬಿದ್ರೆಗೆ ತೆರಳಿದರು. ಮೂಡಬಿದ್ರೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಅಗ್ನಿಶಾಮಕ ಠಾಣೆಯನ್ನು ಅವರು ಈ ಸಂದರ್ಭದಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 15 ಹೊಸ ಅಗ್ನಿಶಾಮಕ ಠಾಣೆಗಳಿಗೆ ಪ್ರಸ್ತಾವನೆ ಬಂದಿದೆ. ಸಮೀಪದ ಮುಲ್ಕಿಯಲ್ಲಿಯೂ ನೂತನ ಅಗ್ನಿಶಾಮಕ ಠಾಣೆ ತೆರೆಯಲಾಗುವುದೆಂದು ಹೇಳಿದರು.
ಸದ್ಯದಲ್ಲೇ ಮೂಲ್ಕಿಯಲ್ಲಿ ಅಗ್ನಿಶಾಮಕ ಠಾಣೆ
ಮೂಲ್ಕಿಯಲ್ಲಿ ಅಗ್ನಿಶಾಮಕ ಠಾಣೆ ತೆರಯುವ ಸಂಬಂಧ ಈಗಾಗಲೇ ಡಿಜಿಟಲ್ ಸರ್ವೆ ಕಾರ್ಯ ಮುಗಿಸಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.
ಮೂಡಬಿದ್ರೆಗೆ ಸಂಚಾರಿ ಪೊಲೀಸ್ ಠಾಣೆ?
ಮೂಡಬಿದ್ರೆಯಲ್ಲಿ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸಂಚಾರಿ ಪೊಲೀಸ್ ಠಾಣೆಯ ಅವಶ್ಯಕತೆ ಬಗ್ಗೆ ಚರ್ಚಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸ್ಥಳೀಯ ಶಾಸಕ ಅಭಯಚಂದ್ರ ಜೈನ್ ಅವರಿಗೆ ರಾಮಲಿಂಗಾ ರೆಡ್ಡಿ ಇದೇ ಸಂದರ್ಭದಲ್ಲಿ ಸೂಚಿಸಿದರು.
ನಾಗೋರಿ ಸಂಚಾರಿ ಪೊಲೀಸ್ ಠಾಣೆ ಉದ್ಘಾಟನೆ
ನಂತರ ಮಂಗಳೂರಿಗೆ ಆಗಮಿಸಿದ ರಾಮಲಿಂಗಾ ರೆಡ್ಡಿ ನಗರದ ನಾಗೋರಿಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಮಂಗಳೂರು ಸಂಚಾರ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದರು. ಉದ್ಘಾಟನೆ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.
ವಿಶೇಷ ಪೂಜೆ ಸಲ್ಲಿಸಿದ ರೆಡ್ಡಿ
ನಂತರ ನಾಗೋರಿಯಲ್ಲಿರುವ ಬ್ರಹ್ಮ ಬೈದರ್ಕಳ ಕ್ಷೇತ್ರಕ್ಕೆ ತೆರಳಿ ಕೋಟಿ-ಚೆನ್ನಯ ಹಾಗೂ ದೇಯಿ ಬೈದ್ಯೆದಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಗೃಹ ಸಚಿವರನ್ನು ಸನ್ಮಾನಿಸಲಾಯಿತು.