ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದ ತಗ್ಗಿದ ಮಳೆಯ ಅಬ್ಬರ
ಮಂಗಳೂರು, ಜುಲೈ.08: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಇಂದು ಮುಂಜಾನೆಯಿಂದ ತಗ್ಗಿದೆ. ಆದರೆ ಜುಲೈ 11ರ ತನಕ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ತುರ್ತು ನಿರ್ವಹಣೆಗೆ ಸಿದ್ಧಗೊಂಡಿದೆ.
ಪ್ರಾಕೃತಿಕ ವಿಕೋಪ ನಿಧಿಯಿಂದ ಈಗಾಗಲೇ ರಕ್ಷಣಾ ಪರಿಕರಗಳನ್ನು ಜಿಲ್ಲಾಡಳಿತ ಖರೀದಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೋಂ ಗಾರ್ಡ್ಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ ಮಳೆಯಿಂದಾಗಿ ಹೆಚ್ಚಿನ ಅನಾಹುತವಾದರೆ ಕ್ರಮ ಕೈಗೊಳ್ಳಲು ಎರಡು ಪ್ರಾಕೃತಿಕ ವಿಪತ್ತು ನಿರ್ವಾಹಣಾ ತಂಡಗಳು ಜಿಲ್ಲೆಗೆ ಆಗಮಿಸಿವೆ.
ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಯ ಆರ್ಭಟ, ಕೆಲವೆಡೆ ಪ್ರವಾಹ
ಜಿಲ್ಲಾಡಳಿತ ಕೂಡ ಮುಂದೆ ಸಂಭವಿಸಬಹುದಾದ ಆಪತ್ತು ತಡೆಯಲು ಸನ್ನದ್ಧಗೊಂಡಿದೆ. ಮಳೆ ಇದೇ ರೀತಿ ಮುಂದುವರಿದರೆ ತಗ್ಗು ಪ್ರದೇಶಗಳು ಇನ್ನಷ್ಟು ಮುಳುಗಡೆಯಾಗುವ ಭೀತಿ ಇದೆ. ಈಗಾಗಲೇ ತಗ್ಗು ಪ್ರದೇಶದ ಜನರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಪುನರ್ವಸು ಮಳೆ ಆರಂಭವಾದಂದಿನಿಂದ ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಯ ಹೊಡೆತ ಹೆಚ್ಚಾಗಿದೆ. ನಿನ್ನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದ್ದು, ಎಲ್ಲೆಡೆ ಪ್ರವಾಹದ ವಾತಾವರಣ ಸೃಷ್ಟಿಯಾಗಿತ್ತು.
ಕರ್ನಾಟಕ ಕರಾವಳಿ,ಕೊಂಕಣ ಗೋವಾದಲ್ಲಿ ಭಾರಿ ಮಳೆ!
ಭರ್ಜರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದರಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ ಭಾಗದಲ್ಲಿ ಶಾಲೆ, ಕಾಲೇಜಿಗೆ ರಜಾ ನೀಡಲಾಗಿದೆ.