ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ
ಮಂಗಳೂರು, ಏಪ್ರಿಲ್ 27: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಡಲತಡಿಯ ಊರು ಮಂಗಳೂರಿನಲ್ಲಿ ಬಹುನಿರೀಕ್ಷಿತ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಮಂಗಳೂರು ಉತ್ತರ: ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ ಪ್ರಣಾಳಿಕೆ ಬಿಡುಗಡೆ
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, "ನನಗೆ ಕರ್ನಾಟಕಕ್ಕೆ ಬರಲು ಸಂತಸವಾಗುತ್ತದೆ ಮತ್ತು ಪ್ರಣಾಳಿಕೆ ಬಿಡುಗಡೆ ಮಾಡಲು ಖುಷಿಯಾಗುತ್ತಿದೆ. ಈ ಪ್ರಣಾಳಿಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತ ನಾಲ್ವರು ತಯಾರಿಸಿದ್ದಲ್ಲ. ಎಲ್ಲಾ ಸಮುದಾಯಗಳನ್ನು ಕೇಳಿ ಇದನ್ನು ರಚಿಸಲಾಗಿದೆ. ನಿಮ್ಮ ಸರಕಾರ ಏನು ಮಾಡಬೇಕು ಎಂಬುದನ್ನು ಜನರಿಂದಲೇ ಕೇಳಿ ಇದನ್ನು ರಚಿಸಲಾಗುತ್ತದೆ. ಇದು ಕರ್ನಾಟಕದ ಜನರ ಮನ್ ಕೀ ಬಾತ್ (ಕನ್ನಡಿಗರ ಜನರ ಧ್ವನಿ)," ಎಂದರು.
"ಬಸವಣ್ಣವರ 'ನುಡಿದಂತೆ ನಡೆ' ಮಾತಿನಂತೆ ನಾವು ಕಳೆದ ಬಾರಿ ನೀಡಿದ ಭರವಸೆಗಳಲ್ಲಿ ಶೇಕಡಾ 90ನ್ನು ಪೂರ್ಣಗೊಳಸಿದ್ದೇವೆ. ನೀಡುವ ಭರವಸೆಗಳಿಗೆ ತೂಕ ಇರಬೇಕು ಎಂದು ನಂಬಿದವರು ನಾವು. ಅದರಂತೆ ಐದು ವರ್ಷದ ಹಿಂದೆ ನಾವು ನೀಡಿದ್ದ ಭರವಸೆಗಳನ್ನು ಇಂದು ಇಡೇರಿಸಿದ್ದೇವೆ," ಎಂದು ರಾಹುಲ್ ಗಾಂಧಿ ಹೆಮ್ಮೆಯಿಂದ ಹೇಳಿದರು.
"ಅದೇ ನೀವು ಬಿಜೆಪಿಯ ಪ್ರಣಾಳಿಕೆಯನ್ನು ನೋಡಬಹುದು. ಅದನ್ನು ಕೇವಲ 3-4 ಜನ ತಯಾರಿಸಿದ್ದಾರೆ. ಪ್ರಣಾಳಿಕೆಯ ಒಳಗೆ ಭ್ರಷ್ಟಾಚಾರವಿದೆ. ಅಲ್ಲಿ ರೆಡ್ಡಿ ಸಹೋದರರ ಹಿತಾಸಕ್ತಿ ಇದೆ. ಅದರಲ್ಲಿ ಆರ್.ಎಸ್.ಎಸ್ ಸಿದ್ಧಾಂತವೂ ಸೇರಿಕೊಂಡಿದೆ. ಆದರೆ ನಾವು ಹಾಗಲ್ಲ. ನಾವು ಜನರನ್ನು ಕೇಳಿ ಪ್ರಣಾಳಿಕೆಯನ್ನು ರಚಿಸುತ್ತೇವೆ. ಇದು ನಮಗೂ ನಮ್ಮ ವಿರೋಧಿಗಳಿಗೂ ಇರುವ ವ್ಯತ್ಯಾಸ," ಎಂದು ಕಾಂಗ್ರೆಸ್ ಅಧ್ಯಕ್ಷರು ಬಣ್ಣಿಸಿದರು.
"ಪ್ರತಿಯೊಬ್ಬರ ಖಾತಗೆ 15 ಲಕ್ಷ ನೀಡುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಭ್ರಷ್ಟಾಚಾರವನ್ನು ತಡೆಯುವುದಾಗಿ ಹೇಳಿದ್ದರು. 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ ಅವುಗಳನ್ನು ಯಾವುದನ್ನೂ ಇಡೇರಿಸಿಲ್ಲ. ತಾವು ಹೇಳಿದ ಮಾತಿಗೆ ಬಿಜೆಪಿಯವರು ಬದ್ಧರಾಗಿಲ್ಲ," ಎಂದು ಅವರು ಟೀಕಿಸಿದರು.
ಕರ್ನಾಟಕವನ್ನು ಇವತ್ತು ಸಿಲಿಕಾನ್ ವ್ಯಾಲಿಗೆ ಹೋಲಿಸುತ್ತಿದ್ದಾರೆ. ಕರ್ನಾಟಕಕ್ಕೆ ಎಲ್ಲರೂ ಬರುತ್ತಾರೆ. ಅವರನ್ನು ಕರ್ನಾಟಕದ ಜನರು ಸಹೋದರತೆಯಿಂದ ನೋಡುತ್ತಿದ್ದಾರೆ. ಕಾಂಗ್ರೆಸ್ ನಂಬಿರುವ ಪ್ರೀತಿ ಮತ್ತು ಸಹೋದರತೆಯನ್ನು ಎಲ್ಲೆಡೆ ಹರಡುತ್ತಿರುವ ಕಾಂಗ್ರೆಸಿನ ಕಾರ್ಯಕರ್ತರು ಮತ್ತು ಕನ್ನಡಿಗರಿಗೆ ನಾನು ಹೃದಯಂತರಾಳದಿಂದ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಕಾಂಗ್ರೆಸ್ ಹಿರಿಯ ನಾಯಕರಾದ ವೀರಪ್ಪ ಮೊಯ್ಲಿ, ಜನಾರ್ದನ್ ಪೂಜಾರಿ ಮತ್ತಿತರರು ಹಾಜರಿದ್ದರು.
LIVE: Manifesto release by CP Rahul Gandhi in Mangaluru. #NavaKarnatakaManifesto https://t.co/ftC934Qy31
— Karnataka Congress (@INCKarnataka) April 27, 2018