ರಾಘವೇಶ್ವರ ಸ್ವಾಮೀಜಿಗೆ ಪುತ್ತೂರು ನ್ಯಾಯಾಲದಿಂದ ಸಮನ್ಸ್
ಮಂಗಳೂರು, ಅಕ್ಟೋಬರ್ 5 : ಪುತ್ತೂರಿನ ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಹವ್ಯಕ ಸಮಾಜದ ಮುಖಂಡ ಶಿವಶಂಕರ ಭಟ್ ಅವರಿಗೆ ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ಶುಕ್ರವಾರ ವಾರಂಟ್ ಜಾರಿಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಪ್ರಕರಣ ದ ತನಿಖೆ ನಡೆಸಿದ ಸಿಐಡಿ ಡಿವೈಎಸ್ ಪಿ ಆರ್.ವಾಸು ಅವರು ಸೆಪ್ಟೆಂಬರ್ 26ರಂದು ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ರಾಘವೇಶ್ವರ ಶ್ರೀಗಳ ವಿರುದ್ಧ ಸಿಐಡಿ ಪೊಲೀಸರಿಂದ ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ
ಈ ದೋಷಾರೋಪ ಪಟ್ಟಿಯ ಆಧಾರದ ಮೇಲೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಶಿವಶಂಕರ ಭಟ್ ಅವರಿಗೆ ಪುತ್ತೂರು ನ್ಯಾಯಾಲಯ ವಾರಂಟ್ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 31ರಂದು ನಡೆಸಲಿದ್ದು, ಆ ದಿನ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.
ಪುತ್ತೂರಿನ ಕೆದಿಲದಲ್ಲಿ 2014ರ ಸೆಪ್ಟೆಂಬರ್ 1ರಂದು ಶ್ಯಾಂ ಪ್ರಸಾದ್ ಶಾಸ್ತ್ರಿ ತಮ್ಮ ಮನೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಅಂದಿನ ಸರಕಾರ ಸಿಐಡಿಗೆ ವಹಿಸಿತ್ತು. ತನಿಖೆ ನಡೆಸಿದ ಸಿಐಡಿ ಡಿವೈಎಸ್ ಪಿ ಆರ್.ವಾಸು ಅವರು ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಆತ್ಮಹತ್ಯೆ ಮಾಡಿಕೊಂಡ ಶ್ಯಾಂ ಪ್ರಸಾದ್ ಶಾಸ್ತ್ರಿ, ರಾಮಕಥಾ ಗಾಯಕಿ ಪ್ರೇಮಲತಾ ಅವರ ಪತಿಯ ಕಿರಿಯ ಸಹೋದರ. ಪ್ರೇಮಲತಾ ಅವರು ರಾಘವೇಶ್ವರ ಸ್ವಾಮೀಜಿ ವಿರುದ್ಧ ಮಾಡಿದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸ್ವಾಮಿಜಿ ಪರ ನಿಲ್ಲುವಂತೆ ಶ್ಯಾಂ ಪ್ರಸಾದ್ ಶಾಸ್ತ್ರಿ ಮೇಲೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಪುತ್ತೂರು ಹವ್ಯಕ ವಲಯದ ಅಧ್ಯಕ್ಷ ಶಿವ ಶಂಕರ್ ಭಟ್ ಹಾಗೂ ರಾಘವೇಶ್ವರ ಶ್ರೀ =ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿತ್ತು.