ಫೇಸ್ ಬುಕ್ ನಲ್ಲಿ ದೇವಿ ನಿಂದನೆ: ಕಟೀಲಿನಲ್ಲಿ ಪಾದಯಾತ್ರೆ
ಕಟೀಲು, ಸೆಪ್ಟೆಂಬರ್ 12: ಸಂಕಷ್ಟ ಹರೇ ಸರ್ವ ರಕ್ಷಿಣಿ.... ಎಂಬ ಮಂತ್ರೋಚ್ಚಾರದೊಂದಿಗೆ ಕಟೀಲು ದೇವಳದ ಆವರಣದಲ್ಲಿ ಭಕ್ತರು ಘೋಷಣೆಗಳನ್ನು ಹಾಕಿ, ಮತಾಂಧ ಶಕ್ತಿಗಳನ್ನು ಶಿಕ್ಷಿಸುವಂತೆ ಭಾನುವಾರ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ದೇವಿ ನಿಂದನೆಯನ್ನು ಒಕ್ಕೊರಲಿನಿಂದ ಖಂಡಿಸಿದರು.
ಮತಾಂಧ ಶಕ್ತಿಗಳನ್ನು ದೇವಿಯೇ ಸ್ವತಃ ದಮನಿಸಲಿ, ಶಾಂತಿ- ಸಾಮರಸ್ಯದ ಬದುಕು ನಮ್ಮ ಜಿಲ್ಲೆಯಲ್ಲಿ ಉಳಿಯಲಿ, ಇಷ್ಟಾರ್ಥ ಸಿದ್ಧಿ ಸ್ವರೂಪಿಯಾದ ಕಟೀಲು ತಾಯಿಯೇ ಭಕ್ತರನ್ನು ರಕ್ಷಿಸಲಿ, ಆಕೆಯ ಅವಹೇಳನಕ್ಕೆ ತಕ್ಕ ಪ್ರತ್ಯುತ್ತರ ಸಿಗುವಂತಾಗಲಿ ಎಂಬ ಉದ್ಘೋಷವನ್ನು ಸಹಸ್ರ ಸಂಖ್ಯೆಯಲ್ಲಿದ್ದ ಭಕ್ತರು ಮಾಡಿದರು.[ಕಟೀಲು ದೇವಿಯನ್ನು ಅವಾಚ್ಯವಾಗಿ ನಿಂದಿಸಿದವರನ್ನು ಬಂಧಿಸಿ]
ಬೆಳಗ್ಗೆ 6 ಗಂಟೆಗೆ ಪೊಳಲಿಯಿಂದ ಹೋರಾಟ 'ಅಮ್ಮನೆಡೆಗೆ ನಮ್ಮ ನಡಿಗೆ' ಬೃಹತ್ ಪಾದಯಾತ್ರೆಯು ಬಿಸಿಲೇರುವ ಹೊತ್ತಿಗೆ ಕಟೀಲು ತಲುಪಿತ್ತು. ಮೆರವಣಿಗೆಗೆ ದಾರಿಯುದ್ದಕ್ಕೂ ಭಕ್ತರು ಜತೆಗೂಡಿ, ಕಟೀಲು ತಲುಪುವ ವೇಳೆಗೆ ಬೃಹತ್ ಸಂಖ್ಯೆಯಾಗಿತ್ತು. ಎಲ್ಲರೂ ಬರಿಗಾಲಿನಲ್ಲಿಯೇ ಪಾದಯಾತ್ರೆ ಮಾಡಿದರು.
ಬಜ್ಪೆ, ಸುಂಕದಕಟ್ಟೆ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲಿಂದ ಮುಂದುವರಿದು ಕಟೀಲು ದೇವಸ್ಥಾನದವರೆಗೆ ಭಜನೆ, ಚಂಡೆ, ಶಂಖ, ಜಾಗಟೆಯ ಝೇಂಕಾರದೊಂದಿಗೆ ಪಾದಯಾತ್ರೆ ತಲುಪಿತು. ನೂರಾರು ಭಜನಾ ತಂಡಗಳ ಸದಸ್ಯರು ಹಾಡಿದರು.
ಕಟೀಲು ತಲುಪಿದ ನಂತರ ಸಾಮೂಹಿಕ ಪ್ರಾರ್ಥನೆ ಅರ್ಪಿಸಿತು. ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಣಿಲ ಶ್ರೀಧಾಮ ಮೋಹನ ದಾಸ ಸ್ವಾಮೀಜಿ, ದೇವಿಯನ್ನು ವಿಕೃತ ಭಾವನೆಯಿಂದ ಚಿತ್ರಿಸಿ ಭಕ್ತರ ನೋವಿಗೆ ಕಾರಣವಾದವರನ್ನು ಶಿಕ್ಷಿಸಬೇಕು. ಹಿಂದೂ ಸಮಾಜವು ಇನ್ನಾದರೂ ಜಾಗೃತವಾಗಿ ದೇವರ ಬಗ್ಗೆ ಇರುವ ನಂಬಿಕೆಯನ್ನು ಉಳಿಸುವಂತಾಗಬೇಕು ಎಂದರು.[ಕಟೀಲು ದುರ್ಗಾಪರಮೇಶ್ವರಿ ದೇವಿ ಬಗ್ಗೆ ಅವಹೇಳನಕಾರಿ ಸಂದೇಶ]
ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಮಾತನಾಡಿ, ಬಹುಸಂಖ್ಯಾತರ ಮೇಲಿನ ದೌರ್ಜನ್ಯ ದೇವರ ಮೇಲೆ ಮುಂದುವರೆಯುತ್ತಿರುವುದು ಅಪಾಯದ ಸಂಕೇತ. ಇದನ್ನು ಆರಂಭದಲ್ಲಿಯೇ ತಡೆಹಿಡಿಯದಿದ್ದರೆ ಹೆಮ್ಮರವಾಗಿ ಸಾಮರಸ್ಯದ ಬದುಕನ್ನು ಕಸಿಯುವಂತಾಗುತ್ತದೆ ಎಂದು ಹೇಳಿದರು.
'ಅಮ್ಮನೆಡೆಗೆ ನಮ್ಮ ನಡಿಗೆ' ಸಮಿತಿ ಮುಖಂಡ ರುಕ್ಕಯ್ಯ ಪೂಜಾರಿ, ಉಲಿಪಾಡಿಗುತ್ತು ರಾಜೇಶ ನಾಯ್ಕ್, ಕೆಮಾರು ಈಶ ವಿಠಲ ದಾಸ ಸ್ವಾಮೀಜಿ, ಗುರುಪುರ ರಾಜೇಶೇಖರಾನಂದ ಸ್ವಾಮೀಜಿ, ಶಾಂತಿಗೋಡು ಮಣಿಕಾಂತ ಸ್ವಾಮೀಜಿ, ಕಟೀಲಿನ ವಾಸುದೇವ ಅಸ್ರಣ್ಣ, ಲಕ್ಷ್ಮೀ ನಾರಾಯಣ ಅಸ್ರಣ್ಣ, ಅನಂತಪದ್ಮನಾಭ ಅಸ್ರಣ್ಣ, ಶ್ರೀಹರಿಸಾದ ನಾರಾಯಣ ಅಸ್ರಣ್ಣ, ಕಮಲಾದೇವಿ ಅಸ್ರಣ್ಣ, ದೇವಪ್ರಸಾದ ಪುನರೂರು, ಈಶ್ವರ ಕಟೀಲು, ದೇವದಾಸ್ ಶೆಟ್ಟಿ ಬಂಟ್ವಾಳ ಮತ್ತಿತರರು ಭಾಗವಹಿಸಿದ್ದರು.