ಮಂಗಳೂರು: ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳ ಮೇಲೆ ಹಲ್ಲೆ
ಮಂಗಳೂರು, ಸೆಪ್ಟೆಂಬರ್ 11: ರಾಜ್ಯಾದ್ಯಂತ ಸುದ್ದಿಯಾಗಿದ್ದ ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಮೇಲೆ ಮಂಗಳೂರು ಕಾರಾಗೃಹದಲ್ಲಿ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ .
ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಇಂದು ಅಪರಾಹ್ನ ಈ ಘಟನೆ ನಡೆದಿದ್ದು, ಕಾರಾಗೃಹದ ಸಹ ಕೈದಿಗಳಾದ ಬಿಲಕೇರಿ ಧನರಾಜ್ ಮತ್ತು ತಂಡ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಾದ ಮಗ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ.
ರಾಜೇಶ್ವರಿ ಶೆಟ್ಟಿಗೆ ರಾಜಾತಿಥ್ಯ ಆರೋಪ : ವಕೀಲರು ಹೇಳುವುದೇನು?
ಇಂದು ಮಧ್ಯಾಹ್ನ ಏಕಾಏಕಿ ನವನೀತ್ ಶೆಟ್ಟಿ ಹಾಗೂ ನಿರಂಜನ ಭಟ್ ಎದುರಾದ ಧನರಾಜ್ ಮತ್ತು ತಂಡ ನೀರಿನ ಡ್ರಮ್ ನಿಂದ ಹಲ್ಲೆ ನಡೆಸಿದೆ.
ಘಟನೆಯಲ್ಲಿ ನಿರಂಜನ್ ಭಟ್ ಹಾಗೂ ನವನೀತ್ ಶೆಟ್ಟಿ ಅವರಿಗೆ ಗಾಯಗಳಾಗಿದ್ದು, ಅವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಲ್ಲೆ ನಡೆದ ವಿಷಯ ತಿಳಿಸಿದಂತೆ ಮಂಗಳೂರು ಕಾರಾಗೃಹಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ನಿರಂಜನ್ ಭಟ್ ಹಾಗೂ ನವನೀತ್ ಶೆಟ್ಟಿಯ ಮೇಲೆ ನಡೆದ ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ .
2016 ಜುಲೈಯಲ್ಲಿ ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಕೊಲೆ ನಡೆದಿತ್ತು. ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ ಭಟ್ ಈ ಪ್ರಕರಣದ ಪ್ರಮುಖ ಆರೊಪಿಗಳಾಗಿದ್ದಾರೆ.
ಈ ಪ್ರಕರಣದ ವಿಚಾರಣೆ ನ್ಯಾಯಾಲಯ ನಡೆಯುತ್ತಿದ್ದು ಆರೋಪಿಗಳನ್ನು ಮಂಗಳೂರು ಕಾರಾಗೃಹದಲ್ಲಿ ಇರಿಸಲಾಗಿದೆ .