ಧರ್ಮಸ್ಥಳ: ಪ್ರಧಾನಿ ಮೋದಿ ಆಗಮನಕ್ಕೆ ರೆಡ್ ಕಾರ್ಪೆಟ್
ಮಂಗಳೂರು, ಅಕ್ಟೋಬರ್ 28 : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ ಅವರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅವರ ಸ್ವಾಗತಕ್ಕಾಗಿ ಧರ್ಮಸ್ಥಳ ಕ್ಷೇತ್ರ ಸಜ್ಜಾಗಿದೆ.
In Pics : ಮೋದಿ ಸ್ವಾಗತಕ್ಕೆ ಸಿಂಗಾರಗೊಂಡ ಧರ್ಮಸ್ಥಳ
ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 29 ರಂದು ಬೆಳಗ್ಗೆ 11:30ಕ್ಕೆ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬ್ಯಾಂಕುಗಳ ಸಹಭಾಗಿತ್ವದಲ್ಲಿ ರಾಜ್ಯದ 12 ಲಕ್ಷ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಜನ್ ಧನ್ ಯೋಜನೆ ಅನ್ವಯ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಈ ಸದಸ್ಯರಿಗೆ ರೂಪೇ ಕಾರ್ಡ್ ಗಳನ್ನು ಪ್ರಧಾನಿ ವಿತರಿಸಲಿದ್ದಾರೆ.
ಧರ್ಮಸ್ಥಳದಲ್ಲಿ ಪ್ರಧಾನಿ ಸ್ವಾಗತಕ್ಕೆ ಅಂತಿಮ ಹಂತದ ಸಿದ್ಧತೆ, ಸರ್ಪಗಾವಲು
ಮೋದಿ ಅವರು ಮೊದಲ ಬಾರಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸುತ್ತಿರುವುದರಿಂದ ಕ್ಷೇತ್ರದಲ್ಲಿ ಹಬ್ಬದ ವಾತವರಣ ಮೂಡಿದ್ದು, ಮೋದಿಯನ್ನು ತುಳುನಾಡಿನ ಶೈಲಿಯಲ್ಲಿ ಸ್ವಾಗತಿಸಲಾಗುತ್ತಿದೆ.
ಭಾನುವಾರ ಬೆಳಗ್ಗೆ ಮಂಗಳೂರು ವಾಯುನೆಲೆಯಿಂದ ಧರ್ಮಸ್ಥಳ ಹೆಲಿಪ್ಯಾಡ್ ಗೆ ಮೋದಿ ವಾಯುಸೇನೆಯ ವಿಮಾನದ ಮೂಲಕ ಆಗಮಿಸಲಿದ್ದಾರೆ. ಈಗಾಗಲೇ ಧರ್ಮಸ್ಥಳದ ನೂತನ ಹೆಲಿಪ್ಯಾಡ್ ಗೆ ವಾಯುಸೇನಾ ಮತ್ತು ಎಸ್ ಜಿ ಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಲಿಪ್ಯಾಡ್ ನಿಂದ ಮೋದಿ ಕಾರಿನಲ್ಲಿ ಕ್ಷೇತ್ರಕ್ಕೆ ತೆರಳಲಿದ್ದು, ಅದಕ್ಕಾಗಿ 9 ವಿಶೇಷ ಕಾರುಗಳು ಈಗಾಗಲೇ ಧರ್ಮಸ್ಥಳಕ್ಕೆ ಆಗಮಿಸಿವೆ.
ರಸ್ತೆ ಉದ್ದಕ್ಕೂ ಅಲಂಕಾರ
ಧರ್ಮಸ್ಥಳದಿಂದ ಉಜಿರೆಗೆ ರಸ್ತೆ ಮೂಲಕ ಹೋಗುತ್ತಿರುವುದರಿಂದ ರಸ್ತೆ ಉದ್ದಕ್ಕೂ ವಿವಿಧ ರೀತಿಯ ಕಟೌಟ್ ಗಳನ್ನು ಹಾಕಲಾಗಿದೆ. ಹಾಗೂ ಬಣ್ಣ-ಬಣ್ಣಗಳಿಂದ ತಯಾರಿಸಿದ ಬಟ್ಟೆಗಳನ್ನು ರಸ್ತೆ ಉದ್ದಕ್ಕೂ ನೇತು ಹಾಕಲಾಗಿದೆ. ಅಷ್ಟೇ ಅಲ್ಲದೇ ಹಳದಿ, ಕೆಂಪು, ಕೇಸರಿ ಬಣ್ಣಗಳ ಛತ್ರಿಗಳನ್ನು ನೇತು ಹಾಕಲಾಗಿದ್ದು, ಇದು ನೋಡುಗರ ಕಣ್ಮನ ಸೆಳೆದಿದೆ.
ಸಾರ್ವಜನಿಕ ದರ್ಶನ ನಿಷೇಧ
ಅಕ್ಟೋಬರ್ 29ಕ್ಕೆ ಬೆಳಗ್ಗೆ ಮಂಜುನಾಥನ ದೇವಾಲಯಕ್ಕೆ ಮೋದಿ ಭೇಟಿ ನೀಡುತ್ತಿರುವುದರಿಂದ, ಶನಿವಾರ (ಅ 28) ಮಧ್ಯಾಹ್ನ ಎರಡು ಗಂಟೆಯಿಂದ, ಅ 29 ಮಧ್ಯಾಹ್ನ ಎರಡು ಗಂಟೆಯವರೆಗೆ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.
ಸರ್ವಪೂಜೆ ಮಾಡಲಿರುವ ನರೇಂದ್ರ ಮೋದಿ
ಧರ್ಮಸ್ಥಳ ಮಂಜುನಾಥೇಶ್ವರ ನ ದರ್ಶನ ಪಡೆದ ಬಳಿಕ ಪ್ರಧಾನಿ ಮೋದಿ ಅವರು ಸರ್ವಪೂಜೆಯನ್ನು ಮಾಡಲಿದ್ದು, ಮಂಜುನಾಥೇಶ್ವರ, ಅಮ್ಮನವರು,ಅಣ್ಣಪ್ಪ ಸ್ವಾಮಿ,ಗಣಪತಿ ಮತ್ತು ಚಂದ್ರನಾಥಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯನ್ನು ಬರಮಾಡಿಕೊಳ್ಳಲು ಹೆಗ್ಗಡೆ ಕುಟುಂಬ ಸಜ್ಜಾಗಿದೆ
ಭದ್ರತೆಯ ನೇತೃತ್ವ ವಹಿಸಿದ ಐಜಿಪಿ ಹೇಮಂತ ನಿಂಬಾಳ್ಕರ್ ತಂಡ
150 ಉನ್ನತ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಮಿಕ್ಕಿ ಪೊಲೀಸರನ್ನು ಮೋದಿ ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ. ಎಸ್ ಪಿ ಜಿ ಭಧ್ರತಾ ಪಡೆಯ ಜತೆ ಐಜಿಪಿ ಹೇಮಂತ ನಿಂಬಾಳ್ಕರ್ ಅವರ ತಂಡ ಭದ್ರತೆಯ ನೇತೃತ್ವವನ್ನು ವಹಿಸಿದೆ. ಧರ್ಮಸ್ಥಳ ದಿಂದ ಉಜಿರೆಗೆ ಮೋದಿ ಕಾರಿನಲ್ಲಿ ಸಂಚರಿಸಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಎಲ್ಲಾ ಅಂಗಡಿಗಳನ್ನು ಮುಚ್ಚಲು ಪೊಲೀಸ್ ಇಲಾಖೆ ಆದೇಶಿಸಿದೆ.