ಮಂಗಳೂರು: ಕಾರಿನಲ್ಲೇ ಹೆರಿಗೆ, ಮಾನವೀಯತೆ ಮೆರೆದ ಹೆಡ್ಕಾನ್ಸ್ಟೇಬಲ್
ಮಂಗಳೂರು ಏಪ್ರಿಲ್ 13: ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರು ಪೊಲೀಸ್ ಹೆಡ್ಕಾನ್ಸ್ಟೇಬಲ್ ಒಬ್ಬರ ಕಾರಿನಲ್ಲೇ ಮಗುವಿಗೆ ಜನ್ಮವಿತ್ತ ಪ್ರಸಂಗ ಮಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ವಿಜಯಪುರ : ಹೆರಿಗೆ ಮಾಡಿಸಿದ ಆಂಬುಲೆನ್ಸ್ ಸಿಬ್ಬಂದಿ
ಮಂಗಳೂರು ಹೊರವಲಯದ ಕೋಟೆಕಾರು ಬೀರಿ ನಿವಾಸಿ ರವಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತಿದ್ದಾರೆ. ಅವರು ಗುರುವಾರ ಮುಂಜಾನೆ ತಮ್ಮ ಕಾರಿನಲ್ಲಿ ತನ್ನ ಮಕ್ಕಳನ್ನು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ಕರೆದುಕೊಂಡು ಬರುತ್ತಿದ್ದರು.
ರವಿಯವರು ಕಾರನ್ನು ಎಕ್ಕೂರು ಕೇಂದ್ರೀಯ ವಿದ್ಯಾಲಯದ ಎದುರು ನಿಲ್ಲಿಸುತ್ತಿದ್ದಂತೆ ರಿಕ್ಷಾವೊಂದರಲ್ಲಿದ್ದ ನೌಷಾದ್ ಎಂಬವರು ಓಡಿ ಬಂದು 'ರಿಕ್ಷಾದಲ್ಲಿ ಗರ್ಭೀಣಿಯೊಬ್ಬರು ನೋವಿನಿಂದ ಒದ್ದಾಡುತ್ತಿದ್ದಾರೆ. ದಯವಿಟ್ಟು ಸಹಾಯಮಾಡಿ ಎಂದು ಕೇಳಿದ್ದಾರೆ.
ಗರ್ಭೀಣಿ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ' ಎಂದು ನೌಷಾದ್ ವಿನಂತಿಸಿದರು. ಸೂಕ್ಷ್ಮ ಪರಿಸ್ಥಿತಿ ಅರಿತ ರವಿಯವರು ತಕ್ಷಣ ಸ್ಪಂದಿಸಿ ಮಹಿಳೆಯನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪಂಪುವೆಲ್ ಜಂಕ್ಷನ್ ತಲುಪುತ್ತಿದ್ದಂತೆ ಉಳ್ಳಾಲದ ಗರ್ಭಿಣಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ರವಿಯವರು ತಾಯಿ ಮತ್ತು ಮಗುವನ್ನು ನೇರ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.