ಪ್ರಶಾಂತ್ ಪೂಜಾರಿ ಕೊಲೆ: ನಾಲ್ವರು ಖುದ್ದು ಕೋರ್ಟ್ ಗೆ ಶರಣು
ಮಂಗಳೂರು, ಜೂನ್ 08 : ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಖುದ್ದು ಬುಧವಾರ ಮೂಡುಬಿದಿರೆ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಬೈಕ್ ನಲ್ಲಿ ಬಂದು ತಲವಾರ್ ಗಳಿಂದ ಹತ್ಯೆಗೈದಿದ್ದ ಪ್ರಮುಖ ಆರೋಪಿ ಅಕ್ಬರ್ ವಳಚ್ಚಿಲ್ (30), ಸಿರಾಜ್ ಉಳ್ಳಾಲ್ (28) ಮತ್ತು ಕೊಲೆಗೆ ಸಹಕರಿಸಿದ್ದ ಅನ್ವರ್ ಬಜ್ಪೆ, ತಾಜುದ್ದೀನ್ ಬಜ್ಪೆ ಎನ್ನುವರು ಕೋರ್ಟ್ ಗೆ ಖುದ್ದು ಶರಣಾದರು. ಇವರಿಗೆ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.[ಮೂಡಬಿದಿರೆಯಲ್ಲಿ ಬೆಳ್ಳಂಬೆಳಗ್ಗೆ ಹೂವಿನ ವ್ಯಾಪಾರಿ ಹತ್ಯೆ]
2015ರ ಅಕ್ಟೋಬರ್ 9ರಂದು ಬೆಳಗ್ಗೆ 6.30ಕ್ಕೆ ಹೂವಿನ ಅಂಗಡಿಗೆ ಹೋಗುತ್ತಿದ್ದ ಪ್ರಶಾಂತ್ ಪೂಜಾರಿಯನ್ನು 6 ಮಂದಿಯ ತಂಡ 3 ಬೈಕ್ ಗಳಲ್ಲಿ ಬಂದು ಕೊಲೆ ಮಾಡಿತ್ತು.
ಮಹಮ್ಮದ್ ಹನೀಫ್ (36) ಇಬ್ರಾಹಿಂ ಲಿಯಾಕತ್ (26) ಮಹಮ್ಮದ್ ಇಲ್ಯಾಸ್ (27) ಅಬ್ದುಲ್ ರಶೀದ್ ಆರೋಪಿಗಳ ಬಂಧನವಾಗಿತ್ತು.
ಪ್ರಶಾಂತ್ ಹತ್ಯೆ ಮಾತ್ರವಲ್ಲದೇ ಹಂಡೇಲು ಎಂಬಲ್ಲಿ ಅಶೋಕ್ ಹಾಗೂ ವಾಸು ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಹಾಗೂ ಜಯನಾಥ್ ಕೋಟ್ಯಾನ್ ಅವರ ಮೇಲೆ ಹಲ್ಲೆ ನಡೆಸಿರುವುದು ತಾವೇ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದರು.
ಪ್ರಶಾಂತ ಪೂಜಾರಿ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಗಂಟಾಲ್ಕಟ್ಟೆ ಕಸಾಯಿಖಾನೆ ವಿರೋಧಿ ಹೋರಾಟದಲ್ಲಿದ್ದರು. ಇದೇ ಕಾರಣಕ್ಕೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿತ್ತು.