ಬಿಜೆಪಿಯ 'ಜನಸುರಕ್ಷಾ ಯಾತ್ರೆ' ಕೇವಲ ಢೋಂಗಿ ರಾಜಕಾರಣ: ಮುತಾಲಿಕ್
ಮಂಗಳೂರು, ಮಾರ್ಚ್ 1: ಬಿಜೆಪಿ ನಡೆಸಲು ಉದ್ದೇಶಿಸಿರುವ ಜನಸುರಕ್ಷಾ ಯಾತ್ರೆ ಕೇವಲ ಢೋಂಗಿ ರಾಜಕಾರಣ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದ ಅವರು ಬಿಜೆಪಿಯವರಿಗೆ ಕಾಳಜಿ ಇದ್ದರೆ ಭಟ್ಕಳದಿಂದ ಯಾತ್ರೆ ಆರಂಭಿಸಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
"ಭಟ್ಕಳ ಬಿಜೆಪಿ ಶಾಸಕ ಚಿತ್ತರಂಜನ್ ಕೊಲೆ ಪ್ರಕರಣದಲ್ಲಿ ಈವರೆಗೆ ಆರೋಪಿಗಳ ಪತ್ತೆಯಾಗಿಲ್ಲ. 1997ರಲ್ಲಿ ಭಟ್ಕಳದ 21 ಜನರ ಕೊಲೆ ಪ್ರಕರಣವನ್ನು ಈವರೆಗೂ ಭೇದಿಸಲು ಸಾಧ್ಯವಾಗಿಲ್ಲ. ಭಟ್ಕಳ ತಾಲೂಕು ಬಿಜೆಪಿ ಅಧ್ಯಕ್ಷರಾಗಿದ್ದ ತಿಮ್ಮಪ್ಪ ನಾಯ್ಕ ಕೊಲೆಗಾರರನ್ನೂ ಪತ್ತೆ ಮಾಡಲಾಗಿಲ್ಲ ಎಂದು ಹೇಳಿದ ಅವರು, "ಜಗನ್ನಾಥ ಶೆಟ್ಟಿ ಆಯೋಗದ ವರದಿಯನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಜಾರಿ ಮಾಡಲಾಗದ ಬಿಜೆಪಿಯವರು ಮೋಸ ಮತ್ತು ಅಧಿಕಾರ ದಾಹದಿಂದ ಈಗ ಯಾತ್ರೆ ಹೊರಟಿದ್ದಾರೆ," ಎಂದು ಟೀಕಿಸಿದರು.
ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಶಿವಸೇನೆಯಡಿ ಚುನಾವಣಾ ಕಣಕ್ಕಿಳಿಯುತ್ತೇವೆ . ಈಗಾಗಲೇ 52 ಕಡೆ ಸ್ಪರ್ಧಿಸಲು ತಯಾರಿ ನಡೆಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕಾಗಿ 9 ಪ್ರತ್ಯೇಕ ಕಮಿಟಿಯನ್ನೂ ಮಾಡಲಾಗಿದೆ. "ಜನರಿಗೆ ರಾಷ್ಟ್ರೀಯ ಪಕ್ಷಗಳ ಬಗ್ಗೆ ಭ್ರಮನಿರಸನ ಇದೆ" ಎಂದು ಹೇಳಿದ ಅವರು ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಶಿವಸೇನೆ ಇತಿಹಾಸ ನಿರ್ಮಿಸುವ ವಿಶ್ವಾಸ ಇದೆ ಎಂದು ಅವರು ಹೇಳಿದರು.
"ಶೃಂಗೇರಿ ಅಥವಾ ತೇರದಾಳದಲ್ಲಿ ನಾನು ಸ್ಪರ್ಧಿಸುವ ಇರಾದೆ ಹೊಂದಿದ್ದೇನೆ," ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
"ಗೌರಿ ಲಂಕೇಶ್ , ಕಲಬುರ್ಗಿ ಹತ್ಯೆ ವಿಚಾರದಲ್ಲಿ ತಮ್ಮ ವೈಫಲ್ಯ ಮುಚ್ಚಿ ಹಾಕಲು ಯಾರನ್ನೋ ಹಿಡಿದು ಸುದ್ದಿ ಹಬ್ಬಿಸುತ್ತಾರೆ. ಈ ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ ಬಂಧಿಸಿರುವುದನ್ನು ಸ್ಪಷ್ಟಪಡಿಸಲಿ," ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ಯಾರನ್ನೋ ಹಿಡಿದು ಗೌರಿ ಹಂತಕ ಎಂದು ಹೇಳುವುದು ಸರಿಯಲ್ಲ. ಗೌರಿ ಲಂಕೇಶ್, ಕಲಬುರ್ಗಿ ಪ್ರಕರಣದಲ್ಲಿ ರಾಜ್ಯ ಸರಕಾರ ಪೂರ್ಣ ವಿಫಲವಾಗಿದೆ ಎಂದು ಅವರು ಹೇಳಿದರು.