ಗೌರಿ ಹತ್ಯೆ ಪ್ರಕರಣದಲ್ಲಿ ಪ್ರಕಾಶ್ ರೈ ವಿಚಾರಣೆ ಮಾಡಿ: ಸೂಲಿಬೆಲೆ
ಮಂಗಳೂರು, ನವೆಂಬರ್ 13: ಅವಕಾಶ ಸಿಕ್ಕ ಎಲ್ಲ ವೇದಿಕೆಗಳಲ್ಲಿ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಬಲಪಂಥೀಯರೇ ಎನ್ನುತ್ತಿರುವ ನಟ ಪ್ರಕಾಶ್ ರೈ ಅವರನ್ನು ಪೊಲೀಸರು ತನಿಖೆಗೆ ಒಳಪಡಿಸಿದರೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸತ್ಯಾಂಶ ಹೊರಬರುತ್ತದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಗೌರಿ ಹತ್ಯೆ ತನಿಖೆ ಬಗ್ಗೆ ಕವಿತಾ ಲಂಕೇಶ್ ಅಸಮಾಧಾನ
'ಎಡಪಂಥೀಯರ ಹತ್ಯೆ: ಹಿಂದೂಗಳ ಮೇಲೇಕೆ ಆರೋಪ' ಎಂಬ ವಿಷಯವಾಗಿ ಇಲ್ಲಿ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಗೌರಿ ಲಂಕೇಶ್ ಹತ್ಯೆ ಮಾಡಿದವರು ಬಲಪಂಥೀಯರು ಎಂದು ಮತ್ತೆ ಮತ್ತೆ ಹೇಳಿಕೆ ಕೊಡುತ್ತಿರುವ ನಟ ಪ್ರಕಾಶ್ ರೈ ಅವರಿಗೆ ಹಂತಕರ ಬಗ್ಗೆ ಗೊತ್ತಿರಬೇಕು. ಆದ್ದರಿಂದ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಬೇಕು ಎಂದರು.
ಹತ್ಯೆ ಪ್ರಕರಣಗಳಲ್ಲಿ ಮೊದಲಿಗೆ ಸಾಕ್ಷ್ಯ ಸಿಕ್ಕುತ್ತದೆ. ಆ ನಂತರ ಆರೋಪಿಗಳು ಸಿಕ್ಕುಬೀಳುತ್ತಾರೆ. ಆದರೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವರು ಬೇರೆ ರೀತಿಯಲ್ಲೇ ಹೇಳುತ್ತಿದ್ದಾರೆ. ಹತ್ಯೆ ಮಾಡಿದವರು ಯಾರೆಂದು ಗೊತ್ತಾಗಿದೆ. ಆದರೆ ಸಾಕ್ಷ್ಯ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಇಂಥ ಪ್ರಕರಣಗಳನ್ನು ಹಿಂದೂಗಳ ಮೇಲೆ ಹೊರಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ ಎಂದರು.