ಬೆಳ್ಳಂಬೆಳಿಗ್ಗೆ ಮಂಗಳೂರು ಜೈಲ್ ಮೇಲೆ ಪೊಲೀಸರ ದಾಳಿ
ಮಂಗಳೂರು, ಸೆಪ್ಟೆಂಬರ್ 19: ಮಂಗಳೂರು ಜೈಲಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ಮಾಡಿದ್ದಾರೆ. ಡಿಸಿಪಿ ಹನುಮಂತರಾಯ ನೇತೃತ್ವದಲ್ಲಿ 130 ಕ್ಕೂ ಅಧಿಕ ಪೊಲೀಸರು ದಾಳಿ ನಡೆಸಿದ್ದು ದಾಳಿ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಾದಕ ವಸ್ತುಗಳು , ಮಾರಕಾಸ್ತ್ರಗಳು ಪತ್ತೆಯಾಗಿವೆ.
ದಾಳಿ ಸಂದರ್ಭದಲ್ಲಿ ಜೈಲ್ ನಲ್ಲಿ ರಹಸ್ಯವಾಗಿ ಅಡಗಿಸಿಡಲಾಗಿದ್ದ ಗಾಂಜಾ, ಹುಕ್ಕಾ, ಡ್ರಗ್ಸ್ ಸಿರಿಂಜ್ ಸೇರಿದಂತೆ ಹಲ್ಲೆಗೆ ಬಳಸುವ ಮಾರಾಕಾಯುಧಗಳು ಪತ್ತೆಯಾಗಿವೆ. ಕಬ್ಬಿಣದ ರಾಡ್, ಚೂರಿ, ಅಲ್ಯೂಮಿನಿಯಂ ಪಂಚ್ ರಿಂಗ್ ಗಳನ್ನು ಖೈದಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೈಲಿನಲ್ಲಿ ಮೊಬೈಲ್ ಫೋನ್
ಜೈಲಿನೊಳಗೆ ಮೊಬೈಲ್ ಸಂಪರ್ಕವಿರುವುದಕ್ಕೆ ಸಾಕ್ಷಿಯಾಗಿ ಮೊಬೈಲ್ ಗಳು ಮತ್ತು ಪವರ್ ಬ್ಯಾಂಕ್ ಗಳನ್ನು ಖೈದಿಗಳಿಂದ ವಶಪಡಿಸಿಕೊಳ್ಳಲಾಗಿದೆ.
4 ಎಸಿಪಿಗಳ ನೇತೃತ್ವದಲ್ಲಿ ದಾಳಿ
50 ಅಧಿಕಾರಿಗಳು, 4 ಎಸಿಪಿ ಸೇರಿದಂತೆ 130 ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಖಚಿತ ಮಾಹಿತಿ ಮೇರೆಗೆ ದಾಳಿ
ಜೈಲಿನೊಳಗೆ ಶಸ್ತ್ರಾಸ್ತ್ರ ಮತ್ತು ಗಾಂಜಾ ವಹಿವಾಟು ನಡೆಯುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಟಿ. ಆರ್. ಸುರೇಶ್ ಮಾರ್ಗದರ್ಶನದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.
ಅಪರಾಧಿಗಳ ಪಾಲಿನ ಸ್ವರ್ಗ
ಮಂಗಳೂರು ಜಿಲ್ಲಾ ಕಾರಾಗೃಹ ಅಪರಾಧಿಗಳಿಗೆ ಸ್ವರ್ಗ ಅನ್ನೋದಕ್ಕೆ ದಾಳಿ ಸಂದರ್ಭದಲ್ಲಿ ದೊರೆತ ವಸ್ತುಗಳು ಮತ್ತಷ್ಟು ಪುಷ್ಠಿ ನೀಡಿವೆ.