ಪೊಲೀಸರಿಗೆ ಅವಾಜ್ ಹಾಕಿದ್ದ ಸಂಸದ ನಳಿನ್ ವಿರುದ್ಧ ಪೊಲೀಸರ ದೂರು
Recommended Video
ಮಂಗಳೂರು, ಸೆಪ್ಟೆಂಬರ್ 8: 'ಮಂಗಳೂರು ಚಲೋ' ಜಾಥಾ ವೇಳೆ ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ದೂರು ದಾಖಲಿಸಲಾಗಿದೆ.
ಪೊಲೀಸ್ ಅಧಿಕಾರಿಗೆ ಸಂಸದ ನಳಿನ್ ಧಮಕಿಯ ವಿಡಿಯೋ ವೈರಲ್
ಜಾಥಾ ವೇಳೆ ಬಂಧಿತರಾಗಿ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಮಂಗಳೂರಿನ ಕದ್ರಿ ಗೋರಕ್ಷನಾಥ ಹಾಲ್ ಕೂಡಿ ಹಾಕಲಾಗಿತ್ತು. ಠಾಣೆಯ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಇವರನ್ನು ಬಿಡುಗಡೆ ಮಾಡಿರಲಿಲ್ಲ. ಇದರಿಂದ ಆಕ್ರೋಶಿತರಾದ ನಳಿನ್ ಕುಮಾರ್ ಕಟೀಲ್ ಬಹಿರಂಗವಾಗಿ ಧಮಕಿ ಹಾಕಿದ್ದರು. ಬೈಯುತ್ತಾ ಮೇಜು ಕುಟ್ಟಿ, ಪೊಲೀಸ್ ಅಧಿಕಾರಿಯ ಮೊಬೈಲ್ ಫೋನನ್ನೂ ಕಿತ್ತುಕೊಳ್ಳಲು ನಳಿನ್ ಮುಂದಾಗಿದ್ದರು. ಈ ವಿಡಿಯೋ ವೈರಲ್ ಆಗಿ ಸಂಸದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಮಾರುತಿ ನಾಯಕ್ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ
ಮಂಗಳೂರು ಚಲೋ ಪ್ರತಿಭಟನಾ ಜಾಥಾ, ಸಭೆ ಹಾಗೂ ಪಾದಯಾತ್ರೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿರ್ಬಂಧಕಾಜ್ಞೆ ನಡುವೆಯೂ ಪ್ರತಿಭಟನಾ ಸಭೆ, ಜಾಥಾ ಹಾಗೂ ಪಾದಯಾತ್ರೆ ನಡೆಸಿದ ಹಿನ್ನೆಲೆಯಲ್ಲಿ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.