ಸುಳ್ಯದಲ್ಲಿ ಚಕ್ರಬಡ್ಡಿ ಸುಳಿಗೆ ಸಿಲುಕಿದ ಕೃಷಿಕನ ಮೇಲೆ ಖಾಕಿ ದರ್ಪ
ಮಂಗಳೂರು, ಡಿಸೆಂಬರ್ 06: ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆದು ಚಕ್ರ ಬಡ್ಡಿ ಸುಳಿಗೆ ಸಿಲುಕಿದ್ದ ಕೃಷಿಕನ ಮೇಲೆ ಪೊಲೀಸ್ ಅಧಿಕಾರಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗದ ಬಾಳೆಂಬಿ ನಿವಾಸಿ ಕೃಷಿಕ ರವೀಂದ್ರ, ಸ್ಥಳೀಯ ಫೈನಾನ್ಸ್ ನಲ್ಲಿ ಕೃಷಿಗಾಗಿ ಒಂದು ಲಕ್ಷ ಸಾಲ ಪಡೆದಿದ್ದರು. ಸಾಲ ಮರುಪಾವತಿ ಮಾಡಲಾಗದೆ ಚಕ್ರ ಬಡ್ಡಿಯ ಸುಳಿಗೆ ಸಿಕ್ಕಿಬಿದ್ದ ರವೀಂದ್ರನ ವಿರುದ್ಧ ಫೈನಾನ್ಸ್ ಮಾಲೀಕ ಡಿ.ಬಿ. ಕೇಶವ ಸುಳ್ಯ ಕೋರ್ಟ್ ನಲ್ಲಿ ದೂರು ನೀಡಿದ್ದರು.
ಸಾಲಮನ್ನಾ ಘೋಷಣೆ : ಸ್ಥಿತಿ-ಗತಿಗಳ ವರದಿ ಕೊಟ್ಟ ಕರ್ನಾಟಕ ಸರ್ಕಾರ
ಈ ಬಗ್ಗೆ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದ ಕೃಷಿಕ ರವೀಂದ್ರ ಅವರಿಗೆ ನ್ಯಾಯಾಲದಲ್ಲಿ ಸೋಲಾಗಿದೆ. ಸುಳ್ಯ ಕೋರ್ಟ್ ರವೀಂದ್ರ ವಿರುದ್ಧ ವಾರೆಂಟ್ ಹೊರಡಿಸುತ್ತಿದ್ದಂತೆಯೇ ಕೃಷಿಕ ರವೀಂದ್ರ ಬೆಂಗಳೂರಿನ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಸ್ಟೇ ಆರ್ಡರ್ ಪಡೆದಿದ್ದರು.
ಸ್ಟೇ ಆರ್ಡರ್ ಸಮೇತ ರವೀಂದ್ರ ಡಿಸೆಂಬರ್4 ರಂದು ಮುಂಜಾನೆ ಬೆಂಗಳೂರಿನಿಂದ ಸುಳ್ಯಕ್ಕೆ ಆಗಮಿಸುತ್ತಿದ್ದ ವೇಳೆ ಸುಳ್ಯ ಇನ್ಸ್ ಪೆಕ್ಟರ್ ಮಂಜುನಾಥ್ ರವೀಂದ್ರ ಅವರನ್ನು ಠಾಣೆಗೆ ಎಳೆದೊಯ್ದು ಮನಬಂದಂತೆ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ ನಲ್ಲಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ರೈತರಿಗೆ ನೊಟೀಸ್ ನೀಡುವ ಬ್ಯಾಂಕ್ ಮ್ಯಾನೇಜರ್ಗಳಿಗೆ ಸಿಎಂ ಎಚ್ಚರಿಕೆ
ಕೋರ್ಟ್ ಆದೇಶ ಇದ್ದರೂ ಅದನ್ನು ನಿರ್ಲಕ್ಷಿಸಿ ಇನ್ಸ್ ಪೆಕ್ಟರ್ ಮಂಜುನಾಥ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರವೀಂದ್ರ ಹೊಟ್ಟೆಯಲ್ಲಿ ಗೆಡ್ಡೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದರೂ ಅದನ್ನು ಲೆಕ್ಕಿಸದೇ ಹಲ್ಲೆ ನಡೆಸಲಾಗಿದೆ ಎಂದು ರವೀಂದ್ರ ಆರೋಪಿಸಿದ್ದಾರೆ.
ಈ ನಡುವೆ ಇನ್ಸ್ ಪೆಕ್ಟರ್ ಮಂಜುನಾಥ, ರವೀಂದ್ರ ಅವರ ಮನೆಗೆ ಹೋಗಿ ತಾಯಿ ಮತ್ತು ಮಡದಿಗೆ ರಿವಾಲ್ವರ್ ತೋರಿಸಿ ಎನ್ ಕೌಂಟರ್ ಮಾಡೋದಾಗಿ ಬೆದರಿಸಿದ್ದಾರೆ ಎಂದು ದೂರಲಾಗಿದೆ.
"ನಾನು ಸಚಿವ ಡಿ.ಕೆ. ಶಿವಕುಮಾರ್ ಬೆಂಬಲಿಗ. ನನ್ನನ್ನು ಯಾರು ಏನೂ ಮಾಡಲಾಗದು ಎಂದು ಇನ್ಸ್ ಪೆಕ್ಟರ್ ಬೆದರಿಸಿದ್ದಾರೆ" ಎಂದು ಹೇಳಲಾಗಿದ್ದು, ಮಂಜುನಾಥ್ ತೋರಿದ ಕ್ರೌರ್ಯದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರವಿಕಾಂತೇ ಗೌಡ ಅವರ ಬಳಿ ರವೀಂದ್ರ ದೂರು ನೀಡಿದ್ದಾರೆ. ತನಾಗಾಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕಾಗಿ ಮನವಿ ಮಾಡಿದ್ದಾರೆ.