ರಾಜೀನಾಮೆ ಹಿಂಪಡೆಯುವ ಬಗ್ಗೆ ಅನುಪಮಾ ಶೆಣೈ ಸುಳಿವು
ಬೆಂಗಳೂರು, ಸೆ. 18: ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ತಮ್ಮ ಹುದ್ದೆಗೆ ನೀಡಿದ ರಾಜೀನಾಮೆಯನ್ನು ಹಿಂಪಡೆಯುವ ಬಗ್ಗೆ ಮಾತುಕತೆ ಆರಂಭಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಈ ಮೂಲಕ ಪೊಲೀಸ್ ಇಲಾಖೆ ತೊರೆದು ರಾಜಕೀಯ ರಂಗಕ್ಕೆ ಸೇರುತ್ತಾರೆ ಎಂಬ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ. ಆಗಸ್ಟ್ 29ರಂದು ನಾನು ಸಿಎಂ ಅವರಿಗೆ ಪತ್ರ ಬರೆದಿದ್ದೇನೆ. ನಂತರ ದೂರವಾಣಿ ಮೂಲಕ ಅವರೊಟ್ಟಿಗೆ ಮಾತನಾಡಿದ್ದೇನೆ. ಪೊಲೀಸ್ ವ್ಯವಸ್ಥೆಯಲ್ಲಿರುವ ಲೋಪ ದೋಷಗಳ ಬಗ್ಗೆ, ಮಹಿಳಾ ಅಧಿಕಾರಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಿದ್ದೇನೆ. ಪುನಃ ಇಲಾಖೆಗೆ ಬರುವಂತೆ ಸಿಎಂ ಅವರು ಸಲಹೆ ನೀಡಿದ್ದಾರೆ ಎಂದು ಅನುಪಮಾ ಅವರು ಖಾಸಗಿ ಮಾಧ್ಯಮಕ್ಕೆ ಹೇಳಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ನಡೆದ ಹೈದರಾಬಾದ್ ಸ್ವಾತಂತ್ರ್ಯ ಸಂಘರ್ಷ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಅನುಪಮಾ ಅವರು ಕಾರ್ಯಕ್ರಮದ ನಂತರ ಮಾತನಾಡಿದರು. ನಾನು ರಾಜೀನಾಮೆ ನೀಡಿದ್ದರ ಬಗ್ಗೆ ಸಾರ್ವಜನಿಕರಲ್ಲಿ ಆಕ್ಷೇಪ, ಅಸಮಾಧಾನ ಕಂಡು ಬಂದಿದ್ದು ನಿಜ. ಇಲಾಖೆಯಲ್ಲಿ ಇದ್ದು ಭ್ರಷ್ಟಾಚಾರ ವ್ಯವಸ್ಥೆಯನ್ನು ಸರಿಪಡಿಸುವಂತೆ ಎಲ್ಲರೂ ಆಗ್ರಹಿಸಿದ್ದಾರೆ. ನಾನು ಎರಡು ರಾಜೀನಾಮೆ ಪತ್ರ ನೀಡಿದ್ದು ನಿಜ. ಈ ಬಗ್ಗೆ ಕಾನೂನು ಹೋರಾಟ ಮುಂದುವರೆಯಲಿದೆ ಎಂದರು.