ಪ್ರಧಾನಿ ಆದೇಶಕ್ಕೂ ಕಿಮ್ಮತ್ತಿಲ್ಲ, ಗ್ರಾಮಸ್ಥರ ಚುನಾವಣೆ ಬಹಿಷ್ಕಾರ
ಮಂಗಳೂರು, ಮಾರ್ಚ್ 12 : ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಪ್ರಧಾನಮಂತ್ರಿ ಕಾರ್ಯಾಲಯದಿಂದ ಪತ್ರ ಬಂದಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನದ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಈ ತೀರ್ಮಾನ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗ್ರ ಗ್ರಾಮದ ಇತಿಹಾಸ ಪ್ರಸಿದ್ಧ ದೈವಗಳ ಸ್ಥಾನ ಮುಗೆರಡ್ಕಕ್ಕೆ ಸಂಪರ್ಕ ರಸ್ತೆಯಾದ ಕಲ್ಲಮಾಡ - ಉಂತನಾಜೆ - ಮುಗೆರಡ್ಕ ಮರು ಡಾಂಬರು ಕಾಮಗಾರಿಗೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ವೆಬ್ ಸೈಟ್ ಕನ್ನಡದಲ್ಲಿ ಲಭ್ಯ
ಈ ರಸ್ತೆಗೆ ಡಾಂಬರು ಕಾಮಗಾರಿ ನಡೆದು 35 ವರ್ಷಗಳೇ ಕಳೆದಿವೆ. ಕಲ್ಲಮಾಡ- ಊಂತನಾಜೆ-ಅಲೆಕ್ಕಿ- ಮುಗೆರಡ್ಕ ರಸ್ತೆ ಜನೋಪಯೋಗಿ ರಸ್ತೆಯಾಗಿದ್ದು, ಇದು ಹತ್ತಿರದ ರಾಷ್ಟ್ರೀಯ ಹೆದ್ದಾರಿ ಮೂಲಕ ನೆಲ್ಯಾಡಿ, ಕೊಕ್ಕಡ, ಸೌತಡ್ಕ, ಉಪ್ಪಿನಂಗಡಿ, ಸುಬ್ರಹ್ಮಣ್ಯ, ಕಡಬ ಹಾಗೂ ಮಂಗಳೂರಿಗೆ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ.
ಬಂದಾರು, ಮೊಗ್ರು, ಬೆಳಾಲು, ಕೊಯ್ಯೂರು, ಕಣಿಯೂರು ಮುಂತಾದ ಗ್ರಾಮಸ್ಥರಿಗೆ ಇದು ಅನುಕೂಲಕರ ರಸ್ತೆ. ಅಲ್ಲದೆ ಇತಿಹಾಸ ಪ್ರಸಿದ್ಧ ಮುಗೆರಡ್ಕ ದೈವಸ್ಥಾನಕ್ಕೆ ಈ ರಸ್ತೆಯ ಮೂಲಕವೇ ಹೋಗಬೇಕಾಗಿರುವುದರಿಂದ ಭಕ್ತಾದಿಗಳಿಗೆ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಶಾಲೆ, ಅಂಗನವಾಡಿ, ಅಂಚೆ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳಿಗೆ ತೆರಳಲು ಜನರು ಇದೇ ರಸ್ತೆಯನ್ನು ಅವಲಂಭಿಸುತ್ತಾರೆ.
ಬಂದಾರು- ಮೊಗ್ರ ಗ್ರಾಮಸ್ಥರು ಈ ರಸ್ತೆ ದುರಸ್ತಿಗಾಗಿ ಸರಕಾರಕ್ಕೆ ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕ ವಸಂತ ಬಂಗೇರ ಅವರಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಗ್ರಾಮಸ್ಥರು, ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ, ಈ ಕುರಿತಂತೆ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಕ್ಕೆ ಪತ್ರ ಬರೆದಿತ್ತು. ಆದರೆ ಪ್ರಧಾನಿ ಕಾರ್ಯಾಲಯದಿಂದ ಬಂದ ಪತ್ರಕ್ಕೂ ಕ್ಯಾರೇ ಅನ್ನದ ಅಧಿಕಾರಿಗಳು, ಯಾವುದೇ ಕ್ರಮ ಕೈಗೊಂಡಿಲ್ಲ.
ಬೇಸತ್ತ ಗ್ರಾಮಸ್ಥರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಬಂದಾರು-ಮೊಗ್ರ ಗ್ರಾಮದಲ್ಲಿ 90ಕ್ಕೂ ಅಧಿಕ ಕುಟುಂಬಗಳಿದ್ದು, 500ಕ್ಕೂ ಅಧಿಕ ಮತದಾರರಿದ್ದಾರೆ.