ನರೇಶ್ ಶೆಣೈ ಮಂಪರು ಪರೀಕ್ಷೆಗೆ ಹೈಕೋರ್ಟ್ ಆದೇಶ
ಮಂಗಳೂರು, ಡಿಸೆಂಬರ್, 15 : ಆರ್ ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಮೋ ಬ್ರಿಗೇಡ್ ಮುಖಂಡ ನರೇಶ್ ಶೆಣೈಯಾ ಮಂಪರು ಪರೀಕ್ಷೆಗೆ ಬುಧವಾರ ಮಂಗಳೂರು ಪೊಲೀಸ್ ಗೆ ಹೈಕೋರ್ಟ್ ಆದೇಶ ನೀಡಿದೆ.
ಈ ಮಧ್ಯೆ ನಾರ್ಕೊ ಅನಾಲಿಸಿಸ್ ಗೆ ಆರೋಪಿ ನರೇಶ್ ಶೆಣೈ ನಿರಾಕರಿಸಿರುವುದನ್ನು ಮಂಗಳೂರು ಸೆಷನ್ಸ್ ಕೋರ್ಟ್ ಎತ್ತಿಹಿಡಿದಿತ್ತು, ಇದನ್ನು ಪ್ರಶ್ನಿಸಿ ಬಾಳಿಗಾ ತಂದೆ ರಾಮಚಂದ್ರ ಅವರು ನರೇಶ್ ಶೆಣೈ ಅವರ ಮಂಪರು ಪರೀಕ್ಷಾ ವಿಶ್ಲೇಷಣೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನು ಪರಿಶೀಲಿಸಿದ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರು ಬುಧವಾರ ನರೇಶ್ ಶೆಣೈ ಮಂಪರು ಪರೀಕ್ಷೆಗೆ ಆದೇಶ ಹೊರಡಿಸಿದ್ದಾರೆ.
ವಿನಾಯಕ್ ಬಾಳಿಗ ಅವರ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವಾಗ ಪ್ರಮುಖ ಆರೋಪಿಗೆ ಜಾಮೀನು ನೀಡಿದ್ದರಿಂದ ತನಿಖೆಗೆ ತಡೆಯಾಗುತ್ತದೆ. ತಮ್ಮ ಕುಟುಂಬಕ್ಕೂ ಅಪಾಯ ಹಾಗೂ ಸಾಕ್ಷಿ ನಾಶಕ್ಕೂ ಸಹಕಾರಿಯಾಗಲಿದೆ ಎಂದ ಬಾಳಿಗಾ ಕುಟಂಬ ಹೈಕೋರ್ಟ್ ಮೊರೆ ಹೋಗಿದ್ದರು.
ಆರೋಪಿಗೆ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರಬೀಳುವ ಸಾಧ್ಯತೆ ಇದೆ. ಆದ್ದರಿಂದ ಮಂಪರು ಪರೀಕ್ಷೆಗೆ ಸಮ್ಮತಿ ನೀಡುವಂತೆ ಕೋರಿ ಬಾಳಿಗಾ ಕುಟಂಬ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದು ಈಗ ಆರೋಪಿ ನರೇಶ್ ಶೆಣೈಯಾ ಮಂಪರು ಪರೀಕ್ಷಾಗೆ ಅರ್ಜಿ ಬಿಡುಗಡೆ ಮಾಡಿದೆ.