'ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಆರೋಪಕ್ಕೆ ಸಾಕ್ಷಿ ಇಲ್ಲ'
ಮಂಗಳೂರು, ಜೂನ್ 11 : ನ್ಯಾಯಬೆಲೆ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ವಿತರಿಸಲಾಗಿದೆ ಎಂದು ಪ್ರತಿಪಕ್ಷದವರ ಆರೋಪವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು ಟಿ ಖಾದರ್ ತಳ್ಳಿ ಹಾಕಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನ್ಯಾಯಬೆಲೆ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ವಿತರಿಸಲಾಗಿದೆ ಎಂದು ಪ್ರತಿಪಕ್ಷದವರು ಆರೋಪ ಮಾಡಿದ್ದಾರೆ. ಆದರೆ ಆ ಬಗ್ಗೆ ಯಾವುದೇ ಆಧಾರ ಪ್ರತಿಪಕ್ಷದವರಲ್ಲಿ ಇಲ್ಲ" ಎಂದರು.
[ಪ್ಲಾಸ್ಟಿಕ್ ಅಕ್ಕಿ ಪರೀಕ್ಷಿಸೋದು ಹೇಗೆ? ಇಲ್ಲಿವೆ 5 ಹಾದಿಗಳು]
ರಾಜ್ಯಕ್ಕೆ ಸದ್ಯ 2.77 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಆವಶ್ಯಕತೆ ಇದೆ. ಅದನ್ನು ಕೇಂದ್ರ ಆಹಾರ ನಿಗಮದಿಂದ ಖರೀದಿಸಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಗೋದಾಮುಗಳಿಗೆ ನೇರವಾಗಿ ಅಕ್ಕಿಯನ್ನು ಸರಬರಾಜು ಮಾಡಲಾಗುತ್ತದೆ.
ಅಲ್ಲಿಂದ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡಲಾಗುತ್ತದೆ. ಹಾಗಾಗಿ ಪ್ಲಾಸ್ಟಿಕ್ ಅಕ್ಕಿ ಮತ್ತು ಮೊಟ್ಟೆಯ ಪ್ರಶ್ನೆಯೇ ಬರುವುದಿಲ್ಲ. ಸರಕಾರದ ಯೋಜನೆಯ ವಿರುದ್ಧ ಪ್ರತಿಪಕ್ಷ ಮಾಡುವ ಮಸಲತ್ತು ಇದಾಗಿದೆ ಎಂದು ಪ್ರತಿಪಕ್ಷದ ಆರೋಪಕ್ಕೆ ತಿರುಗೇಟು ನೀಡಿದರು.
ಇನ್ನು ಪಡಿತರ ಚೀಟಿ ಮೂಲಕ ಆಹಾರ ವಿತರಣೆ ಖಾತರಿಯ ಬಗ್ಗೆ ಬಯೋಮೆಟ್ರಿಕ್ ಅಳವಡಿಸಲಾಗಿತ್ತು. ಆಗ ಹಲವು ನ್ಯಾಯಬೆಲೆ ಅಂಗಡಿದಾರರು ವಿರೋಧ ವ್ಯಕ್ತಪಡಿಸಿದ್ದರು.
ಆ ಹಿನ್ನಲೆಯಲ್ಲಿ ಪರವಾನಿಗೆ ಹೊಂದಿದ ನ್ಯಾಯಬೆಲೆ ಅಂಗಡಿದಾರರು ಕನಿಷ್ಠ 10ನೇ ತರಗತಿ ತೇರ್ಗಡೆ ಹೊಂದಿರಬೇಕು ಎಂಬ ನಿಯಮ ರೂಪಿಸಲಾಯಿತು.
ಹಿರಿಯರ ಕಾಲದಿಂದಲೂ ಇದನ್ನು ನಡೆಸಿಕೊಂಡು ಬರುತ್ತಿದ್ದು, ವಿದ್ಯಾರ್ಹತೆ ಮಿತಿಯನ್ನೂ ಕೈ ಬಿಡಬೇಕು ಎಂದು ಹಲವರು ಮನವಿ ಮಾಡಿದ್ದರು.
ಹಾಗಾಗಿ ಎರಡು ನಿಯಮ ಕೈಬಿಟ್ಟಿದ್ದಲ್ಲದೆ, ಅನುಕಂಪದ ಆಧಾರದ ಮೇಲೆ ಕುಟುಂಬಸ್ಥರಿಗೆ ನ್ಯಾಯಬೆಲೆ ಅಂಗಡಿಯ ಪರವಾನಿಗೆ ನೀಡಲು ನಿರ್ಧರಿಸಲಾಗಿದೆ.
ಆದರೆ ಅಂತಹ ನ್ಯಾಯಬೆಲೆ ಅಂಗಡಿದಾರರ ವಿರುದ್ಧ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿರಬಾರದು ಎಂದು ಸಚಿವ ಖಾದರ್ ಸ್ಪಷ್ಟಪಡಿಸಿದರು.