ಯಾರಿಗೋ ತೋಡಿದ್ದ ಗುಂಡಿಯಲ್ಲಿ ಯಾರೋ ಬಿದ್ದ ಪುತ್ತೂರು ಪ್ರಸಂಗ
ಪುತ್ತೂರು, ನವೆಂಬರ್ 24: ಹಂದಿ ಹಿಡಿಯಲೆಂದು ತೋಟದ ಬದಿಯಲ್ಲಿ ಅಳವಡಿಸಲಾಗಿದ್ದ ಉರುಳಿಗೆ ಚಿರತೆಯೊಂದು ಸಿಕ್ಕಿಬಿದ್ದಿರುವ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಮಾಲತ್ತೋಡಿ ಎಂಬಲ್ಲಿ ಬುಧವಾರ ನಡೆದಿದ್ದು, ಚಿರತೆಯನ್ನು ಅರಣ್ಯ ಇಲಾಖೆಯವರು ಪ್ರಾಣಾಪಾಯದಿಂದ ಪಾರು ಮಾಡಿ ಬೋನಿನಲ್ಲಿ ಹಾಕಿ ಶಿರಾಡಿ ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ಉರುಳಿಗೆ ಸಿಕ್ಕಿಬಿದ್ದ ಘಟನೆ: ಮಾಲೆತ್ತೋಡಿ ನಿವಾಸಿ ಬಾಲಕೃಷ್ಣ ಕೆದಿಲಾಯ ಎಂಬವರ ತೋಟದ ಸಮೀಪದ ಗುಡ್ಡದಲ್ಲಿ ಹಂದಿ ಹಿಡಿಯಲೆಂದು ಯಾರೋ ಉರುಳು ಹಾಕಿದ್ದರು. ಆಹಾರ ಅರಸಿಕೊಂಡು ರಾತ್ರಿ ವೇಳೆ ಕೆದಿಲಾಯದ ಗುಡ್ಡಕ್ಕೆ ಬಂದಿದ್ದ ಚಿರತೆ ಹಂದಿಗೆ ಹಾಕಿದ್ದ ಉರುಳಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಹಗ್ಗದ ಉರುಳು ಚಿರತೆ ಸೊಂಟದಲ್ಲಿ ಸಿಲುಕಿ ಸಿಕ್ಕಿಬಿದ್ದಿತ್ತು. ಕೆದಿಲಾಯ ಪುತ್ರ ಬೆಳಗ್ಗೆ ನೀರು ಬಿಡಲೆಂದು ತೋಟಕ್ಕೆ ತೆರಳುವ ವೇಳೆ ಉರುಳಿನಲ್ಲಿ ಚಿರತೆ ಸಿಲುಕಿರುವುದು ತಿಳಿಯಿತು. ತಕ್ಷಣ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.[ಕೊನೆಗೂ ಸೆರೆ ಸಿಕ್ಕಿತು ಮೈಸೂರಿನ ಚಿರತೆ]
ಕಾರ್ಯಾಚರಣೆ ವಿವರ: ಪುತ್ತೂರು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದರೂ ಚಿರತೆ ಹಿಡಿಯಲು ಸಾಧ್ಯವಾಗಲಿಲ್ಲ. ತಕ್ಷಣ ಪಿಲಿಕುಳದ ಅರಿವಳಿಕೆ ತಜ್ಞರು ಹಾಗೂ ಹುಣಸೂರಿನ ಅರಿವಳಿಕೆ ತಜ್ಞರಿಗೆ ಮಾಹಿತಿ ನೀಡಲಾಯಿತು. ನಂತರ ಪುತ್ತೂರು ಅರಣ್ಯ ಇಲಾಖೆಯಿಂದ ಬೋನು ತರಿಸಲಾಯಿತು. ಬಳಿಕ ಪಿಲಿಕುಳದ ಅರಿವಳಿಕೆ ತಜ್ಞರಾದ ಡಾ. ದೀಪಿಕಾ ಹಾಗೂ ಹುನಸೂರಿನ ಅರಿವಳಿಕೆ ತಜ್ಞರಾದ ಡಾ. ಉಮಾ ಶಂಕರ್, ಪುತ್ತೂರು ಪಶುವೈದ್ಯಾಧಿಕಾರಿ ಡಾ.ಸುರೇಶ್ ಭಟ್ ಚಿರತೆಗೆ ಮತ್ತು ಬರಿಸುವ ಲಸಿಕೆಯನ್ನು ನೀಡಿದ ಬಳಿಕ ಚಿರತೆಯನ್ನು ಬೋನಿಗೆ ಹಾಕಲಾಯಿತು.ನಂತರ ಶಿರಾಡಿ ರಕ್ಷಿತಾರಣ್ಯಕ್ಕೆ ಬಿಡಲಾಯಿತು.[ಹರಿದ ಬಲೆಯಲ್ಲಿ ಚಿರತೆ ಹಿಡಿದ ಅರಣ್ಯ ಇಲಾಖೆ ಶೂರರು!]
ಸ್ಥಳದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಸೇರಿದ್ದರು. ಇವರನ್ನು ಹತೋಟಿಗೆ ತರಲು ಪೊಲೀಸ್ ಹಾಗೂ ಅರಣ್ಯ ಇಲಾಖೆಯವರು ಹರಸಾಹಸಪಟ್ಟರು.