75 ವರ್ಷಗಳ ಕನಸಾದ ಫಲ್ಗುಣಿ ತೂಗುಸೇತುವೆ ಉದ್ಘಾಟನೆ
ಮಂಗಳೂರು, ಆಗಸ್ಟ್ 12: 75 ವರ್ಷಗಳಿಂದ ಎದುರು ನೋಡುತ್ತಿದ್ದ ಫಲ್ಗುಣಿ ತೂಗುಸೇತುವೆಯನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ಲೋಕಾರ್ಪಣೆ ಮಾಡಿದ್ದಾರೆ. ಈ ಸೇತುವೆ ಉದ್ಘಾಟನೆ ಮೂಲಕ ಮುತ್ತೂರು ಹಾಗೂ ಬಡಗಬೆಳ್ಳೂರು ಗ್ರಾಮಗಳ ಜನತೆಯ 75 ವರ್ಷಗಳ ನಿರೀಕ್ಷೆ ಸಾಕಾರವಾಗಿದೆ.
ಸೇತುವೆ ಉದ್ಘಾಟನೆ ನಂತರ ಮಾತನಾಡಿದ ಸಚಿವ ರಮಾನಾಥ ರೈ, ಫಲ್ಗುಣಿ ನದಿಗೆ ಕೂಟೆಲು ಬಳಿ ಅಣೆಕಟ್ಟು ಕಟ್ಟಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಸಂಪುಟದಲ್ಲಿ ಒಪ್ಪಿಗೆ ಸಿಗಬೇಕು ಎಂದರು.
ಬಡಗಬೆಳ್ಳೂರು ಕಾವೇಶ್ವರ ದೇಗುಲವನ್ನು ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ವಹಿಸಲು ಪತ್ರ ಬರೆಯಲಾಗಿದೆ. ಶೀಘ್ರವೇ ಆ ಇಲಾಖೆ ಇದಕ್ಕೆ ಅನುಮೋದನೆ ನೀಡಲಿದೆ ಎಂದು ಹೇಳಿದರು.
ಮುತ್ತೂರಿನ ಪದವಿಪೂರ್ವ ಕಾಲೇಜಿನಲ್ಲಿ ಐಟಿಐ ಶಿಕ್ಷಣ ಪ್ರಾರಂಭಿಸಲಾಗುವುದು. ಪೊಳಳಿಯಿಂದ ಮಳಲಿಗೆ ತೂಗು ಸೇತುವೆ ನಿರ್ಮಾಣ , ಕುಪ್ಪೆಪದವು ಸಿದ್ದಕಟ್ಟೆ ತೂಗುಸೇತುವೆ ನಿರ್ಮಾಣ ಕಾಮಗಾರಿ ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಸೇತುವೆ ನಿರ್ಮಾಣ ಮಾಡಿದ ಗಿರೀಶ್ ಭಾರದ್ವಾಜ್ ಹಾಗೂ ಸ್ಥಳಾವಕಾಶ ನೀಡಿದ ಜನರನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಸಚಿವರು, ಈ ಎರಡೂ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಮೊಹಿದ್ದೀನ್ ಬಾವಾ ಮಾತನಾಡಿ, ಮುತ್ತೂರು ಪ್ರೌಢಶಾಲೆಗೆ 50 ಲಕ್ಷ ರು. ಬಿಡುಗಡೆಯಾಗಿದೆ, ನಾಲ್ಕು ಕೊಠಡಿಗಳ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದರು.