ಗೂಂಡಾ ಕಾಂಗ್ರೆಸ್ ಕಿತ್ತೊಗೆಯಲು ಜನ ಸಿದ್ದ: ಶಾ
ಮಂಗಳೂರು, ಫೆಬ್ರವರಿ 21: ಕರ್ನಾಟಕದ ಜನರು 'ಮರ್ಡರ್, ಮಾಫಿಯಾ, ಮಿನಿಸ್ಟರ್' ಎಂಬ ಮೂರು 'ಎಂ'ನಿಂದ ಬೇಸತ್ತಿದ್ದಾರೆ. ಈ ಮೂರು 'ಎಂ' ಸಮಸ್ಯೆಯಿಂದ ಮುಕ್ತಿ ಪಡೆಯಲು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಪರಿವರ್ತನೆ ತರಲು ರಾಜ್ಯದ ಜನರು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
In Pics: ಕರಾವಳಿ ಜಿಲ್ಲೆಗಳಲ್ಲಿ ಅಮಿತ್ ಶಾ ಮಿಂಚಿನ ಸಂಚಾರ
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ ಸರಕಾರದ ಸಮಯ ಮುಗಿದಿದೆ. ಮುಂಬರುವ ಚುನಾವಣೆಯ ಮತ ಎಣಿಕೆಯ ಬಳಿಕ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪುತ್ತೂರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಅಮಿತ್ ಶಾ ಸಂವಾದ
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ದೇಶ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದ ಅವರು, "ಕರ್ನಾಟಕ ಜನತೆ ಹತ್ಯೆ , ಮಾಫಿಯ ರಾಜ್, ಭ್ರಷ್ಟ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಗೂಂಡಾ ಸರ್ಕಾರದಿಂದ ಮುಕ್ತವಾಗಿ ಯಡಿಯೂರಪ್ಪ ನೇತೃತ್ವದ ಸರಕಾರ ಬರಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ," ಎಂದು ಅವರು ಹೇಳಿದರು.
ತುಷ್ಟೀಕರಣ ರಾಜನೀತಿ
ನಾಲ್ಕು ವರ್ಷದಲ್ಲಿ ಹಲವು ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ ರಾಜ್ಯ ಸರಕಾರ ಇದರ ವಿರುದ್ದ ಚಕಾರ ಎತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ದ ಕಾಂಗ್ರೆಸ್ ನೇತೃತ್ವದ ಸರಕಾರ ತುಷ್ಟೀಕರಣ ರಾಜನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ ಶಾ, "ಕರ್ನಾಟಕ ಜನತೆ ಪರಿವರ್ತನೆಗೆ ತಯಾರಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಆಧಿಕಾರಕ್ಕೆ ಬರಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಓಲೈಕೆ ರಾಜಕಾರಣ ಯಶಸ್ವಿಯಾಗದು: ಕುಕ್ಕೆಯಲ್ಲಿ ಅಮಿತ್ ಶಾ
ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸಿದ ಶಾ
ಪಿ.ಎಫ್.ಐ ಸಂಘಟನೆ ನಿಷೇಧದ ಕುರಿತು ಮಾತನಾಡಿದ ಅಮಿತ್ ಶಾ, "ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಅರ್ಜಿ ಸಲ್ಲಿಸಬೇಕು. ಆದರೆ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸುವ ಕೆಲಸ ಮಾಡುತ್ತಿಲ್ಲ," ಎಂದು ಅವರು ತಿಳಿಸಿದರು. ಇಂತಹ ಸಂಘಟನೆಗಳನ್ನು ನಿಷೇಧಿಸದೆ ಸರ್ಕಾರ ಏನು ಸಂದೇಶ ಕೊಡುತ್ತಿದೆ ಎಂದು ಅವರು ಪ್ರಶ್ನಿಸಿದರು.
ಪ್ರತೀ ಕ್ಷೇತ್ರದಲ್ಲಿ ನವಶಕ್ತಿ ಸಮಾವೇಶ
ಚುನಾವಣಾ ಪೂರ್ವ ತಯಾರಿಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಾಗಿ ಜಿಲ್ಲೆಗೆ ಭೇಟಿ ನೀಡಿದ್ದೇನೆ ಎಂದು ಹೇಳಿದ ಅವರು, "ದ.ಕ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದ ಬೂತ್ ಮಟ್ಟದ 9 ಕಾರ್ಯಕರ್ತರ ನವಶಕ್ತಿ ಸಮಾವೇಶ ನಡೆಸಲಾಗಿದೆ. ಇದೇ ರೀತಿ ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ನವಶಕ್ತಿ ಸಮಾವೇಶ ನಡೆಯಲಿದೆ," ಎಂದು ತಿಳಿಸಿದರು.
ತಪ್ಪು ಒಪ್ಪಿಕೊಂಡ ಶಾ
ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಅವರಿಂದ ಮಾರಣಾಂತಿಕ ಹಲ್ಲೆಗೆ ಒಳಗಾದ ವಿದ್ವತ್ ಬಿಜೆಪಿ ಕಾರ್ಯಕರ್ತ ಅಲ್ಲ ಎಂದು ಸ್ಪಷ್ಟಪಡಿಸಿದ ಶಾ, ಏಕಾಏಕಿ ಮಾತಿನ ಭರದಲ್ಲಿ ತಪ್ಪಿ ವಿದ್ವತ್ ನಮ್ಮ ಕಾರ್ಯಕರ್ತ ಎಂದು ಹೇಳಿದ್ದಾಗಿ ಸಮಜಾಯಿಶಿ ನೀಡಿದರು.
ಆದರೆ ನಾನು ಹಾಗೆ ಹೇಳಿದ್ರಿಂದ ಈಗ ಆ ಹಲ್ಲೆ ಪ್ರಕರಣದ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗಿದೆ . ಇಲ್ಲದಿದ್ದರೆ ಸಿದ್ದರಾಮಯ್ಯ ಅವರಿಗೆ ಅಂಜಿ ಚರ್ಚೆಯೇ ನಡೆಯುತ್ತಿರಲಿಲ್ಲ. ಇದರಿಂದ ಕನಿಷ್ಠ ಸಿಎಂ ಸಿದ್ದರಾಮಯ್ಯನವರಿಗೆ ಬಿಸಿ ತಾಗಿದೆ ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಧನ್ಯವಾದ ಹೇಳ ಬಯಸುತ್ತೇನೆ ಎಂದು ಅಮಿತ್ ಮತ್ತೊಂದು ಹಸಿ ಸುಳ್ಳನ್ನು ಹೇಳಿದ್ದಾರೆ. ಮಾಧ್ಯಮಗಳಿಂದಾಗಿಯೇ ಪ್ರಕರಣ ಸದ್ದು ಮಾಡಿತ್ತು ಎಂಬುದನ್ನು ಮರೆತು ತಮ್ಮಿಂದ ಪ್ರಕರಣದ ಬಗ್ಗೆ ಚಚರ್ಚೆಯಾಗುತ್ತಿದೆ ಎಂದಿದ್ದಾರೆ.
ದೀಪಕ್ ರಾವ್ ಮನೆಗೆ ಮಾತ್ರ ಭೇಟಿ
ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮೃತಪಟ್ಟ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಅವರ ಮನೆಗೆ ತೆರಳಿ ಸಾಂತ್ವನ ಹೇಳಲಿದ್ದೀರಿ ಆದರೆ ಅದೇ ದಿನ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಅಬ್ದುಲ್ ಬಶೀರ್ ಅವರ ಮನೆಗೆ ತೆರಳದಿರಲು ಕಾರಣವೇನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, "ನಾನು ಭಾಜಪದ ರಾಷ್ಟ್ರೀಯ ಅಧ್ಯಕ್ಷನ ನೆಲೆಯಲ್ಲಿ ನಮ್ಮ ಕಾರ್ಯಕರ್ತ ದೀಪಕ್ ಮನೆಗೆ ಭೇಟಿ ಕೊಡುತ್ತಿದ್ದೇನೆ," ಎಂದು ಹೇಳಿದರು.
"ದೀಪಕ್ ಮನೆಯವರಿಗೆ ಸಾಂತ್ವಾನ ಹೇಳೋದು ನನ್ನ ಕರ್ತವ್ಯ. ಆದರೆ ರಾಜ್ಯದಲ್ಲಿ 22 ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಇಲ್ಲಿಯವರೆಗೆ ಮುಖ್ಯಮಂತ್ರಿ ಎಷ್ಟು ಮನೆಗೆ ಭೇಟಿ ನೀಡಿದ್ದಾರೆ?" ಎಂದು ಅವರು ಪ್ರಶ್ನಿಸಿದರು. "ಇಲ್ಲಿಗೆ ಬಂದಾಗ ರಾಜಕೀಯ ಲಾಭಕ್ಕಾಗಿ ದೀಪಕ್ ರಾವ್ ಮನೆಗೆ ಮಾತ್ರ ಭೇಟಿ ನೀಡಿದ್ದಾರೆ. ಹತ್ಯೆಗೀಡಾದ ಬೇರೆ ಹಿಂದೂ ಕಾರ್ಯಕರ್ತರ ಮನೆಗೆ ಯಾಕೆ ಭೇಟಿ ನೀಡಿಲ್ಲ?" ಎಂದು ಶಾ ಪ್ರಶ್ನೆ ಮಾಡಿದರು.
ನೀರವ್ ಗೂ ನರೇಂದ್ರ ಮೋದಿಗೂ ಸಂಬಂಧವಿಲ್ಲ
ನೀರವ್ ಮೋದಿ ಹಗರಣದ ಕುರಿತು ಪ್ರಧಾನಿ ಮೋದಿ ಮೌನದ ವಿಚಾರ ಹಾಗು ನೀರವ್ ಮೋದಿ ಅವರ ಹಗರಣಕ್ಕೆ ಪ್ರಧಾನಿ ಮೋದಿ ಅವರನ್ನು ತಳಕು ಹಾಕುತ್ತಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅಮಿತ್ ಶಾ, "ನೀರವ್ ಮೋದಿ ಮತ್ತು ಪ್ರಧಾನಿ ಮೋದಿಗೂ ಸಂಬಂಧ ಇಲ್ಲ.
ಕೇವಲ ಜೊತೆಗೆ ಫೋಟೋ ಇದ್ದದ್ದಕ್ಕೆ ಸಂಬಂಧ ಕಲ್ಪಿಸೋದು ಹಾಸ್ಯಾಸ್ಪದ ಮತ್ತು ಖಂಡನೀಯ," ಎಂದು ಕಿಡಿಕಾರಿದರು.
ಕೇಂದ್ರದಿಂದ ಕಠಿಣ ಕ್ರಮ
11 ಸಾವಿರ ಕೋಟಿ ರೂಪಾಯಿಯ ಈ ಹಗರಣದ ಕುರಿತು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಪ್ರಕರಣವನ್ನು ಗಂಭೀರ ರೀತಿಯಲ್ಲಿ ಪರಿಗಣಿಸಿದೆ. ಈಗಾಗಲೇ ಐದು ಸಾವಿರ ಕೋಟಿಗಿಂತಲೂ ಮಿಕ್ಕಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.