ಮಂಗಳೂರಿನಲ್ಲಿ ಇನ್ನು ಪ್ರತಿಭಟನೆ ನಡೆಸಬೇಕಾದರೆ ಶುಲ್ಕ ನೀಡಬೇಕು
ಮಂಗಳೂರು, ಜನವರಿ 18: ಮಂಗಳೂರಿನಲ್ಲಿ ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ, ಖಾಸಗಿ ಸಭೆ, ಸಮಾರಂಭ , ಮೆರವಣಿಗೆ ನಡೆಸಬೇಕಾದರೆ ಪೊಲೀಸ್ ಇಲಾಖೆಗೆ ಶುಲ್ಕ ಪಾವತಿಸಬೇಕು .
ಪ್ರತಿಭಟನೆ ಅಥವಾ ಕಾರ್ಯಕ್ರಮಕ್ಕೆ ಸೇರುವ ಜನಸಂಖ್ಯೆಗೆ ಆಧರಿಸಿ ಶುಲ್ಕ ಪಾವತಿಸಬೇಕು ಇಲ್ಲದಿದ್ದರೆ ಪೊಲೀಸ್ ಇಲಾಖೆ ವತಿಯಿಂದ ಅನುಮತಿ ನಿರಾಕರಿಸಲಾಗುವುದು. ಇಂತಹದೊಂದು ವ್ಯವಸ್ಥೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ.
ರಾಜ್ಯ ಸರಕಾರ 2018 ರ ಅ.9 ರ ಕರ್ನಾಟಕ ವಿಧಾನ ಸೌಧದ ಸಚಿವಾಲಯ ಬೆಂಗಳೂರು ಹಾಗು ಎಚ್.ಡಿ 56 ಇ.ಎಫ್.ಎಸ್ 2018 ನೀಡಿರುವ ಆದೇಶದಂತೆ ಖಾಸಗಿ ಸಭೆ, ಸಮಾರಂಭ, ಮೆರವಣಿಗೆಗೆ ಅನುಮತಿ ಪಡೆಯಲು ನಿಗದಿತ ಶುಲ್ಕವನ್ನು ಪಾವತಿಸಿ ಅನುಮತಿ ಪಡೆಯಬೇಕು ಎಂಬ ನಿಯಮವಿದೆ. ಇದನ್ನು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ.
ಮಂಗಳೂರಿನಲ್ಲಿ ಪ್ರತಿದಿನ ಸಾಮಾನ್ಯವಾಗಿ 2 ರಿಂದ 3 ಪ್ರತಿಭಟನೆಗಳು ನಡೆಯುತ್ತವೆ. ಆದರೆ ಈಗ ಚಿಕ್ಕ ಪುಟ್ಟ ಪ್ರತಿಭಟನೆ ನಡೆಸುವ ಹೋರಾಟ ಗಾಗರಿಗೂ ಶುಲ್ಕದ ಬಿಸಿ ತಟ್ಟಲಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವ ಪ್ರತಿಭಟನಾಕಾರರ ಸಂಖ್ಯೆಗನುಗುಣವಾಗಿ ಕನಿಷ್ಠ 500 ರೂಪಾಯಿಯಿಂದ 1 ಲಕ್ಷದ ವರಗೂ ಶುಲ್ಕ ನಿಗದಿ ಪಡಿಸಬಹುದಾಗಿದೆ.
ಪೊಲೀಸ್ ಇಲಾಖೆಯ ಈ ಕ್ರಮದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಹೋರಾಟವನ್ನು ಹತ್ತಿಕ್ಕುವ ರಾಜ್ಯ ಸರಕಾರದ ಹುನ್ನಾರ ಇದು ಎಂದು ಡಿ.ವೈ.ಎಫ್.ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ.
ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ರಾಜ್ಯ ಬಿಜೆಪಿಯ ರೆಸಾರ್ಟ್ ರಾಜಕಾರಣದ ವಿರುದ್ಧ ಗುರುವಾರ ಸಂಜೆ ಪ್ರತಿಭಟಿಸಲು ಪೊಲೀಸರ ಅನುಮತಿ ಕೋರಿ ಪತ್ರ ಬರೆದಾಗಲೇ 'ಶುಲ್ಕ'ದ ವಿಚಾರ ಬೆಳಕಿಗೆ ಬಂದಿದೆ. ಗುರುವಾರ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪಾಂಡೇಶ್ವರ ಠಾಣೆಗೆ ತೆರಳಿ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲು ಅನುಮತಿ ಕೋರಿದಾಗ ಪೊಲೀಸರು 500 ರೂಪಾಯಿ ಪಾವತಿಸಲು ಸೂಚಿಸಿದ್ದಾರೆ. ಪ್ರತಿಭಟನೆಗಳ ಮೂಲಕ ಸದಾ ಚಾಲ್ತಿಯಲ್ಲಿರುವ ಡಿವೈಎಫ್ಐ ಮುಖಂಡರು ಅನಿವಾರ್ಯವಾಗಿ 500 ರೂಪಾಯಿ ಪಾವತಿಸಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಜನಜಾಗೃತಿ ಆರಂಭಿಸಿದ್ದಾರೆ.
ಈ ಶುಲ್ಕ ಪಾವತಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಯಾವುದೇ ಸಾರ್ಜನಿಕ ಕಾರ್ಯಕ್ರಮ ಆಯೋಜಿಸುವಾಗ ಅದರಲ್ಲಿ ಸೇರುವ ಜನರ ಲೆಕ್ಕಾಚಾರದಲ್ಲಿ ಹಣಕಟ್ಟ ಬೇಕೆಂಬ ಸುತ್ತೋಲೆ ರಾಜ್ಯ ಸರಕಾರ ದಿಂದ ಬಂದಿದ್ದು ರಾಜ್ಯ ದಲ್ಲಿ 2018 ರ ಸಪ್ಟೆಂಬರ್ ತಿಂಗಳಿನಿಂದ ಈ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಇದರಲ್ಲಿ ಕೆಲವೊಂದು ಗೊಂದಲ ವಿದ್ದು , ಈ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆ ಕೆರೆಯಲಾಗುದು ಎಂದು ತಿಳಿಸಿದ್ದಾರೆ.