ಕೊರಗ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಿದ ಪಡುಬಿದ್ರೆ ಗ್ರಾಮಸ್ಥರು
ಮಂಗಳೂರು, ನವೆಂಬರ್. 7: ದೀಪಾವಳಿ ಎಂದರೆ ದೀಪಗಳ ಹಬ್ಬ. ಹಣತೆ ಹಚ್ಚುವ ಹಬ್ಬ. ಬೆಳಕಿನ ಹಬ್ಬ. ದೀಪಾವಳಿಯನ್ನು ಸ್ವಾಗತಿಸುವುದಕ್ಕಾಗಿ ಮನೆ ಮನೆಗಳಲ್ಲಿ ಸಂಭ್ರಮ ನೆಲೆಯಾಗಿದೆ. ಕತ್ತಲಿನಿಂದ ಬೆಳಕಿನ ಕಡೆಗೆ ಎಂಬ ಸಂದೇಶವನ್ನು ಸಾರುವ ದೀಪಾವಳಿಗೆ ಭಾರತೀಯ ಪರಂಪರೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ.
ಮನೆ ಮನದಲ್ಲಿ ಬೆಳಕಿನ ಚಿತ್ತಾರ ಮೂಡಿಸಿ ಮನಸ್ಸಿನ ಜಾಢ್ಯ, ಅಂಧಕಾರಗಳನ್ನು ಹೊಡೆದೊಡಿಸಿ ಬೆಳಕನ್ನು ನೆಲೆಗೊಳಿಸಬೇಕೆಂಬುದು ಈ ಹಬ್ಬದ ಉದ್ದೇಶ.
ಕೆಲವರು ಈ ಹಬ್ಬವನ್ನು ಅತ್ಯಂತ ಸಡಗರದಿಂದ, ವಿಶಿಷ್ವವಾಗಿ ಆಚರಿಸಲು ಪ್ರಯತ್ನಿಸುತ್ತಾರೆ. ಅದೇ ರೀತಿ ಪಡುಬಿದ್ರೆಯ ಗ್ರಾಮಸ್ಥರು ವಿಶಿಷ್ಟ ರೀತಿಯಲ್ಲಿ ಈ ಬಾರಿಯ ದೀಪಾವಳಿ ಆಚರಿಸಿದ್ದಾರೆ. ತುಳುನಾಡಿನ ಮೂಲ ನಿವಾಸಿಗಳು ಎಂದೇ ಹೇಳಲಾಗುವ ಕೊರಗ ಕುಟುಂಬಗಳೊಂದಿಗೆ ದೀಪಾವಳಿ ಆಚರಿಸಲಾಗಿದೆ.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯುವಕರ ತಂಡ ಕೊರಗ ಕುಟುಂಬಗಳೊಂದಿಗೆ ದೀಪಾವಳಿ ಆಚರಿಸಿ ಭಾವೈಕ್ಯತೆ ಮರೆದಿದ್ದಾರೆ ಎಂಬುದು ವಿಶೇಷ.
ಪಡುಬಿದ್ರೆಯ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚರ್ಚ್ ಬಳಿ ಹಲವಾರು ವರ್ಷಗಳಿಂದ ಮುರುಕಲು ಮನೆಯಲ್ಲಿ ವಾಸಿಸಿಕೊಂಡಿದ್ದ ನಾಲ್ಕು ಕೊರಗ ಜನಾಂಗದ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದ್ದವು.
ದೀಪಾವಳಿ ಸಡಗರ ಹೆಚ್ಚಿಸಲು ಮಾರುಕಟ್ಟೆಗೆ ಬಂದ ಆಕರ್ಷಕ ಆಕಾಶಬುಟ್ಟಿಗಳು
ಈ ಹಿನ್ನೆಲೆಯಲ್ಲಿ ಈ ಕುಟುಂಬವೂ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎನ್ನುವ ನಿಟ್ಟಿನಲ್ಲಿ ಸ್ಥಳೀಯರು ಸೇರಿ ದೀಪಗಳನ್ನು ಹಚ್ಚಿ ತಮ್ಮ ಸಾಂಪ್ರದಾಯಿಕ ಡೋಲು ವಾದನದ ಮೂಲಕ ಉತ್ಸಾಹದಿಂದ ದೀಪಾವಳಿ ಆಚರಿಸಿದರು.
ಮಕ್ಕಳ ಮುಖದಲ್ಲಿ ಮಂದಹಾಸ
ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ಲ, ಫಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜೀತೇಂದ್ರ ಫುರ್ಟಾಡೊ ಮತ್ತು ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಸುವರ್ಣ, ತಾಲೂಕು ಪಂಚಾಯತ್ ಸದಸ್ಯ ದಿನೇಶ್ ಪೂಜಾರಿ, ಡ್ಯಾನಿ ಕುಟಿನ್ನೊ ಅವರು ನಾಲ್ಕು ಕುಟುಂಬದ ಸದಸ್ಯರಿಗೆ ಹೊಸ ಬಟ್ಟೆ, ಅಕ್ಕಿ, ಬೆಲ್ಲ ಮತ್ತು ಸಿಹಿ ತಿಂಡಿ ವಿತರಿಸಿದರು. ಆ ಮೂಲಕ ಕೊರಗ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದರು.
ಜಿಯೋ ದೀಪಾವಳಿ ಹಬ್ಬದ ಧಮಾಕ, ಕ್ಯಾಶ್ ಬ್ಯಾಕ್
ಪರಸ್ಪರ ಹೊಂದಾಣಿಕೆಯಿಂದ ಆಚರಿಸಿ
ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜೀತೇಂದ್ರ ಫುರ್ಟಾಡೊ ಈ ಸಂದರ್ಭದಲ್ಲಿ ಮಾತನಾಡಿ, ದೀಪಾವಳಿ ಬೆಳಕಿನ ಹಬ್ಬ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಕುಟುಂದೊಂದಿಗೆ ಮಾತ್ರ ಹಬ್ಬ ಆಚರಿಸುತ್ತಾರೆ ವಿನಃ ಪಕ್ಕದ ಮನೆಯವರ ಗೋಜಿಗೆ ಹೋಗುವುದಿಲ್ಲ. ಆದರೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಇತರರೊಂದಿಗೂ ಸೇರಿ ಈ ಬೆಳಕಿನ ಹಬ್ಬ ಆಚರಿಸಿದರೆ ಹಬ್ಬಕ್ಕೆ ಒಂದು ಅರ್ಥ ಬರುತ್ತದೆ ಎಂದು ಹೇಳಿದರು.
ಒಟ್ಟಿಗೆ ಸೇರಿ ಆಚರಣೆ
"ಈ ಬಡ ಕುಟುಂಬಗಳು ಹಬ್ಬಗಳಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ದೀಪಾವಳಿ ಆಚರಿಸಲು ಅವರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಹಿಂದೂ,ಮುಸ್ಲಿಂ, ಕ್ರೈಸ್ತರು ಒಟ್ಟಿಗೆ ಸೇರಿ ದೀಪಾವಳಿ ಆಚರಿಸಿದ್ದೇವೆ" ಎಂದು ಜೀತೇಂದ್ರ ಫುರ್ಟಾಡೊ ತಿಳಿಸಿದರು.
ಸ್ಥಳೀಯರ ಆರೋಪ
ಕಳೆದ ಕೆಲವು ವರ್ಷಗಳಿಂದ ಉಡುಪಿ, ಮಂಗಳೂರು ಭಾಗಗಳಲ್ಲಿ ಕೊರಗ ಕುಟುಂಬದವರು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದು, ಈ ಬಗ್ಗೆ ಅಧಿಕಾರಿಗಳು, ಸಚಿವರು, ಜಿಲ್ಲಾಡಳಿತ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.