ಪದ್ಮಭೂಷಣ ವಿಜೇತ ವಿ.ಪಿ.ಧನಂಜಯನ್ ಗೆ 'ಆಳ್ವಾಸ್ ವಿರಾಸತ್' ಪ್ರಶಸ್ತಿ
ಮೂಡಬಿದಿರೆ, ಜನವರಿ. 06 : ಪದ್ಮವಿಭೂಷಣ ಪ್ರಶಸ್ತಿ ವಿಜೇತ ಭರತನಾಟ್ಯ ಪಟು ವಿ.ಪಿ. ಧನಂಜಯನ್ ಅವರು 'ಆಳ್ವಾಸ್ ವಿರಾಸತ್ '2017ರ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಜನವರಿ 13ರಿಂದ ಜ.15ರ ವರೆಗೆ ನಡೆಯಲಿರುವ ಆಳ್ವಾಸ್ ವಿರಾಸತ್ 2017' ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ವಿ.ಪಿ. ಧನಂಜಯನ್ ಅವರಿಗೆ 1ಲಕ್ಷ ರು. ನಗದು ಮತ್ತು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ವಿ.ಪಿ. ಧನಂಜಯನ್ ಹಿನ್ನಲೆ : 1939ರಲ್ಲಿ ಜನಿಸಿದ ವನ್ನಾಡಿಲ್ ಪುದಿಯವೀಟಿಲ್ ಧನಂಜಯನ್ ಅವರು ವಿ.ಪಿ. ಧನಂಜಯನ್ ಎಂದೇ ಖ್ಯಾತಿ ಪಡೆದಿದ್ದಾರೆ. ತಮ್ಮ ತಂದೆಯವರ ನಾಟಕ ತಂಡದಲ್ಲಿ ಧನಂಜಯನ್ ಊರೂರು ಅಲೆದು ನಾಟಕದಲ್ಲಿ ಬಣ್ಣಹಚ್ಚುತ್ತಿದ್ದರು.
ಮುಂದೆ ಮದ್ರಾಸಿನ ಕಲಾಕ್ಷೇತ್ರದ ನಿರ್ಮಾಪಕಿ ರುಕ್ಮಿಣೀದೇವಿ ಅವರ ಕಣ್ಣಿಗೆ ಬಿದ್ದ ಧನಂಜಯನ್ ಅವರ ಬದುಕಿನ ಮಾರ್ಗವೇ ಬದಲಾಯಿತು. ರುಕ್ಮಿಣೀದೇವಿ ಅವರ ಮಾರ್ಗದರ್ಶನದಲ್ಲಿ ಕಥಕ್ಕಳಿ ಮತ್ತು ಭರತನಾಟ್ಯದಲ್ಲಿ ಪಳಗಿ ಖ್ಯಾತ ಪುರುಷ ನೃತ್ಯಪಟುವಾಗಿ ಪ್ರಸಿದ್ಧರಾದರು.
ಖ್ಯಾತ ನೃತ್ಯಗಾರ್ತಿ ಶಾಂತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ವಿ.ಪಿ. ಧನಂಜಯನ್ ದಂಪತಿ ನೃತ್ಯಕ್ಷೇತ್ರದಲ್ಲಿ "ಧನಂಜಯನ್ಸ್' ಎಂದೇ ಖ್ಯಾತರಾಗಿದ್ದಾರೆ.
ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಭೂಷಣ ಸೇರಿದಂತೆ ಕೇರಳ, ತಮಿಳುನಾಡು ಸರಕಾರಗಳು ಹಾಗೂ ಅನೇಕ ಸಂಘ-ಸಂಸ್ಥೆಗಳು ನೀಡಿರುವ ಪ್ರಶಸ್ತಿ, ಗೌರವಗಳಿಗೆ ಇವರು ಪಾತ್ರರಾಗಿದ್ದಾರೆ.