ಬರಾವಲೋಕನ: ಕಾಣೆಯಾಗಿರೋ ಮಂಗಳೂರಿನ 64 ಕೆರೆ ಹುಡಿಕಿಕೊಡಿ ಪ್ಲೀಸ್!!
ಮಂಗಳೂರು, ಮಾರ್ಚ್ 25: ಬೇಸಿಗೆ ಶುರುವಾಗಿದೆ. ಕಡಲ ತೀರದಲ್ಲಿರುವ ಮಂಗಳೂರಿನಲ್ಲಿ ಅಗಾಧ ಧಗೆ ಶುರುವಾಗಿದೆ. ಎಲ್ಲೆಡೆಯೂ ನೀರಿನ ಹಾಹಾಕಾರವಿದೆ. ಮಂಗಳೂರು ನಗರ ವಾಸಿಗಳು ಮೂರೂ ದಿನಕ್ಕೊಮ್ಮೆ ಒಂದು ದಿನ ನೀರು ಬಳಸುವ ಪರಿಸ್ಥಿತಿ ಬಂದಿದೆ.
ಅಂದಹಾಗೆ, ಮಂಗಳೂರಿನಲ್ಲಿ 64 ಕೆರೆಗಳಿವೆ ಎಂದು ಹೇಳಲಾಗಿದೆ. ಆದರೆ, ಮಂಗಳೂರಿನಲ್ಲಿರುವ ನೀರಿನ ಬವಣೆ ನೋಡಿದರೆ, ಇದು ಇಷ್ಟು ಕೆರೆಗಳಿರುವ ಊರಿನಲ್ಲಿ ನೀರಿಗೇಕೆ ಬರ ಎಂದೆನಿಸಬಹುದು. ಇದೇ ವಿಚಾರದ ಬೆನ್ನು ಹತ್ತಿ ಕೆರೆಗಳನ್ನು ಹುಡುಕ ಹೊರಟರೆ ನಿಮಗೆ ನಿರಾಸೆಯಾಗುವುದಂತೂ ಗ್ಯಾರಂಟಿ.
ಏಕೆಂದರೆ ಹಾಗೆ ಹೊರಟರೆ ನಿಮಗೆ ಸಿಗುವುದು ಕೇವಲ 4 ಅಥವಾ 5 ಕೆರೆಗಳು ಮಾತ್ರ. ಅವಾದರೂ ನೀರಿನಿಂದ ಸಂಪದ್ಭರಿತವಾಗಿವಯೇ ಎಂದರೆ ಇಲ್ಲ ಎಂಬ ನಿರಾಶಾದಾಯಕ ಉತ್ತರವಷ್ಟೇ ಬರುತ್ತದೆ. ಹಾಗಾದರೆ, ಉಳಿದ ಕೆರೆಗಳೆಲ್ಲಿ? ಎಂಬ ಪ್ರಶ್ನೆಗೆ ಖುದ್ದು ಮಹಾನಗರ ಪಾಲಿಕೆಯಿಂದಲೂ ಸೂಕ್ತ ಉತ್ತರವಿಲ್ಲ!!
ಮಂಗಳೂರು ಮಹಾನಗರ ಪಾಲಿಕೆಯ ಲೆಕ್ಕಾಚಾರದಂತೆ ನಗರ ವ್ಯಾಪ್ತಿಯಲ್ಲಿ ೬೪ ಕೆರೆಗಳಿದ್ದಾವೆ. ಈ ಕೆರೆಗಳು ಎಲ್ಲಿ ಇದ್ದಾವೆ ಎಂಬುದನ್ನು ಮಾತ್ರ ಕೇಳುವಂತಿಲ್ಲ. ನಗರದ್ಲಲಿ ಈಗ ಕಾಣಿಸುತ್ತಿರುವುದು ೪ ಅಥವಾ ೫ ಕೆರೆಗಳು ಮಾತ್ರ ಅಂದರೆ ೬೦ ಕೆರೆಗಳು ಎಲ್ಲಿ ಮಾಯವಾದವು. ಕೆರೆಗಳು ಪ್ರಭಾವಿತರ ಕಟ್ಟಡದ ಅಡಿಯಲ್ಲಿ ಜೀವ ಬಿಟ್ಟಿವೆ. ನಗರದ ನಾಗರಿಕರು ಕೆರೆಗಳಿಗೆ ಮರು ಜೀವ ಒದಗಿಸಲು ಮುಂದಾಗಬೇಕಿದೆ.
ಮಂಗಳೂರು ನಗರದ ಸರಿಸುಮಾರು ೫ ಲಕ್ಷ ಜನ ಸಂಖ್ಯೆಗೆ ೧೦೦ ಎಂಎಲ್ ಡಿ ನೀರಿನ ಅವಶ್ಯಕತೆ ಇದೆ. ಕೆರೆ ಮತ್ತು ಬಾವಿಗಳನ್ನು ಸರಿಯಾಗಿ ನಿಭಾಯಿಸಿದ್ದಾದರೆ ಅರ್ಧದಷ್ಟು ನೀರು ಇಲ್ಲಿಯೇ ಸಿಗುತ್ತದೆ, ಬೇಸಿಗೆಯಲ್ಲಿ ಪರದಾಡುವುದು ತಪ್ಪುತ್ತದೆ. ಆದರೆ ಕೆರೆಗಳೇ ಮಾಯವಾದರೆ ನೀರು ಹುಡುಕುವುದು ಎಲ್ಲಿ?
ಮಂಗಳೂರು ನಗರದಲ್ಲಿ ಸಾವಿರದಷ್ಟು ಖಾಸಗಿ ಬಾವಿಗಳಿವೆ. ಆದರೆ ಅದರಲ್ಲಿ ಕುಡಿಯಲು ಯೋಗ್ಯವಾದ ನೀರು ಸಿಗುವ ಬಾವಿಗಳ ಸಂಖ್ಯೆ ೧೩೫ ಮಾತ್ರ. ಹಾಗಾದರೆ ಉಳಿದ ಬಾವಿಗಳ ನೀರು ಕುಡಿಯಲು ಯೋಗ್ಯವಲ್ಲ ಯಾಕೆ, ಯೋಗ್ಯವಾಗಿಸುವ ಹೊಣೆಗಾರಿಕೆ ಯಾರದು? ಇಂಥ ಪ್ರಶ್ನೆಗಳ ಬೆಂಬೆತ್ತಿ ಇರುವ ನೀರಿನ ಸದ್ಬಳಕೆ ಬಗ್ಗೆ ಯೋಚಿಸುವ ಆಡಳಿತಗಾರರು ಮಂಗಳೂರು ಮಹಾನಗರ ಪಾಲಿಕೆಗೆ ಬೇಕಾಗಿದ್ದಾರೆ.
ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಕಳೆದು ಹೋಗಿರುವ ೬೦ ಕೆರೆಗಳನ್ನು ಹುಡುಕುವ ಕೆಲಸ ಆರಂಭವಾಗಬೇಕು ಅತಿಕ್ರಮಣವಾಗಿದ್ದರೆ ತೆರವುಗೊಳಿಸುವ ಕಾರ್ಯ ಮಾಡಬೇಕು . ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಿದ್ದಲ್ಲಿ ನೀರಿನ ಸಮಸ್ಯೆ ಪರಿಹಾರವಾಗುವ ಲಕ್ಷಣಗಳನ್ನು ಕಾಣಬಹುದಾಗಿದೆ.