ಮೂಡಬಿದ್ರೆಯಲ್ಲಿ ಕೆಸರುಗದ್ದೆ ಕಂಬಳಕ್ಕೆ ಅಖಾಡ ಸಿದ್ಧ!
ಮೂಡಬಿದ್ರೆ, ಜನವರಿ 28: ದಕ್ಷಿಣ ಕನ್ನಡ ಮೂಡಬಿದ್ರೆಯ ಸ್ವರಾಜ್ ಮೈದಾನದಿಂದ- ಜೋಡಿಕೆರೆ ಗದ್ದೆಯವರೆಗೆ ಕಂಬಳಕ್ಕಾಗಿ ಪ್ರತಿಭಟನೆ ನಡೆಸಿ ನಂತರ ಸಾಂಕೇತಿಕವಾಗಿ ಕೋಣಗಳನ್ನು ಗದ್ದೆಗೆ ಇಳಿಸಲು ಅನೇಕ ಸಂಘಟನೆಗಳು, ಮುಖಂಡರು ಉತ್ಸಾಹ ಮೆರೆದಿದ್ದಾರೆ.
ಜಲ್ಲಿಕಟ್ಟಿನಿಂದ ಪ್ರಭಾವಿತರಾಗಿ ಕಂಬಳಕ್ಕಾಗಿ ರಾಜ್ಯಾದ್ಯಂತ ತೀವ್ರಗತಿಯಲ್ಲಿ ಪ್ರತಿಭಟನೆಗಳು ಆಗಿರುವ ಹಿನ್ನೆಲೆ ದಕ್ಷಿಣ ಕನ್ನಡದ ಮೂಡಬಿದ್ರೆಯ ಸ್ವರಾಜ್ ಮೈದಾನದಿಂದ - ಜೋಡಿಕೆರೆ ಗದ್ದೆಯವರೆಗೆ ಪ್ರತಿಭಟನೆ ನಡೆಯಲಿದೆ. ಸಾಂಕೇತಿಕವಾಗಿ ಕೋಣಗಳನ್ನು ಗದ್ದೆಗಳಿಗೆ ಇಳಿಸಿ ನ್ಯಾಯಾಲಯದ ಆದೇಶಕ್ಕೆ ಸೆಡ್ಡು ಹೊಡೆಯಲಿದ್ದಾರೆ. ಅಲ್ಲದೆ ಈ ಮೆರವಣಿಗೆಯಲ್ಲಿ ಅನೇಕ ಸಂಘಟನೆಗಳು, ಚಿತ್ರನಟರು, ರಾಜಕಾರಣಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಸಾಥ್ ನೀಡಲಿದ್ದಾರೆ.[ಕಂಬಳಕ್ಕಾಗಿ ಕರ್ನಾಟಕದಾದ್ಯಂತ ಏರುತ್ತಿದೆ ಕಾವು]
ಇಂದು(ಜ.28) ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಮೆರವಣಿಗೆಗಳು ನಡೆಯಲಿದ್ದು ಮಧ್ಯಾಹ್ನದ ನಂತರ ಕಂಬಳ ಸಾಂಕೇತಿಕ ಅಚರಣೆ ನಡೆಯಲಿದೆ ಎನ್ನಲಾಗಿದೆ. ಕಂಬಳಕ್ಕಾಗಿ ಕೆಸರಿನ ಗದ್ದೆಯನ್ನು ಸಿದ್ಧಗೊಳಿಸಲಾಗಿದೆ. ಕೋಣಗಳೂ ಸಿದ್ಧಗೊಂಡಿವೆ. ಜನರೂ, ಮುಖಂಡರು ತಮ್ಮ ಉತ್ಸಾಹವನ್ನು ಮೆರೆದಿದ್ದು, ಯಾವುದೇ ಕಾರಣಕ್ಕೂ ಕರಾವಳಿಯ ಸಾಂಪ್ರದಾಯಿಕ ಆಚರಣೆಯನ್ನು ನಿಲ್ಲಿಸುವುದಿಲ್ಲ ಎನ್ನುತ್ತಿದ್ದಾರೆ.[ಕಂಬಳ ಆಡುವವರಿಗೆ ಮಾನ ಮರ್ಯಾದೆ ಇಲ್ಲ: ಇಲ್ಲೊಂದು ಅಪಸ್ವರ]
ಇನ್ನು ನಿನ್ನೆ(ಜ.27) ರಂದು ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಕಂಬಳದ ಕಾವು ಮುಗಿಲು ಮುಟ್ಟಿತ್ತು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣ ಕ್ರೀಡೆ ಕಂಬಳಕ್ಕೆ ಸಹಕರಿಸುವುದಾಗಿ ತಿಳಿಸಿದ್ದರು. ಅಲ್ಲದೆ ಜಲ್ಲಿಕಟ್ಟು ಮಂಡಲಿಯೂ ಕರ್ನಾಟಕದ ಕಂಬಳಕ್ಕೆ ಸಹಾಯ ಹಸ್ತ ನೀಡಲು ಒಪ್ಪಿತ್ತು. ರಾಜಕೀಯ ಮುಖಂಡರೆಲ್ಲರೂ ಒಗ್ಗೂಡಿ ಸಮ್ಮತಿಸಿದ್ದರು. ಅದರೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮಾತ್ರ ಇದಕ್ಕೆ ಅಪಸ್ವರ ಹಾಡಿದ್ದರು.