ಎಎನ್ 32 ವಿಮಾನ ನಾಪತ್ತೆಯಾಗಿ ಒಂದು ತಿಂಗಳು
ಮಂಗಳೂರು, ಆಗಸ್ಟ್ 22 : ಭಾರತೀಯ ವಾಯುಸೇನೆಯ ಎಎನ್ 32 ವಿಮಾನ ನಾಪತ್ತೆಯಾಗಿ ಒಂದು ತಿಂಗಳು ಕಳೆದಿದೆ, ಇದುವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ವಿಮಾನದಲ್ಲಿದ್ದ ಗುರುವಾಯನಕೆರೆ ನಿವಾಸಿ, ಯೋಧ ಏಕನಾಥ ಶೆಟ್ಟಿ ಅವರ ಕುಟುಂಬ ದುಃಖದಲ್ಲಿ ಮುಳುಗಿದೆ.
ಚೆನ್ನೈಯಿಂದ ಪೋರ್ಟ್ ಬ್ಲೇರ್ಗೆ ತೆರಳುತ್ತಿದ್ದ ವಾಯುಸೇನೆಯ ಎಎನ್- 32 ವಿಮಾನ ಜುಲೈ 22ರಂದು ನಾಪತ್ತೆಯಾಗಿತ್ತು. ನಾಪತ್ತೆಯಾದ ವಿಮಾನದಲ್ಲಿದ್ದ ಏಕನಾಥ ಶೆಟ್ಟರ ಮನೆಯವರಿಗೆ ಸೇನೆಯ ಕಂಟ್ರೋಲ್ ರೂಂನಿಂದ ಶೋಧ ಕಾರ್ಯದ ವಿವರ ನೀಡಲಾಗುತ್ತಿದ್ದು, ಮಾಹಿತಿ ಕಲೆ ಹಾಕುತ್ತಿರುವುದಾಗಿ ಪ್ರತಿದಿನ ಕರೆಗಳು ಬರುತ್ತಿವೆಯೇ ಹೊರತು ಹೆಚ್ಚಿನ ವಿಚಾರ ಸಿಗುತ್ತಿಲ್ಲ.[ಏಕನಾಥ ಶೆಟ್ಟಿ ಸುರಕ್ಷಿತವಾಗಿ ಮರಳುವ ನಿರೀಕ್ಷೆಯಲ್ಲಿದೆ ಕುಟುಂಬ]
ಯಾವುದೇ ನಿಖರವಾದ ಮಾಹಿತಿಗಳು ಸಿಗದ ಕಾರಣ ಮನೆಯವರಿಗೂ ಒಂದು ರೀತಿಯ ತಳಮಳ, ಇನ್ನೂ ಹುಡುಕಾಟ ನಡೆಯುತ್ತಲೇ ಇದೆ. ಯೋಧ ಏಕನಾಥರ ಪತ್ನಿ, ಶಿಕ್ಷಕಿ ಜಯಂತಿ ಘಟನೆ ನಡೆದ ದಿನದಿಂದ ಶಾಲೆಗೆ ರಜೆ ಹಾಕಿದ್ದಾರೆ.[ಯೋಧ ಏಕನಾಥ ಶೆಟ್ಟಿ ಬಗ್ಗೆ ಸಿಗುತ್ತಿಲ್ಲ ಮಾಹಿತಿ]
ಮಕ್ಕಳಾದ ಅಕ್ಷಯ್ ಎಸ್ ಡಿಎಂ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಮಗಳು ಆಶಿತಾ ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ಅಂತಿಮ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲಾ, ಕಾಲೇಜಿಗೆ ರಜೆ ಹಾಕಿದ್ದರು. ಅವರಿಗೆ ಮನೆಯವರು ಧೈರ್ಯ ತುಂಬಿದ್ದು, ಇದೀಗ ಶಾಲೆಗೆ ಹೋಗಲಾರಂಭಿಸಿದ್ದಾರೆ.[29 ಜನರಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ]
'ಸೇನೆಯಿಂದ ಶೋಧದ ಬಗ್ಗೆ ಕರೆಗಳು ಬರುತ್ತಿವೆ. ಹೆಚ್ಚಿನ ಮಾಹಿತಿ ಏನು ಗೊತ್ತಾಗಿಲ್ಲ, ಏನಿದ್ದರೂ ಭರವಸೆ ಕಳೆದುಕೊಂಡಿಲ್ಲ' ಎಂದು ಯೋಧ ಏಕನಾಥ ಶೆಟ್ಟಿಯವರ ಪತ್ನಿ ಜಯಂತಿ ಹೇಳಿದ್ದಾರೆ.
ಯೋಧನ ಮನೆಗೆ ಭೇಟಿ ನೀಡಿದ್ದ ಕ್ಯಾ. ಗಣೇಶ್ ಕಾರ್ಣಿಕ್ ಅವರು ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಕೇಂದ್ರ ಸರ್ಕಾರ ಭರವಸೆಯ ಮಾತು ನೀಡಿದೆ. ಟೋಲ್ ಫ್ರೀ ದೂರವಾಣಿಯಿಂದ ಕರೆ ಮಾಡಿ ಶೋಧದ ಮಾಹಿತಿ ನೀಡುತ್ತಿದ್ದಾರೆ.