ಕೂಳೂರು ಹಳೆ ಸೇತುವೆ ಮುಂದಿನ ವಾರದಿಂದ ಬಂದ್: ಕಾರಣ ಇಲ್ಲಿದೆ ಓದಿ
ಮಂಗಳೂರು, ಅಕ್ಟೋಬರ್. 04: ಉಡುಪಿ-ಮಂಗಳೂರು ನಗರ ಸಂಪರ್ಕಿಸುವ ಮಂಗಳೂರು ಹೊರವಲಯದ ಪ್ರಮುಖ ಸೇತುವೆಯ ಮೇಲೆ ವಾಹನ ಸಂಚಾರ ನಿಷೇಧ ಆದೇಶ ಸದ್ಯದಲ್ಲೇ ಹೊರ ಬೀಳಲಿದ್ದು, ಮುಂದಿನ ವಾರದಿಂದಲೇ ಶಿಥಿಲಗೊಂಡಿರುವ ಕುಳೂರಿನ ಹಳೆ ಸೇತುವೆ ಬಂದ್ ಆಗಲಿದೆ.
ಮಂಗಳೂರಿನಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ- ಮಂಗಳೂರು ಮಧ್ಯೆ ಸಂಪರ್ಕ ಕೊಂಡಿಯಾಗಿರುವ ಕೂಳೂರು ಹಳೇ ಸೇತುವೆ ಮುಂದಿನ ವಾರದಿಂದ ವಾಹನ ಸಂಚಾರಕ್ಕೆ ಬಂದ್ ಆಗಲಿದೆ.
ಈ ಸೇತುವೆ ಅತ್ಯಧಿಕ ಘನವಾಹನ ಸಂಚಾರದಿಂದ ನಿರ್ವಹಣೆ ಇಲ್ಲದೆ ಕುಸಿದು ಬೀಳುವ ಹಂತ ತಲುಪಿದೆ. ಸೇತುವೆ ಮೇಲಿನ ರಸ್ತೆ ಕಿತ್ತುಹೋಗಿದ್ದು, ವಾಹನ ಚಾಲನೆ ಒಂದು ಸಾಹಸದಂತಾಗಿದೆ. ಈ ಹಿನ್ನೆಲೆಯಲ್ಲಿ ಹಳೇ ಸೇತುವೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬ ತಜ್ಞರು ಈಗ ವರದಿ ನೀಡಿದ್ದಾರೆ.
ದೇಶದಲ್ಲಿ ನಡೆದ ಸೇತುವೆ ಕುಸಿತ ದುರಂತ ನೆನಪುಗಳು
ವರದಿಯ ಪ್ರಕಾರ ಘನ ವಾಹನಗಳ ಸಂಚಾರ ಈ ಸೇತುವೆಯ ಮೇಲೆ ಕೂಡಲೇ ಸ್ಥಗಿತಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ದಕ್ಷಿಣ ಕನ್ನಡದ ಜಿಲ್ಲಾಡಳಿತಕ್ಕೆ ಈಗಾಗಲೇ ವರದಿ ನೀಡಿದ್ದಾರೆ. ವರದಿಯಲ್ಲೇನಿದೆ? ನೋಡೋಣ ಬನ್ನಿ...
ಸಂಚಾರಕ್ಕೆ ಯೋಗ್ಯವಲ್ಲ
ಭೂಸಾರಿಗೆ ಸಚಿವಾಲಯದ ಸೂಚನೆಯನ್ವಯ ಹೈದರಾಬಾದ್ನ ಆರ್ವಿ ಅಸೋಸಿಯೇಟ್ಸ್ ಎಂಬ ಖಾಸಗಿ ಸಂಸ್ಥೆ ಕೂಳೂರು ಸೇತುವೆ ಸ್ಥಿತಿ ಪರಿಶೀಲಿಸಿ ಪ್ರಯಾಣಕ್ಕೆ ಅಯೋಗ್ಯ ಎಂಬ ವರದಿ ನೀಡಿತ್ತು. ಬಳಿಕ, ಭಾರತ್ಮಾಲಾ ಯೋಜನೆ ಬಗ್ಗೆ ಸರ್ವೇ ನಡೆಸುತ್ತಿರುವ ತಜ್ಞರ ತಂಡ ಕೂಡ ಹಳೆಯ ಸೇತುವೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ವರದಿ ನೀಡಿದ್ದಾರೆ.
ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮುಂದಿನ ವಾರದಿಂದ ಸೇತುವೆ ಬಂದ್ ಮಾಡುವ ಬಗ್ಗೆ ಆದೇಶ ಹೊರಡಿಸಲಿದ್ದಾರೆ.
ಮುಳುಗುವ ಭೀತಿಯಲ್ಲಿ ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ
ಲಘು ವಾಹನ ಸಂಚರಿಸಬಹುದು
ಕೂಳೂರು ಹಳೆ ಸೇತುವೆಯಲ್ಲಿ ಎಲ್ಲ ಘನ ವಾಹನಗಳ ಸಂಚಾರ ಶೀಘ್ರದಲ್ಲೇ ಸ್ಥಗಿತಗೊಳಲಿದೆ. ಹಳೇ ಸೇತುವೆಯಲ್ಲಿ ಘನವಾಹನ ಮಾತ್ರ ನಿರ್ಬಂಧ ಹೇರಲಾಗುವುದು ಆದರೆ ಲಘುವಾಹನ, ದ್ವಿಚಕ್ರ ವಾಹನಕ್ಕೆ ಸಂಚರಿಸುವುದಕ್ಕೆ ಅಡ್ಡಿಯಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವರದಿಯಲ್ಲಿ ತಿಳಿಸಿದೆ.
ಇಟಲಿ: ಮೇಲ್ಸೇತುವೆ ಕುಸಿದು 39 ಮಂದಿ ಸಾವು
ಭಾರೀ ಸಮಸ್ಯೆಗಳು ಸೃಷ್ಟಿ
ಹಳೇ ಸೇತುವೆಯ ಮೇಲೆ ವಾಹನ ಸಂಚಾರ ನಿರ್ಬಂಧವಾಗುತ್ತಿದ್ದಂತೆ ಮಂಗಳೂರು ಹೊರವಲಯದಲ್ಲಿ ವಾಹನ ಸಂಚಾರದ ಭಾರೀ ಸಮಸ್ಯೆಗಳು ಸೃಷ್ಟಿಯಾಗಲಿವೆ. ಉಡುಪಿ ಕಡೆಯಿಂದ ಬರುವ ವಾಹನಗಳು ಕುದುರೆಮುಖ ಕ್ರಾಸ್ ಬಳಿ ಬಲಕ್ಕೆ ತಿರುಗಿ ಹಳೇ ಸೇತುವೆಯ ಪಕ್ಕದಲ್ಲೇ ಇರುವ ಹೊಸ ಸೇತುವೆಯಲ್ಲಿ ಸಾಗಲು ಆವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಈ ರಸ್ತೆಯಲ್ಲಿ ಮುಂದೆ ಅಯ್ಯಪ್ಪ ದೇವಸ್ಥಾನ ಸಮೀಪ ಎಡಕ್ಕೆ ತಿರುಗಿ ಫ್ಲೈಓವರ್ ಮೇಲ್ಭಾಗಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
66 ವರ್ಷಗಳ ಇತಿಹಾಸ
ಶಿಥಿಲಾವಸ್ಥೆಯಲ್ಲಿ ಇರುವ ಈ ಕೂಳೂರು ಸೇತುವೆಗೆ 66 ವರ್ಷಗಳ ಇತಿಹಾಸವಿದೆ. 1952ರ ಸೆಪ್ಟೆಂಬರ್.21ರಂದು ಕೂಳೂರು ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡಿತ್ತು. 66 ವರ್ಷದ ಹಿಂದೆ 600 ಅಡಿ ಉದ್ದದ ಈ ಸೇತುವೆಯನ್ನು ಮದ್ರಾಸ್ ಪ್ರಾಂತ್ಯದ ಸಾರ್ವಜನಿಕ ಕಾರ್ಯ ವಿಭಾಗದ ಸಚಿವ ಎನ್.ರಂಗರೆಡ್ಡಿ ಉದ್ಘಾಟಿಸಿದ್ದರು.